ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿದಲ್ಲಿ ನಾವು ಖರೀದಿಸಿದ ವಸ್ತುವಿಗೆ ಗ್ರಾಹಕರಾಗುತ್ತೇವೆ. ಖರೀದಿಸಿದ ವಸ್ತು ನಿಖರತೆಯಿಂದ ಕೂಡಿರಬೇಕು. ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ ಹೇಳಿದರು.ನಗರದ ಅಂಜುಮನ್ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಅಂಜುಮನ್ ಕಾನೂನು ಮಹಾವಿದ್ಯಾಲಯ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷಾ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ಜಿಲ್ಲಾ ಮಾಹಿತಿ ಕೇಂದ್ರ ನ್ಯೂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗ್ರಾಹಕರೇ ರಾಜರು ಗ್ರಾಹಕರೇ ದೇವರು ಎಂಬ ಘೋಷ ವಾಕ್ಯದಡಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕುರಿತು ಗ್ರಾಹಕ ನ್ಯಾಯದಲ್ಲಿ ವರ್ಚುವಲ್ ಅಹವಾಲು ಆಲಿಸುವಿಕೆ ಮತ್ತು ಡಿಜಿಟಲ್ ಪ್ರವೇಶಾವಕಾಶ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಹಾರ ಸುರಕ್ಷತಾ ಅಧಿಕಾರಿ ಆರ್.ಎಸ್.ಬಿರಾದಾರ ಮಾತನಾಡಿ, ಪ್ರತಿಯೊಬ್ಬ ಸಾರ್ವಜನಿಕರು ವಿತರಣೆ ಹಾಗೂ ಪಡೆದುಕೊಳ್ಳುವ ಕಾರ್ಯದಲ್ಲಿ ತೊಡಗಿರುತ್ತಾರೆ. ನಮಗೆ ಇಷ್ಟ ಬಂದ ವಸ್ತುಗಳನ್ನು ಪಡೆದುಕೊಳ್ಳುವ ಹಕ್ಕು ನಮಗಿದೆ. ಯಾವುದೇ ವಸ್ತುಗಳನ್ನು ಖರೀದಿಸುವ ಮುಂಚೆ ಇಲಾಖೆಗಳ ಮಾಡದಂಡಗಳನ್ನು ಗಮನದಲ್ಲಿಟ್ಟು ಖರೀದಿಸಬೇಕು. ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಕಲಬೆರಿಕೆಯಿಂದ ಕೂಡಿದ ವಸ್ತುಗಳನ್ನು ಖರೀದಿಸಬೇಡಿ. ಒಂದು ವೇಳೆ ವಿತರಕರು ಹಕ್ಕುಗಳನ್ನು ಮೀರಿ ವರ್ತಿಸಿದಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ಪ್ರಕರಣಗಳನ್ನು ಇತ್ಯರ್ಥ ಪಡೆದಿಕೊಳ್ಳಬಹುದು ಎಂದರು.ಬಳಕೆದಾರರ ಸಂಘದ ಅಧ್ಯಕ್ಷ ಎಂ.ಜಿ.ಮಠಪತಿ ಮಾತನಾಡಿ, ಕೋವಿಡ್ ಸಮಯದಲ್ಲಿ ಆರಂಭವಾದ ಡಿಜಿಟಲ್ ವ್ಯವಹಾರ ದೇಶದ ಆರ್ಥಿಕತೆಗೆ ಬಹಳ ಅನುಕೂಲವಾಗಿದೆ. ವರ್ಚುವಲ್ ಮೂಲಕ ಕೋರ್ಟ್ಗಳಲ್ಲಿ ವಿಡಿಯೋ ಸಂವಾದಗಳ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತಿದೆ. ಇದರಿಂದ ಸಾಕಷ್ಟು ಸಮಯ ಅಲೆದಾಡುವುದನ್ನು ಕೂಡ ತಪ್ಪಿಸಬಹುದಾಗಿದೆ. ಆನ್ಲೈನ್ ಹಾಗೂ ವರ್ಚುವಲ್ ಮೂಲಕ ವ್ಯವಹರಿಸುವಾಗ ಬಹಳ ಎಚ್ಚರಿಕೆಯಿಂದ ವಸ್ತುಗಳನ್ನು ಖರೀದಿಸಬೇಕು. ಇದರಲ್ಲಿಯೂ ಮೋಸ, ವಂಚನೆಗಳು ಕಂಡು ಬಂದಿದ್ದು, ಆದ್ದರಿಂದ ಗ್ರಾಹಕರು ಎಚ್ಚರ ವಹಿಸುವಂತೆ ತಿಳಿಸಿದರು.
ಜಿಲ್ಲಾ ಗ್ರಾಹಕರ ದೂರು ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷೆ ವಿದ್ಯಾ ಗಲಗಲಿ ಮಾತನಾಡಿ, ಗ್ರಾಹಕರು ಅನೇಕ ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ಎದುರಿಸುತ್ತಿದ್ದು, ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸುವ ಸಲುವಾಗಿ, ಗ್ರಾಹಕ ಸಂರಕ್ಷಣಾ ಕಾಯ್ದೆ ೧೯೮೬ ಅನ್ನು ೨೪ ಡಿ.೧೯೮೬ ರಂದು ಜಾರಿಗೊಳಿಸಿದೆ. ಇದರೊಂದಿಗೆ ಗ್ರಾಹಕರಿಗೆ ಮೂಲಭೂತ ಸೌಕರ್ಯಗಳು ಹಾಗೂ ತರಬೇತಿ ಅತ್ಯವಶ್ಯವಾಗಿವೆ ಎಂದರು.ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ವಿನಯಕುಮಾರ ಪಾಟೀಲ್, ಹಾಗೂ ವ್ಯವಸ್ಥಾಪಕರಾದ ಅಮರೇಶ ತಾಂಡೂರ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷರ ಎಸ್.ಎಂ.ಕರೇಕಲ್, ಅಂಜುಮನ್ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸಂತೋಷ ನಾಗಠಾಣ, ಅಧಿಕಾರಿಗಳಾದ ಸಿ.ಎಸ್.ಚಿತ್ತಾಪುರ, ವಿಜಯಕುಮಾರ ಗುಮಶೆಟ್ಟಿ, ಎನ್.ಎಂ.ಅತ್ತಾರ, ಮಲ್ಲಿಕಾರ್ಜುನ ಅರಕೇರಿ, ನಾಮದೇವ ಚವ್ಹಾಣ ಮುಂತಾದವರು ಇದ್ದರು.
ಕೋಟ್ನಾವು ಪಡೆಯುವ ಸೇವೆಗಳು ನಮಗೆ ತೃಪ್ತಿ ನೀಡಬೇಕು. ದೋಷಪೂರಿತ ಸರಕುಗಳು, ಸೇವೆಗಳಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಯಂತಹ ವಿವಿಧ ರೀತಿಯ ಶೋಷಣೆಗಳ ವಿರುದ್ಧ ಗ್ರಾಹಕರಿಗೆ ರಕ್ಷಣೆ ಒದಗಿಸುವುದು ಗ್ರಾಹಕ ಸಂರಕ್ಷಣಾ ಕಾಯಿದೆಯ ಉದ್ದೇಶ. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಈ ದಿನ ಆಚರಿಸಲಾಗುತ್ತದೆ. ವಂಚನೆ, ಬ್ಲಾಕ್ ಮಾರ್ಕೆಟಿಂಗ್ ಇತ್ಯಾದಿಗಳಿಗೆ ಬಲಿಯಾಗಿದ್ದರೆ ಅಂತವರು ದೂರು ನೀಡಬಹುದು.
ಅರವಿಂದ ಹಾಗರಗಿ, ಹಿರಿಯ ಸಿವಿಲ್ ನ್ಯಾಯಾಧೀಶ