ಕುಷ್ಟಗಿ: ಮಾರುಕಟ್ಟೆಯಲ್ಲಿ ಖರೀದಿಸುವ ಪ್ರತಿಯೊಂದು ವಸ್ತುಗಳಿಗೆ ರಸೀದಿ ಪಡೆಯಬೇಕಾಗಿರುವದು ಪ್ರತಿಯೊಬ್ಬ ಗ್ರಾಹಕರ ಹಕ್ಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಹೇಳಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ತಾಲೂಕಾಡಳಿತದ ಸಹಯೋಗದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನೂ ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವ್ಯಾಪಾರಿಗಳು ದರದಲ್ಲಿ ಮೋಸ, ತೂಕದಲ್ಲಿ ಮೋಸ,ಗುಣಮಟ್ಟದಲ್ಲಿ ಮೋಸ ನಡೆಯುತ್ತಿದ್ದು, ಈ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಗ್ರಾಹಕರು ತಾವು ಖರೀದಿಸಿದ ವಸ್ತುವಿಗೆ ಕಡ್ಡಾಯವಾಗಿ ರಸೀದಿ ಪಡೆಯಬೇಕು ಎಂದರು.

ಗ್ರಾಹಕರು ಖರೀದಿಸಿದ ವಸ್ತುವಿನಿಂದ ಮೋಸ ಹೋದಲ್ಲಿ ನ್ಯಾಯ ಪಡೆಯುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿರುವ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಮೋಸದ ವಿರುದ್ಧ ಹೋರಾಟ ನಡೆಸಿ ನ್ಯಾಯ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಪ್ರಸಕ್ತ ದಿನಮಾನಗಳಲ್ಲಿ ಹೆಚ್ಚಾಗಿ ಆನ್ ಲೈನ್ ವ್ಯವಹಾರ ಸೃಷ್ಟಿಯಾಗಿದ್ದು, ಸಣ್ಣ ಲಾಭಕ್ಕಾಗಿ ದೊಡ್ಡ ಮೋಸಕ್ಕೆ ಬಲಿಯಾಗಬಾರದು ಪ್ರತಿಯೊಂದು ವಸ್ತುಗಳ ಖರೀದಿ ಮಾಡುವ ಸಮಯದಲ್ಲಿ ಅದರ ಗುಣಮಟ್ಟ ಅರಿತುಕೊಳ್ಳಬೇಕು ಎಂದರು.


ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಪ್ರತಿಯೊಬ್ಬ ಗ್ರಾಹಕರು ಯಾವುದೆ ವಸ್ತು ಖರೀದಿ ಮಾಡುವ ಮೊದಲು ಆ ವಸ್ತುವಿನ ಗುಣಮಟ್ಟ, ಬೆಲೆ , ಕೊನೆಯ ದಿನಾಂಕ ಸೇರಿದಂತೆ ವಿವಿಧ ಮಾನದಂಡ ಪರಿಶೀಲಿಸಿ ವಸ್ತುವಿನ ಖರೀದಿಗೆ ಮುಂದಾಗಬೇಕು ಇಲ್ಲವಾದಲ್ಲಿ ಮೋಸ ಹೋಗಬೇಕಾಗುತ್ತದೆ ಒಂದು ವೇಳೆ ವಸ್ತು ಖರೀದಿಯಲ್ಲಿ ಮೋಸ ಹೋದಲ್ಲಿ ಸಮೀಪದ ಕಾನೂನು ಸೇವಾ ಸಮಿತಿಯವರಿಗೆ ಭೇಟಿ ಮಾಡುವ ಮೂಲಕ ಕಾನೂನು ಸಲಹೆ ಪಡೆದುಕೊಂಡು ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ನ್ಯಾಯ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಪ್ಯಾನಲ್ ವಕೀಲ ಎಸ್.ಎನ್.ನಾಯಕ,ಗ್ರಾಹಕರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ಇಂದಿರಾ ಸುಹಾಸಿನಿ, ಆಹಾರ ನಿರೀಕ್ಷಕ ರಮೇಶ ತಾಳಕೇರಿ, ವಕೀಲರ ಸಂಘದ ಅಧ್ಯಕ್ಷ ಪದಾಧಿಕಾರಿಗಳು,ಗ್ರಾಹಕರು ಹಾಗೂ ಸಾರ್ವಜನಿಕರು, ಇಲಾಖೆ ಸಿಬ್ಬಂದಿಗಳು ಇದ್ದರು.