ಕೊಡಗಿನ ಸಮರ್ಥ ಕನ್ನಡಿಗರು ಸಂಸ್ಥೆಯ ಘಟಕದಿಂದ ಮಕ್ಕಳ ಕಥಾ ಕಮ್ಮಟ ಸಿದ್ದಾಪುರದಲ್ಲಿ ಇತ್ತೀಚೆಗೆ ನಡೆಯಿತು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕೊಡಗಿನ ಸಮರ್ಥ ಕನ್ನಡಿಗರು ಸಂಸ್ಥೆಯ ಘಟಕದಿಂದ ಮಕ್ಕಳ ಕಥಾ ಕಮ್ಮಟ ಸಿದ್ದಾಪುರದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ, ಮಕ್ಕಳನ್ನು ನಾವು ಬೆಳೆಸುತ್ತೇವೆ. ಏಕಕಾಲದಲ್ಲಿ ಮಕ್ಕಳು ನಮ್ಮನ್ನೂ ಬೆಳೆಸುತ್ತಾರೆ. ಮಕ್ಕಳನ್ನು ಅವರವರ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿ ಬೆಳೆಸುವುದೇ ನಿಜವಾದ ಶಿಸ್ತು ಎಂದರು. ಪೊಲೀಸ್ ವೃತ್ತ ನಿರೀಕ್ಷಕ ಚಂದ್ರಶೇಖರ್ ಮಾತನಾಡಿ ಎಳೆಯ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ ಅಭಿಮಾನ ಬೆಳೆಸುತ್ತಿರುವ ಬಳಗದ ಕೆಲಸ ಪ್ರಶಂಸಾರ್ಹ ಎಂದರು.ಡಾ. ಶಿಲ್ಪಾ ಸತೀಶ್ ಮಾತನಾಡಿ ಮನುಷ್ಯನ ಮೆದುಳಿನ ಬೆಳವಣಿಗೆಯ ಶೇ. ತೊಂಬತ್ತರಷ್ಟು ಭಾಗ ಆರು ವರ್ಷದ ಒಳಗೇ ಆಗುತ್ತದೆ. ಇಂತಹ ಕಥಾ ಕಮ್ಮಟಗಳು ಮಕ್ಕಳಲ್ಲಿ ಧನಾತ್ಮಕ ಚಿಂತನೆ ಮೂಡಿಸಲು ಸಹಕಾರಿ. ಹಿರಿಯರು ಮಕ್ಕಳಿಗೆ ಕಥೆ ಹೇಳುವ ರೂಢಿಯನ್ನು ಉಳಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಜಯಲಕ್ಷ್ಮಿ ಮಾತನಾಡಿ ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ಹೆಚ್ಚಿಸಿ, ಭಾಷಾ ಕೌಶಲ್ಯವನ್ನು ಬೆಳೆಸಿ, ಏಕಾಗ್ರತೆ ಮತ್ತು ನೆನಪಿನ ಶಕ್ತಿಯ ವೃದ್ಧಿಯೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಲು ಕಥೆ ಹೇಳುವ ಮತ್ತು ಕಥೆ ಕೇಳುವ ಕಾರ್ಯಕ್ರಮ ಬಹಳ ಸಹಕಾರಿ ಎಂದರು.
ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ವಿರಾಜಪೇಟೆ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ನಾ ಕನ್ನಡಿಗ ಮಾತನಾಡಿದರು.ಮಕ್ಕಳೇ ನಿರೂಪಣೆ ಮಾಡುವ ಮೂಲಕ ತಮ್ಮ ವಾಕ್ಚಾತುರ್ಯವನ್ನು ಮಕ್ಕಳು ಪ್ರದರ್ಶಿಸಿದರು. ತೀರ್ಪುಗಾರರಾಗಿ ಲೇಖಕಿಯರಾದ ಸಹನಾ ಕಾಂತಬೈಲು, ರಾಧಿಕಾ ವಿಶ್ವನಾಥ್ ಹಾಗೂ ವಿಜಯಲಕ್ಷ್ಮಿ ಮತ್ತು ಶಶಿಕಿರಣ ಪಾಲ್ಗೊಂಡಿದ್ದರು. ಒಟ್ಟು ಎಪ್ಪತ್ತಾರು ಮಂದಿ ಪುಟಾಣಿಗಳು ಕಥೆ ಹೇಳುವ ಕಮ್ಮಟದಲ್ಲಿ ಪಾಲ್ಗೊಂಡಿದ್ದರು.