ಸಾರಾಂಶ
ಜ್ಯೋತಿಗೌಡನಪುರದ ಲುಂಬಿನಿ ಬುದ್ಧ ವಿಹಾರದಲ್ಲಿ ಸಾಮೂಹಿಕ ಬುದ್ಧವಂದನೆ ಸಲ್ಲಿಸಿ ಭೀಮ ಜ್ಯೋತಿ ರ್ಯಾಲಿಗೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಪರಿ ನಿರ್ವಾಣದ ಅಂಗವಾಗಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಆಯೋಜಿಸಿರುವ ಭೀಮಜ್ಯೋತಿ ರ್ಯಾಲಿಗೆ ಕೊಳ್ಳೇಗಾಲದ ಜೇತವನದ ಬೌದ್ಧ ಭಿಕ್ಕು ಸುಗತಪಾಲ ಚಾಲನೆ ನೀಡಿದರು. ಜ್ಯೋತಿಗೌಡನಪುರದ ಜಿಲ್ಲೆಯ ಮೊಟ್ಟಮೊದಲ ಲುಂಬಿನಿ ಬುದ್ಧ ವಿಹಾರದಲ್ಲಿ ಸಾಮೂಹಿಕ ಬುದ್ಧವಂದನೆ ಸಲ್ಲಿಸಿ, ಚಾಲನೆಗೊಂಡ ಭೀಮ ಜ್ಯೋತಿ ರ್ಯಾಲಿ ನಾಗವಳ್ಳಿ, ಚಂದಕವಾಡಿ, ದಡದಹಳ್ಳಿ, ಹೆಬ್ಬಸೂರು, ಸಿದ್ಧಯ್ಯನಪುರ, ಕೋಡಿಉಗನೆ, ಮಲಯ್ಯನಪುರ, ಯಡಪುರ, ರಾಮಸಮುದ್ರದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿ ಸಾರನಾಥ ಬೌದ್ಧ ವಿಹಾರದಲ್ಲಿ ಮುಕ್ತಾಯಗೊಂಡಿತು.ಭೀಮ ಜ್ಯೋತಿ ರ್ಯಾಲಿಗೆ ಚಾಲನೆ ನೀಡಿದ ಬೌದ್ಧಭಿಕ್ಕು ಸುಗತಪಾಲ ಮಾತನಾಡಿ, ಬುದ್ಧ, ಅಂಬೇಡ್ಕರ್ ಅವರ ಸಂದೇಶಗಳ ಅರಿವು ಮೂಡಿಸಲು ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಶಾಖೆ ಆಯೋಜಿಸಿರುವ ಭೀಮ ಜ್ಯೋತಿ ರ್ಯಾಲಿಯು ಪ್ರತಿ ಗ್ರಾಮಗಳಿಗೂ ತೆರಳಿ ಪ್ರತಿ ಮನೆಗೂ ಪಸರಿಸಲಿ. ಬುದ್ಧ ಧಮ್ಮವನ್ನು ಹಳ್ಳಿಹಳ್ಳಿಗೂ ಮುಟ್ಟಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಆರ್. ಬಸವರಾಜು ಮಾತನಾಡಿ, ಬುದ್ಧ, ಅಂಬೇಡ್ಕರ್ ಅವರ ಆಶಯಗಳನ್ನು ಜಿಲ್ಲೆಯ ಲುಂಬಿನಿ ಬುದ್ಧವಿಹಾರದಿಂದಲೇ ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಭೀಮ ಜ್ಯೋತಿ ರ್ಯಾಲಿ ಹಮ್ಮಿಕೊಂಡಿದ್ದು, ಇಲ್ಲಿಂದ ನಾಗವಳ್ಳಿ, ಚಂದಕವಾಡಿ, ದಡದಹಳ್ಳಿ, ಸಿದ್ದಯ್ಯನಪುರ, ಕೋಡಿಉಗನೆ, ಮಲ್ಲಯ್ಯನಪುರ, ಯಡಪುರ, ರಾಮಸಮುದ್ರ, ಸಾರನಾಥ ಬೌದ್ಧ ವಿಹಾರಕ್ಕೆ ಸಂಜೆ ತೆರಳಿ ಮುಕ್ತಾಯಗೊಳ್ಳಲಿದೆ ಎಂದರು.
ಈ ವೇಳೆ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕ್, ಉಮೇಶ್, ನಿವೃತ ಪ್ರಾಂಶುಪಾಲ ಶಿವಣ್ಣ, ಕಾರ್ಯದರ್ಶಿ ನಂಜುಂಡಯ್ಯ ಜ್ಯೋತಿಗೌಡನಪುರದ ಯಜಮಾನರಾದ ಕೇಶವಮೂರ್ತಿ, ಸಿದ್ದಯ್ಯ, ಕೆಂಪ, ಮಾದಯ್ಯನವರ ಕುಟುಂಬ ವರ್ಗ ಹಾಗೂ ಭಾರತೀಯ ಬೌದ್ಧ ಮಹಾಸಭಾದ ಪದಾಧಿಕಾರಿಗಳು ಹಾಜರಿದ್ದರು.