ಹಿರೇಕೆರೂರು: ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಸ್ವಚ್ಛತಾ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಅತ್ಯಮೂಲ್ಯ ಸೇವೆ ಸಲ್ಲಿಸುವಂತಹ ಕಾರ್ಮಿಕರ ಆರೋಗ್ಯ ಕಾಪಾಡುವುದು ಸಹ ನಮ್ಮ ಜವಾಬ್ದಾರಿಯಾಗಿದೆ. ಪೌರ ಕಾರ್ಮಿಕರು ಆರೋಗ್ಯವಾಗಿದ್ದಾಗಲೇ ನಗರವೂ ಆರೋಗ್ಯಕರವಾಗಿರಲು ಸಾಧ್ಯ ಎಂದು ಪಟ್ಟಣದ ಪಂಚಾಯತ ಮುಖ್ಯಾಧಿಕಾರಿ ಕೋಡಿ ಭಿಮರಾಯ ಎನ್. ಟಿ. ಹೇಳಿದರು. ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.ಪಟ್ಟಣ ಪಂಚಾಯತಿಯ ಸಮುದಾಯ ಸಂಘಟನಾಧಿಕಾರಿ ಸಿ.ಎಮ್. ಪುಟ್ಟಕ್ಕಳವರ ಮಾತನಾಡಿ, ನಗರವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಡಲು ಕಾರ್ಮಿಕರ ಕಾರ್ಯ ಮತ್ತು ಶ್ರಮ ಪ್ರಮುಖವಾಗಿದೆ. ಅವರ ಸೇವೆ ಅತ್ಯಂತ ಅರ್ಥಪೂರ್ಣವಾಗಿದೆ. ಅವರ ಶ್ರಮಕ್ಕೆ ನಾವು ಬೆಲೆ ಕೊಟ್ಟಾಗಲೇ ಪಟ್ಟಣವನ್ನು ಸ್ವಚ್ಛ ಸುಂದರವಾಗಲು ಸಾಧ್ಯ ಎಂದರು.ಪಟ್ಟಣಕ್ಕೆ ಮಾದರಿಯಾಗುವಂತಹ ಕಾರ್ಯವನ್ನು ನಿರ್ವಹಿಸುತ್ತಿರುವ ಮಹಿಳಾ ಪೌರ ಕಾರ್ಮಿಕರಿಗೆ ಮತ್ತು ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ನಡೆಸಿದ ಸಿಬ್ಬಂದಿಗಳಿಗೆ ಸನ್ಮಾನವನ್ನು ಮಾಡಲಾಯಿತು .

ಪಟ್ಟಣದ ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ. ಶಿವಾ ವೈ. ಎನ್ . ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿ ಮಂಗಳಾ ಚಕ್ರಸಾಲಿ, ಎಸ್.ಎಮ್. ಕರಿಮಖಾನ್, ಶೋಭಾ , ರಮೇಶ ಮಾಳಗಿ, ಅನಸೂಯಾ ಬಾಳಂಬೀಡ, ಪ್ರೇಮಿಲವ್ವ, ಮಂಜುಳಾ, ರೇಣುಕಮ್ಮ ಮತ್ತು ಇತರರು

ಇದ್ದರು.