ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಲಿಯುವ ದಿನಗಳಲ್ಲಿ ಕಲಿಕೆಯ ಬಗೆಗಿನ ಆಸಕ್ತಿ ಬತ್ತದಿರಲಿ. ಉದಾಸೀನತೆ ಎಂದಿಗೂ ಹತ್ತಿರ ಬಾರದಂತೆ ನೋಡಿಕೊಳ್ಳಿ. ಕಾರಣ ಉದಾಸೀನವೇ ಕಲಿಕೆಗೆ ದೊಡ್ಡ ಶತ್ರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ತಿಳಿಸಿದರು.ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ದಿ ಗೋಲ್ಡನ್ ಗ್ಲೀಮ್ಸ್ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ನೀವು ಜೀವನದ ಅತ್ಯಂತ ಪ್ರಮುಖ ಹಂತಕ್ಕೆ ಕಾಲಿಟ್ಟಿದ್ದೀರಿ. ಈಗ ಕಲಿಯುವ ದಿನಗಳು ಕಲಿಕೆಯ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಳ್ಳಿ, ಓದುವುದು ಹವ್ಯಾಸವಾದಲ್ಲಿ ನಿಮ್ಮ ಭವಿಷ್ಯ ಬಂಗಾರದಂತಾಗುತ್ತದೆ ಎಂದರು.
ನಿರಂತರ ಓದುಗ ಸಾಧಕಯಾರು ನಿರಂತರ ಓದುಗ ರಾಗಿರುತ್ತಾರೋ ಅವರು ಸಾಧಕರಾಗುತ್ತಾರೆ. ಕಲಿಯುವ ಮನೋಭಾವದಿಂದಲೇ ನಿಮ್ಮಲ್ಲಿ ನಾಯಕತ್ವ ಗುಣಗಳು ಮೂಡಿ ಬರುತ್ತವೆ. ಜೀವನದಲ್ಲಿ ಯಶಸ್ಸು ಸಾಧಿಸಲು ಅಪಾರ ಅವಕಾಶಗಳಿವೆ. ಆದರೆ ಅವನ್ನು ಸದುಪಯೋಗಪಡಿಸಿಕೊಳ್ಳಲು ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪ ಅಗತ್ಯ ಎಂದರು.
ಅಂಕಗಳೊಂದಿಗೆ ವೈಚಾರಿಕತೆಯನ್ನು ಬೆಳೆಸಿಕೊಳ್ಳಿ. ಒಳ್ಳೆಯ ಸ್ನೇಹಿತರೊಂದಿಗೆ ಬೆಳೆದು, ಸಾಧಕರ ಆದರ್ಶಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆಯಬಹುದು. ವಿದ್ಯೆ ಅತಿ ದೊಡ್ಡ ಶಕ್ತಿ. ಅದನ್ನು ಎಂದಿಗೂ ಕೈಬಿಡಬೇಡಿ ವಿದ್ಯೆಯನ್ನು ಹಿಡಿದುಕೊಂಡರೆ ಜೀವನವೇ ಹೂವಿನ ಹಾಸಿಗೆಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.ತಾಳ್ಮೆ, ಧೈರ್ಯ ಬೆಳೆಸಿಕೊಳ್ಳಿಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸಿ.ಎಂ. ಮುನಿಕೃಷ್ಣ ಮಾತನಾಡಿ, ಇಂದಿನ ವಿದ್ಯಾರ್ಥಿ ಗಳು ಸಣ್ಣಸಣ್ಣ ಸಮಸ್ಯೆಗಳ ಎದುರಿಸಲಾಗದೆ ನಿರಾಶೆಗೆ ಒಳಗಾಗಿ ಜೀವನದ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ತಪ್ಪು ಕೆಲಸ ಮಾಡುತ್ತಿದ್ದಾರೆ. ಎಷ್ಟೇ ದೊಡ್ಡ ಸಮಸ್ಯೆಯಾದರೂ ಕಾಲಕ್ರಮೇಣ ಸರಿಯಾಗುತ್ತದೆ. ತಾಳ್ಮೆ ಮತ್ತು ಧೈರ್ಯದಿಂದ ಬದುಕನ್ನು ಎದುರಿಸಬೇಕು. ದುಡಿಕಿನ ನಿರ್ಧಾರಗಳು ಜೀವನವನ್ನು ಕತ್ತಲೆಯತ್ತ ಎಳೆದುಕೊಂಡು ಹೋಗುತ್ತವೆ. ಎಂದು ತಿಳಿಸಿದರು. ಓದುವ ದಿನಗಳಲ್ಲಿ ಕೇವಲ ಅಧ್ಯಯನದತ್ತ ಗಮನ ಹರಿಸಿ ಸಮಯಪ್ರಜ್ಞೆ ಅತ್ಯಂತ ಮುಖ್ಯ. ಕಾಲೇಜಿನಲ್ಲಿ ಕಲಿಯುವ ಪ್ರತಿಯೊಂದು ಕ್ಷಣವನ್ನು ಅರ್ಥಪೂರ್ಣವಾಗಿಸಿಕೊಳ್ಳಿ. ಯಾರು ಹೆಚ್ಚು ಸಮಯ ಓದಿಗೆ ಮೀಸಲಿಡುತ್ತೀರೋ ಅಷ್ಟೇ ಸುಲಭವಾಗಿ ವಿದ್ಯೆ ಅಂಟುತ್ತದೆ. ಕಲಿಕೆಯ ಈ ಅವಧಿ ಮರುಕಳಿಸುವುದಿಲ್ಲ,ಆದ್ದರಿಂದ ವ್ಯರ್ಥ ಮಾಡಬಾರದು. ಇಂದು ಶಿಕ್ಷಣ ಪಡೆಯಲು ಅನೇಕ ಅವಕಾಶಗಳು ಲಭ್ಯವಿದ್ದರೂ, ಸಮಯ ವ್ಯರ್ಥ ಮಾಡಿದರೆ ಆ ಅವಕಾಶವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ನಂಬಿಕೆಯೇ ಬದುಕು:ಪೋಷಕರು ತಮ್ಮ ಮಕ್ಕಳ ವಿದ್ಯಾ ಭ್ಯಾಸಕ್ಕಾಗಿ ಸಾಲಸೋಲ ಮಾಡಿಕೊಂಡು ಬಡತನವನ್ನೂ ಸಹಿಸುತ್ತಾರೆ. ಅವರ ತ್ಯಾಗ ವನ್ನು ಗೌರವಿಸುವುದು ನಿಮ್ಮ ಧರ್ಮ.ನೀವು ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು.‘ನಾನು ಚೆನ್ನಾಗಿ ಓದಿ ಸಾಧಿಸಬೇಕು’ ಎಂಬ ನಂಬಿಕೆಯಿಂದ ಬದುಕನ್ನು ರೂಪಿಸಿಕೊಳ್ಳಿ. ಅದೇ ನಿಮ್ಮ ಬಾಳಿನ ನಿಜವಾದ ಗುರಿ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಉಪಸ್ಥಿತರ ಮನಗೆದ್ದಿತು. ಅತಿಥಿಗಳ ಪ್ರೇರಣಾ ದಾಯಕ ಸಂದೇಶಗನ್ನು ನೀಡಿದರು.