ಸಾರಾಂಶ
ದೊಡ್ಡಬಳ್ಳಾಪುರ: ಉತ್ತಮ ಗುಣಮಟ್ಟದ ಶಿಕ್ಷಣ ಕಾಪಾಡಿಕೊಳ್ಳಲು ಮೂಲ ಸೌಕರ್ಯಗಳು ಅವಶ್ಯಕತೆ ಇದ್ದು , ಪಿಎಂಶ್ರೀ ಶಾಲೆಯಾಗಿ ಆಯ್ಕೆಯಾಗಿರುವ ಕಾರಣ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಪಡೆದುಕೊಂಡು ಉತ್ತಮ ಶಿಕ್ಷಣ ನೀಡಬಹುದು ಎಂದು ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಕೆಂಪಯ್ಯ ಹೇಳಿದರು.
ನಗರದಲ್ಲಿ ಪಿಎಂಶ್ರೀ ಶಾಲೆಯಾಗಿ ಆಯ್ಕೆಯಾದ ರೋಜಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ ಗುಂಡಮಗೆರೆ ಶಾಲೆಯು ಪಿಎಂಶ್ರೀಗೆ ಆಯ್ಕೆಯಾಗಿದ್ದು, ಈಗ ನಗರ ವ್ಯಾಪ್ತಿಯ ಶಾಲೆಯೊಂದು ಆಯ್ಕೆಯಾಗಿರುವುದು ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.ರಾಜ್ಯ ಸರ್ಕಾರದ ಜತೆ ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು ಈ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದು ಹಾಗೂ ಗುಣಮಟ್ಟದ ಶಿಕ್ಷಣವನ್ನ ಕಲ್ಪಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಖಾಸಗಿ ಶಾಲೆಗಳ ಜತೆ ಸರ್ಕಾರಿ ಶಾಲೆಗಳು ಸ್ಥಳೀಯವಾಗಿ ಹೆಚ್ಚು ಬೆಳವಣಿಗೆ ಕಾಣಬೇಕಾಗಿದೆ. ಆ ನಿಟ್ಟಿನಲ್ಲಿ ನಾವು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಸಹಕಾರ ಮತ್ತು ಉತ್ತಮ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೈಯಿದಾ ಅನೀಸ್ ಮಾತನಾಡಿ, ಸರ್ಕಾರಗಳು ಕನ್ನಡ ಶಾಲೆಗಳ ಕಡೆ ಹೆಚ್ಚು ಗಮನಹರಿಸಬೇಕಾಗಿದ್ದು, ಇಂದು ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಶಿಕ್ಷಣ ಕೊಡುವುದು ತಮ್ಮೆಲ್ಲರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು ಪರಿಪೂರ್ಣವಾಗಿ ಶಿಕ್ಷಣ ನೀಡಬೇಕಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಬರುವುದಷ್ಟೇ ಅಲ್ಲದೆ ಶಿಕ್ಷಕರಿಂದ ಪಾಠ ಪ್ರವಚನಗಳು, ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಂಡು ತಮ್ಮ ಉನ್ನತ ವ್ಯಾಸಂಗಕ್ಕೆ ಅಡಿಪಾಯ ಹಾಕಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ತಂದೆ ತಾಯಿಗಳು ಸರ್ಕಾರಿ ಶಾಲೆಗಳ ಕಡೆ ಮಕ್ಕಳನ್ನು ಕಳಿಸಿಕೊಡುವ ವ್ಯವಸ್ಥೆ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.ನಗರಸಭೆ ಸದಸ್ಯೆ ರಜನಿಸುಬ್ರಹ್ಮಣ್ಯ ಮಾತನಾಡಿ, ನಗರದ ರೋಜಿಪುರ ಸರ್ಕಾರಿ ಶಾಲೆಯು ಪಿಎಂಶ್ರೀ ಶಾಲೆಗೆ ಆಯ್ಕೆಯಾಗಿದ್ದು ಇದರಿಂದ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಪಡೆದು ವಿದ್ಯಾರ್ಥಿಗಳಿಗೆ ಪರಿಪೂರ್ಣವಾಗಿ ಶಿಕ್ಷಣ ನೀಡಬಹುದು ಇದು ನಮ್ಮ ತಾಲೂಕಿಗೆ ಹೆಮ್ಮೆಯ ಸಂಗತಿ ಎಂದರು.
ಸದರಿ ಸಾಲಿನಲ್ಲಿ ನಿರ್ಮಿಸಲಾದ ಎಲ್ಕೆಜಿ ಮತ್ತು ಯುಕೆಜಿ ವರ್ಣರಂಜಿತ ತರಗತಿಯ ನೂತನ ಕಟ್ಟಡವನ್ನು ಗಣ್ಯರು ಉದ್ಘಾಟನೆ ಮಾಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತರಾಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಜೈಕುಮಾರ್, ಮುಖ್ಯ ಶಿಕ್ಷಕ ಬಿ ಶ್ರೀನಿವಾಸ್, ಶಿಕ್ಷಕರಾದ ಮಲ್ಲಿಕಾರ್ಜುನ್ ರೆಡ್ಡಿ , ಆಂಜಿನಪ್ಪ ಹಾಗೂ ಎಸ್ ಟಿ ಎಂ ಸಿ ಅಧ್ಯಕ್ಷರು, ಸಂಪನ್ಮೂಲ ವ್ಯಕ್ತಿಗಳು, ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
22ಕೆಡಿಬಿಪಿ3-ದೊಡ್ಡಬಳ್ಳಾಪುರದ ರೋಜಿಪುರ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಪಿಎಂಶ್ರೀ ಯೋಜನೆಯನ್ನು ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಕೆಂಪಯ್ಯ ಉದ್ಘಾಟಿಸಿದರು. ಬಿಇಒ ಸೈಯಿದಾ ಅನೀಸ್, ಮುಖ್ಯ ಶಿಕ್ಷಕ ಬಿ ಶ್ರೀನಿವಾಸ್ ಇತರರಿದ್ದರು.