ಹರಿಚಿತ್ತ ಫೌಂಡೇಶನ್‌ ನಿಂದ ಪೌರಕಾರ್ಮಿಕರಿಗೊಂದು ನಮನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪೌರಕಾರ್ಮಿಕರ ನಗರ ಸ್ವಚ್ಚತೆಯ ಜತೆಗೆ ತಮ್ಮಆರೋಗ್ಯದ ಕಡೆ ಗಮನ ನೀಡಬೇಕು ಎಂದು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಬುಧವಾರ ಹರಿಚಿತ್ತ ಫೌಂಡೇಶನ್‌ ನಿಂದ ಆಯೋಜಿಸಿದ್ದ ಪೌರಕಾರ್ಮಿಕರಿಗೊಂದು ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪೌರಕಾರ್ಮಿಕರಿಗೆ ನಗರಸಭೆಯಿಂದ ವರ್ಷಕ್ಕೆ 2 ಬಾರಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತಿದೆ. ಹರಿಚಿತ್ತ ಫೌಂಡೇಶನ್‌ ಸಹ ಶಿಬಿರ ಹಮ್ಮಿಕೊಂಡಿರುವುದು ಸಂತೋಷದ ವಿಷಯ ಎಂದರು.

ಪ್ರತಿದಿನ ಬೆಳಗ್ಗೆ 5 ರಿಂದ ತಮ್ಮ ಕೆಲಸ ಪ್ರಾರಂಭಿಸಿ ನಗರ ಸ್ವಚ್ಚತೆ ಕಾಪಾಡಲು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.


ನಗರವನ್ನು ಸ್ವಚ್ಛ, ಸುಂದರ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರಕಾರ್ಮಿಕರು ತಮ್ಮ ಕರ್ತವ್ಯದ ಜತೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿದ್ದಾರೆ ಎಂದು ಶ್ಲಾಘಿಸಿದರು.

ಡಾ. ಮೊಹನ್ ಮಾತನಾಡಿ, ಪೌರಕಾರ್ಮಿಕರು, ಕೆಮ್ಮು, ಶೀತ, ಉಸಿರಾಟ ಸಮಸ್ಯೆ ತಡೆಗಟ್ಟಲು ಬೀಡಿ, ಸಿಗರೇಟ್ ನಂತಹ ದುರಭ್ಯಾಸ ತ್ಯಜಿಸುವುದು ಅಗತ್ಯ. ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಿ, ಡಾಕ್ಟರ್, ಎಂಜಿನಿಯರ್, ಕಮಿಷನರ್ ನಂತಹ ಉನ್ನತ ಸ್ಥಾನ ಪಡೆಯಲು ಶ್ರಮಿಸಿದಾಗ ಕುಟುಂಬ ಸಮಾಜದ ಮುನ್ನಲೆಗೆ ಬರಲು ಸಾಧ್ಯಎಂದು ಕಿವಿಮಾತು ಹೇಳಿದರು.

ಹರಿಚಿತ್ತ ಫೌಂಡೇಶನ್‌ ಅಧ್ಯಕ್ಷೆ ಚೈತ್ರ ಹರೀಶ್ ಮಾತನಾಡಿ, ಪೌರಕಾರ್ಮಿಕರು ನಮ್ಮಆರೋಗ್ಯದ ಕಾವಲುಗಾರರು ಹಾಗೂ ದೇಶದ ಬೆನ್ನೆಲುಬು ಸಹ ಆಗಿದ್ದಾರೆ. ಅವರಿಗೆ ಉಚಿತ ಆರೋಗ್ಯತಪಾಸಣೆ, ಸಂಗೀತ ಹಾಗೂ ನೃತ್ಯ ರಸದೌತಣ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.ಈ ವೇಳೆ ಪೌರಕಾರ್ಮಿಕರಿಗೆ ಪುಷ್ವಾರ್ಚನೆ ಮಾಡಿ ಸನ್ಮಾನಿಸಲಾಯಿತು. ಹರಿಚಿತ್ತ ಫೌಂಡೇಶನ್ ಸಂಸ್ಥಾಪಕ ಹರೀಶ್, ನಗರಸಭೆ ಉಪಾಧ್ಯಕ್ಷೆ ಲಲಿತಾನಾಯ್ಕ್, ಡಾ. ದೀಪಕ್‌ ಆರಾಧ್ಯ,ಡಾ. ಪೊನ್ನೂಪ, ಬಿಜೆಪಿ ಮುಖಂಡ ದೀಪಕ್‌ ದೊಡ್ಡಯ್ಯ, ಜೆಸಿಐ ಅಧ್ಯಕ್ಷ ತಿಲಕ್‌ ಉಪಸ್ಥಿತರಿದ್ದರು.