ಮುಳಗುಂದ ಸಮೀಪದ ನಾಗಾವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಚೇತನ ಚಟುವಟಿಕೆಯ ಜಾನಪದ ಸಿರಿ ಕಾರ್ಯಕ್ರಮದಲ್ಲಿ ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಪಾಲ್ಗೊಂಡಿದ್ದರು.
ಮುಳಗುಂದ: ಜಾನಪದ ಸಂಸ್ಕೃತಿಯನ್ನು ಮಕ್ಕಳಲ್ಲಿ ಉಳಿಸಿ ಬೆಳೆಸುವುದು ಬಹುಮುಖ್ಯವಾಗಿದೆ ಎಂದು ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಹೇಳಿದರು.
ಸಮೀಪದ ನಾಗಾವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಪಂ ಮತ್ತು ಗದಗ ತಾಪಂ, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಸಚೇತನ ಚಟುವಟಿಕೆಯ ಜಾನಪದ ಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಜನಪದ ಕಲೆಗಳು ಮೊಬೈಲ್ಗಳಲ್ಲಿ ಮಾತ್ರ ಪ್ರದರ್ಶನವಾಗುವ ಕಾಲವಾಗಿದೆ. ಆದರೆ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಕ್ಕಳ ಮೂಲಕ ಆಯೋಜಿಸುವುದು ಸೃಜನಶೀಲ ಚಟುವಟಿಕೆಯಾಗಿದೆ ಎಂದರು.ತಾಪಂ ಮಾಜಿ ಅಧ್ಯಕ್ಷ ಬಿ.ಆರ್. ದೇವರಡ್ಡಿ ಮಾತನಾಡಿ, ನೈಜ ಜಾನಪದ ಕಲೆಗಳನ್ನು ನಿತ್ಯ ಜೀವನದಲ್ಲಿ ಬದುಕಿರುವುದು ಹಳ್ಳಿಗಳಲ್ಲಿ ಮಾತ್ರ ಎಂದರು.
ಉಪನಿರ್ದೇಕ ಆರ್.ಎಸ್. ಬುರುಡಿ ಮಾತನಾಡಿ, ಇಂದಿನ ಜಾನಪದ ಸಿರಿ ಮಕ್ಕಳಿಗೆ ನಮ್ಮ ನೆಲದ ಸಂಪ್ರದಾಯಗಳನ್ನು ಅರ್ಥ ಮಾಡಿಸುವಲ್ಲಿ ಸಹಕಾರಿಯಾಯಿತು. ಜನಪದ ಸಂಸ್ಕಾರಗಳು ನಮ್ಮ ಪೂರ್ವಜರ ಬದುಕಿನ ಸಾಕ್ಷಿಗಳಾಗಿವೆ. ಶಾಲಾ ಪಠ್ಯ ಚಟುವಟಿಕೆಗಿಂತ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆ ಸೃಜನಶೀಲತೆಯನ್ನು ಹೆಚ್ಚಿಸಲು ಜಾನಪದ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಮೀಣ ಸೊಗಡಿನ ಆಚರಣೆಗಳು, ಕಸುಬುಗಳು ಮತ್ತು ಕಲೆಗಳು ಜನಪದರ ಜೀವನಾಡಿಗಳಾಗಿವೆ ಎಂದು ಹೇಳಿದರು.ಈ ವೇಳೆ ಜಿ.ಎಲ್. ಬಾರಟಕ್ಕೆ, ಬಿಇಒ ವಿ.ವಿ. ನಡುವಿನಮನಿ, ಹಾಗೂ ಡಿ.ಎಸ್. ತಳವಾರ ಮಾತನಾಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಕನಕಪ್ಪ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಮುತ್ತಣ್ಣ ಕಂಬಳಿ, ಶಂಕರ ಹಡಗಲಿ, ಜೆ.ಎ. ಭಾವಿಕಟ್ಟಿ, ವಿ.ಎಂ. ಹಿರೇಮಠ, ಎಸ್.ಆರ್. ಬಂಡಿ, ಸುರೇಶ ಪವಾರ, ಶಿವಾನಂದ ತಳವಾರ, ಮುತ್ತಣ್ಣ ಮಲಕಶೆಟ್ಟಿ, ಚಂದ್ರು ಪಾಟೀಲ, ಕಳಕಣ್ಣವರ ಇದ್ದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ವಿವಿಧ ರೀತಿಯ ಜನಪದ ಶೈಲಿಯ ವೇಷಭೂಷಣಗಳು, ವಸ್ತು ಪ್ರದರ್ಶನ, ಮಾರುಕಟ್ಟೆಯ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಜರುಗಿದವು. ಸಹ ಶಿಕ್ಷಕ ಸುರೇಶ ದೊಡ್ಡಮನಿ ಸ್ವಾಗತಿಸಿದರು. ಪ್ರಧಾನ ಗುರುಗಳಾದ ಅನ್ನಪೂರ್ಣಾ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕ ಮೋಹನ ಗೊಂದಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ಶಂಭು ತಮ್ಮನಗೌಡರ ವಂದಿಸಿದರು.