ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹಾನ್ ಮೇಧಾವಿಗಳ ಸತತ ಅಧ್ಯಯನ, ಚರ್ಚೆಗಳ ಅವಿರತ ಶ್ರಮದ ಫಲವಾಗಿ ಭಾರತ ಸಂವಿಧಾನ ರಚನೆಗೊಂಡು ದೇಶದೊಳಗಿದ್ದ ಎಲ್ಲ ರಾಜ್ಯಗಳು, ಸಂಸ್ಥಾನಗಳು ವಿಲೀನಗೊಂಡು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಏಕ ಸಂವಿಧಾನದಡಿ ಬೃಹತ್ ಗಣತಂತ್ರವಾಗಿ ಹೊರಹೊಮ್ಮಿದ ದೇಶ ಭಾರತ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತ್ಯಾಗ, ಬಲಿದಾನ, ಪ್ರಾಣಾರ್ಪಣೆ ಮಾಡಿದ ಅಸಂಖ್ಯಾತ ದೇಶ ಭಕ್ತರನ್ನು, ರಾಷ್ಟ್ರಪೀತ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ವಲ್ಲಭಭಾಯಿ ಪಟೇಲ, ಲಾಲ ಬಹಾದ್ದೂರ ಶಾಸ್ತ್ರಿ, ಬಾಬು ರಾಜೇಂದ್ರ ಪ್ರಸಾದ ಮುಂತಾದ ಮಹಾನ್ ಮೇಧಾವಿಗಳನ್ನು ನೆನಪಿಸಬೇಕಾಗುತ್ತದೆ. ಇದು ನಮ್ಮೆಲ್ಲರ ಕರ್ತವ್ಯ ಕೂಡಾ ಆಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ನಮ್ಮ ಸರಕಾರ ಬದ್ಧತೆ ಸ್ಪಷ್ಟಪಡಿಸಿದೆ. ಇದರಿಂದ ಮುಳುಗಡೆಯಾಗುವ ಸುಮಾರು 73 ಸಾವಿರ ಎಕರೆ ಭೂಮಿಯನ್ನು ಕನ್ಸೆಂಟ್ ಅವಾರ್ಡನ ಮೂಲಕ ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಾಡಿಕೆಗಿಂತ ಹೆಚ್ಚಿನ ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ತೀವ್ರ ಹಾನಿಗೊಳಗಾಗಿದ್ದು, ಇವುಗಳ ಸುಧಾರಣೆಗಾಗಿ ಪ್ರತಿ ಮತಕ್ಷೇತ್ರಕ್ಕೆ ತಲಾ ₹10 ಕೋಟಿಯಂತೆ ಜಿಲ್ಲೆಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.ಪ್ರಸಕ್ತ ಸಾಲಿಗೆ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವ ವಿತರಣೆ ಮಾಡಲಾಗಿದೆ. ಬಾಗಲಕೋಟೆ ತೋಟಗಾರಿಕೆ ಬೆಳೆಗೆ ಹೆಸರುವಾಸಿಯಾಗಿದ್ದು, ದ್ರಾಕ್ಷಿ, ದಾಳಿಂಬೆ, ಅರಿಶಿಣ, ಮೆಣಸಿನಕಾಯಿ ಹಾಗೂ ಬಾಳೆ ಬೆಳೆಗೆ ಹೆಚ್ಚಿನ ಬೇಡಿಕೆ ಇದೆ. ಒಟ್ಟು 34,100 ಮೆಟ್ರಿಕ್ ಟನ್ ತೋಟಗಾರಿಕೆ ಉತ್ಪನ್ನಗಳು ವಿವಿಧ ರಾಜ್ಯ ಹಾಗೂ ವಿದೇಶಕ್ಕೂ ರಪ್ತು ಮಾಡಲಾಗಿದೆ. ವಿವಿಧ ಸಾಮಾಜಿಕ ಭದ್ರತೆ ಯೋಜನೆಯಡಿ 2.55 ಲಕ್ಷ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ತನ್ನ ಮಾರಾಟದ ಜಾಲವನ್ನು ನೆರೆಯ ಮಹಾರಾಷ್ಟ್ರ ರಾಜ್ಯಕ್ಕೂ ವಿಸ್ತರಿಸಿದೆ ಎಂದು ತಿಳಿಸಿದರು.
ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯಡಿ ಒಟ್ಟು ಪ್ರಯಾಣಿಕರಲ್ಲಿ ಶೇ.62 ಪ್ರಯಾಣಿಕರು ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಶೇ.96.49 ರಷ್ಟು ಲಾಭ ಪಡೆಯುತ್ತಿದ್ದರೆ. ಗೃಹಲಕ್ಷ್ಮೀ ಯೋಜನೆಯಡಿ ಶೇ.94.81 ರಷ್ಟು ಲಾಭ ಪಡೆಯುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ ಒಟ್ಟು 4,20,514 ಜನ ನೋಂದಾಯಿಸಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಯುವನಿಧಿ ಯೋಜನೆಯಡಿ ಪದವೀಧರರು 7637, ಡಿಪ್ಲೊಮಾ 91 ಸೇರಿ ಒಟ್ಟು 7729 ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳುತ್ತಿದಾರೆ ಎಂದರು.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 34.94ಲಕ್ಷ ಮಾನವದಿನ ಸೃಜಿಸಿ ₹153.05 ಕೋಟಿ ಖರ್ಚು ಭರಿಸಲಾಗಿರುತ್ತದೆ. ದೀನ್ ದಯಾಳ ಅಂತ್ಯೋದಯ ಯೋಜನೆಯಡಿ 3322 ಸ್ವ-ಸಹಾಯ ಸಂಘಗಳಿಗೆ ₹3621.00 ಲಕ್ಷಗಳ ಸಮುದಾಯ ಬಂಡವಾಳ ನಿಧಿಯನ್ನು ಜೀವನೋಪಾಯ ಚಟುವಟಿಕೆಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ 800 ಗ್ರಾಮೀಣ ನಿರುದ್ಯೋಗ ಯುವಕ, ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಸ್ವ-ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವೈ.ಮೇಟಿ, ವಿಪ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ್ ಕುರೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್ ಅಮರೇಶ ಪಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಪಥಸಂಚಲನ ತಂಡಗಳಿಗೆ ಬಹುಮಾನ:
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಥಸಂಚಲನ ಮಾಡಿದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಎನ್.ಸಿ.ಸಿ ಸಿನೀಯರ್ ಡಿವಿಜನ್ 37 ಕರ್ನಾಟಕ ಬಟಾಲಿಯನ್ ಬಾಗಲಕೋಟೆ (ಪ್ರಥಮ), ಬಾಲಕಿಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ (ದ್ವಿತೀಯ) ಹಾಗೂ ಆದರ್ಶ ವಿದ್ಯಾಲಯ ನವನಗರ, ಬಾಗಲಕೋಟೆ (ತೃತೀಯ).ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಲಾಯಪ್ಪಗೌಡ ನಾಯ್ಕರ (ಭಾರತೀಯ ಸೇನೆ), ಬಸಪ್ಪ ಗಿರಿಗಾವಿ, ಈಶ್ವರ ಕರಬಸವನವರ (ಕೃಷಿ), ಚಂದ್ರಲಿಂಗಪ್ಪ ಬಸರಕೋಡ (ವೀರಗಾಸೆ), ಬಸವರಾಜ ದಾವಣಗೆರೆ (ಶಿಕ್ಷಣ, ಸಮಾಜಸೇವೆ), ಮೌನೇಶ ಬಡಿಗೇರ (ಶಿಲ್ಪಕಲೆ), ಪರಶುರಾಮ ಬಿಸನಾಳ, ಡಾ.ವಿಜಯಮಹಾಂತೇಶ ಮಲಗಿಹಾಳ (ಸಮಾಜ ಸೇವೆ), ಮಲ್ಲಿಕಾರ್ಜುನ ಯರಗೇರಿ (ಜನಪದ ಸಂಗೀತ), ಭರತ ಮಧರಖಂಡಿ, ರೂಪಶ್ರೀ ಕಲಾದಗಿ (ಅಂಗಾಂಗದಾನ), ಡಾ.ಬಸವರಾಜ ಗವಿಮಠ (ಲಲಿತಕಲಾ ಸೇವೆ), ವೈಷ್ಣವಿ ಬಾದವಾಡಗಿ, ಪೂರ್ವಿ ಸಿದ್ದವಗೋಳ, ರಾಮಕೃಷ್ಣ ದಾಸರ (ಕ್ರೀಡೆ), ವಿಲಾಸ್ ಯಣ್ಣಿ (ಸಂಗೀತ), ಹನುಮಪ್ಪ ಕೆಸರಪೆಂಟಿ, ನಿಂಗಪ್ಪ ಕಲ್ಲಪ್ಪ (ಭಜನೆ), ರಾಘವೇಂದ್ರ ನೀಲನ್ನವರ (ಯೋಗ), ಸಲೀಮ ಕೊಪ್ಪದ, ವಿಶ್ವಜ ಕಾಡದೇವರ, ಲಿಂಗರಾಜ ಚಿನಿವಾಲರ (ಪತ್ರಕರ್ತರು), ತಿಪ್ಪಣ್ಣ ಚಲವಾದಿ (ಸಂಪಾದಕರು).