ಸಾರಾಂಶ
ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಯ್ದುಕೊಳ್ಳಬೇಕು. ಎನ್ನೆಸ್ಸೆಸ್ ಬದುಕಿನ ಮೌಲ್ಯಮಾಪನ ಮಾಡಲಿದೆ
ಧಾರವಾಡ: ಜಗತ್ತಿನಲ್ಲಿ ನೀರಿಗಾಗಿ ಯುದ್ಧ ನಡೆದರೂ ಅಚ್ಚರಿ ಏನಿಲ್ಲ. ಇಂತಹ ಸಂದಿಗ್ಧತೆಯಲ್ಲಿ ನೀರಿನ ಸದ್ಬಳಕೆ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ ಎನ್ನೆಸ್ಸೆಸ್ ಶಿಬಿರಾರ್ಥಿಗಳ ಕಾರ್ಯ ಕಲಕೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಐ.ಸಜ್ಜನ ಶ್ಲಾಘಿಸಿದರು.
ಕವಿವಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕಲಕೇರಿ ಗ್ರಾಪಂ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಪದವಿ-ಸ್ನಾತಕೋತ್ತರ ಅಧ್ಯಯನ ಕೇಂದ್ರ ದೇವಗಿರಿ ಗ್ರಾಮದಲ್ಲಿ ನಡೆಸಿದ ಎನ್ನೆಸ್ಸೆಸ್ ಶಿಬಿರದ ಸಮಾರೋಪ ಭಾಷಣ ಮಾಡಿದರು.ಗ್ರಾಪಂ ಸದಸ್ಯ ಸೋಮಲಿಂಗ ದುರ್ಗಾಯಿ, ಶಿವಾಜಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರಾರ್ಥಿಗಳು ಏಳು ದಿನಗಳು ನಮ್ಮೂರಲ್ಲಿ ಶ್ರದ್ಧೆಯಿಂದ ಉತ್ತಮ ಕೆಲಸ ಮಾಡಿದ್ದು ಸಂತಸ ತಂದಿದೆ. ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಗ್ರಾಮಸ್ಥ ಗೌಸುಸಾಬ್ ಧಾರವಾಡ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಯ್ದುಕೊಳ್ಳಬೇಕು. ಎನ್ನೆಸ್ಸೆಸ್ ಬದುಕಿನ ಮೌಲ್ಯಮಾಪನ ಮಾಡಲಿದೆ. ಜೀವದ ಪಾಠ ಹೇಳಿಕೊಡುತ್ತದೆ. ಈ ಸಂಸ್ಕೃತಿ ಅಳವಡಿಸಿಕೊಳ್ಳುವಂತೆ ಹೇಳಿದರು.ದೇವಗಿರಿ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಧಾನ ಗುರು ಬಿ.ಎಸ್. ಪಾಟೀಲ ಮಾತನಾಡಿ, ಎನ್ನೆಸ್ಸೆಸ್ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯ ಪಾಲನೆ ಜತೆಗೆ ನೈರ್ಮಲ್ಯ, ಕೃಷಿ ಬದುಕು ಹಾಗೂ ಶ್ರಮ ಸಂಸ್ಕೃತಿ ಕೂಡ ಕಲಿಸುತ್ತದೆ ಎಂದರು.
ಪ್ರಾಚಾರ್ಯ ಎಂ.ಎಸ್. ಗಾಣಿಗೇರ ಮಾತನಾಡಿದರು. ಪ್ರವೀಣ ಉಳ್ಳಿಗೇರಿ ಏಳು ದಿನದ ವರದಿ ವಾಚಿಸಿದರು. ಗ್ರಾಪಂ ಸದಸ್ಯ ಸುನೀಲ ದುರ್ಗಾಯಿ, ಸೋಮಲಿಂಗ ದುರ್ಗಾಯಿ, ಪ್ರಧಾನ ಗುರು ಬಿ.ಎಸ್. ಪಾಟೀಲ, ಬಾಬಣ್ಣ ಪಾಗೋಜಿ ಹಾಗೂ ಸೋಮಲಿಂಗ ವೆಂಕಮ್ಮನವರ, ನಂದೀಶ ಕಡಕೋಳ, ಮಂಜುನಾಥ ವಾಲ್ಮೀಕಿ, ಅಜ್ಜನಗೌಡ ಮೂಲಿಮನಿ ಮತ್ತಿತರರು ಇದ್ದರು.