ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ಸಮಾಜದಲ್ಲಿ ಹಿಂದುಳಿದ ಸರ್ವರಿಗೂ ಸಮಾನತೆ ಕಲ್ಪಿಸಿರುವ ಡಾ.ಬಾಬಾಸಾಹೇಬರನ್ನು ಕೇವಲ ಪರಿಶಿಷ್ಟರಿಗೆ ನಾಯಕನೆಂದು ಬಿಂಬಿಸುವುದು ಸರಿಯಲ್ಲ. ರಾಷ್ಟ್ರದ ಮಹಾನ ನಾಯಕರನ್ನು ಅವರವರ ಜಾತಿಗಳಿಗೆ ಮಾತ್ರ ನಾಯಕರೆಂದು ಘೋಷಣೆ ಮಾಡುವ ಸಂಕುಚಿತ ಭಾವನೆಯಿಂದ ಹೊರಬರಬೇಕು ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.ಪುರಸಭೆಯ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸರ್ಕಾರ ನಡೆಸುವ ಸಂದರ್ಭದಲ್ಲಿ ಹಿಂದುಳಿದ ಜನರ ಕಲ್ಯಾಣಕ್ಕೆ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಚುನಾವಣೆಯಲ್ಲಿ ಮಹಿಳೆಯರಿಗೂ ಕೂಡಾ ಶೇ.50 ಮೀಸಲಾತಿ ಜಾರಿಗೆ ಬರುತ್ತಿದ್ದು, ಮನೆಯಲ್ಲಿನ ಮಹಿಳೆಯರಿಗೆ ನಾಯಕತ್ವದ ಗುಣ ಬೆಳೆಸಲು ಸಹಕಾರ ನೀಡುವ ಮೂಲಕ ಅವರು ಮುಖ್ಯ ವಾಹಿನಿಗೆ ಬರುವಂತೆ ಪ್ರೋತ್ಸಾಹ ನೀಡಲು ತಿಳಿಸಿದರು.ಜಮಖಂಡಿಯ ಸಾಮಾಜಿಕ ಹೋರಾಟಗಾರ ಮಹಾಲಿಂಗಪ್ಪ ಅಲಬಾಳ ಮಾತನಾಡಿ, ಅಂಬೇಡ್ಕರ್ ಕೇವಲ ಪರಿಶಿಷ್ಟ ಜನಾಂಗದವರಿಗೆ ಮಾತ್ರ ಮೀಸಲಾತಿಗೆ ಹೋರಾಟ ಮಾಡಲಿಲ್ಲ, ಸಮಾಜದಲ್ಲಿ ಎಲ್ಲ ವರ್ಗದ ಜನರ ಜೊತೆಯಲ್ಲಿ ವಿಶೇಷವಾಗಿ ಮಹಿಳೆಯರ ಮೀಸಲಾತಿಗೆ ಹೋರಾಟ ಮಾಡಿದ ಫಲವೇ ಇಂದು ಎಲ್ಲರೂ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದೇವೆ ಎಂದು ವಿವರಿಸಿದರು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನ ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಿವೈಎಸ್ಪಿ ಚಿದಂಬರ ಮಡಿವಾಳರ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ಇದ್ದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ ಪತ್ತಾರ ಸ್ವಾಗತಿಸಿದರು. ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವಿ.ಎಸ್.ಹಿರೇಮಠ ನಿರೂಪಿಸಿ, ವಂದಿಸಿದರು.ಭಾರತದ ಶ್ರೇಷ್ಠ ಸಂವಿಧಾನ ಬದಲಾವಣೆಯ ಮಾತನಾಡುವ ಜನರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಶಿಕ್ಷೆ ನೀಡಿದ್ದು, ಮುಂದೆ ಕೂಡಾ ನಿಮ್ಮನ್ನು ನಿರ್ಲಕ್ಷ್ಯ ಮಾಡುವ ಜನರಿಗೆ ಸರಿಯಾದ ಪಾಠ ಕಲಿಸಬೇಕು.
-ಅಶೋಕ ಪಟ್ಟಣ, ಸರ್ಕಾರದ ಮುಖ್ಯಸಚೇತಕ.