ವಚನ ಸಾಹಿತ್ಯವನ್ನು ಜನಮಾನಸದಲ್ಲಿ ಪ್ರಚಾರ ಮಾಡಿ ಜನರ ಜೀವನ ಮೌಲ್ಯಗಳನ್ನು ಹೆಚ್ಚಿಸಿದ ಹಿರಿಯ ಜೀವಿ, ಚಿಕ್ಕೋಳ ಈಶ್ವರಪ್ಪ ಅವರಿಗೆ ಶರಣಸಿರಿ ಪ್ರಶಸ್ತಿ ಸಂದಿರುವುದು ಸಾರ್ಥಕ ಸೇವೆಯಾಗಿದೆ ಎಂದು ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ.ಸಿದ್ದೇಶ್ವರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಚನ ಸಾಹಿತ್ಯವನ್ನು ಜನಮಾನಸದಲ್ಲಿ ಪ್ರಚಾರ ಮಾಡಿ ಜನರ ಜೀವನ ಮೌಲ್ಯಗಳನ್ನು ಹೆಚ್ಚಿಸಿದ ಹಿರಿಯ ಜೀವಿ, ಚಿಕ್ಕೋಳ ಈಶ್ವರಪ್ಪ ಅವರಿಗೆ ಶರಣಸಿರಿ ಪ್ರಶಸ್ತಿ ಸಂದಿರುವುದು ಸಾರ್ಥಕ ಸೇವೆಯಾಗಿದೆ ಎಂದು ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ.ಸಿದ್ದೇಶ್ವರ ಅಭಿಪ್ರಾಯಪಟ್ಟರು.

ನಗರದ ಜಿಎಂ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಶರಣಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಲಿಂ. ಶ್ರೀಮತಿ ಹಾಲಮ್ಮ ಮತ್ತು ಲಿಂ.ಶ್ರೀ ಜಿ ಮಲ್ಲಿಕಾರ್ಜುನಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವ್ಯಾಪಾರಿ ಯುಗದಲ್ಲಿ ಜನರ ಜೀವನ ಮೌಲ್ಯಗಳು ಕಡಿಮೆಯಾಗುತ್ತಿವೆ. ಉತ್ತಮ ಸಮಾಜ ನಿರ್ಮಾಣಕ್ಕೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಇಂತಹ ಕಾರ್ಯಕ್ರಮಗಳು ತುಂಬಾ ಶ್ಲಾಘನೀಯ. ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ನಗರದ ಹಿಮೋಫಿಲಿಯೊ ಸೊಸೈಟಿ ಸಂಸ್ಥಾಪಕ ಡಾ.ಸುರೇಶ್ ಹನಗವಾಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಕೂಡ ಪ್ರಶಂಶನೀಯ ಎಂದು ಹೇಳಿದರು.

ಚಿಕ್ಕೋಳ್ ಈಶ್ವರಪ್ಪ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ಶರಣರ ಮೌಲ್ಯಗಳನ್ನು ನಿರಂತರವಾಗಿ ಉಳಿಸಿಕೊಳ್ಳುವಲ್ಲಿ ಉತ್ತಮವಾದ ಕಾರ್ಯ ಮಾಡುತ್ತಿದೆ. ನಾನು ಶರಣ ಸಾಹಿತ್ಯ ಪರಿಷತ್ತಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು.

ಜಿಎಂ ವಿವಿ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಶ.ಸಾ.ಪ. ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಗೀತಾ ಬಸವರಾಜ, ದತ್ತಿ ದಾನಿ ಗಾಯತ್ರಿ ಸಿದ್ದೇಶ್ವರ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಜಿಎಂಐಟಿ ಪ್ರಾಚಾರ್ಯ ಡಾ. ಬಿ.ಆರ್. ಶ್ರೀಧರ, ಆಡಳಿತಾಧಿಕಾರಿ ಡಾ. ಬಿ.ಸುಭಾಷ್‌ಚಂದ್ರ, ಪ್ರಮೀಳಾ ನಟರಾಜ್, ಕದಳಿ ಮಹಿಳೆ ವೇದಿಕೆ ಅಧ್ಯಕ್ಷೆ ಮಮತಾ ನಾಗರಾಜ, ಡಾ.ಶಿವರಾಜ ಕಬ್ಬೂರು, ಬಿ.ಎಂ. ಶರಣಪ್ಪ, ಜಿ.ಎಂ. ಕುಮಾರಪ್ಪ, ಭರಮಪ್ಪ ಮೈಸೂರು, ಎಂ.ನಾಗರಾಜ ಕಕ್ಕರಗೊಳ್ಳ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಿ.ಟಿ.ಪ್ರಕಾಶ ಪ್ರಾರ್ಥಿಸಿ, ಬಿ.ಎಸ್.ದೀಪಾ ಸ್ವಾಗತಿಸಿದರು. ಎಚ್.ಕೆ.ಲಿಂಗರಾಜು ದತ್ತಿ ಪರಿಚಯ ಮಾಡಿದರು. ಆರ್.ಸಿದ್ದೇಶ ವಂದಿಸಿದರು.

ಜಿ.ಎಂ.ಸಿದ್ದೇಶ್ವರ ತಮ್ಮ ತಂದೆ- ತಾಯಿಗಳ ಹೆಸರಿನಲ್ಲಿರುವ ದತ್ತಿ ಮೊತ್ತವನ್ನು ₹1 ಲಕ್ಷದಿಂದ ₹5 ಲಕ್ಷಗಳಿಗೆ ಏರಿಕೆಯ ವಾಗ್ದಾನ ಮಾಡಿ ಶರಣಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹಮ್ಮಿಕೊಂಡು ಶರಣರ ಮೌಲ್ಯಗಳನ್ನು ಇನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಸ್ವಾಸ್ಥ ಕಾಪಾಡಲು ತಿಳಿಸಿದರು.