ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಕೃಷಿ ಇಲಾಖೆಯಲ್ಲಿ ಶೇ. ೬೦ ರಿಂದ ೭೦ರಷ್ಟು ಹುದ್ದೆಗಳು ಖಾಲಿ ಇದ್ದು, ಸಹಾಯಕ ನಿರ್ದೇಶಕರೇ ಕಸ ಗುಡಿಸುವ ಪರಿಸ್ಥಿತಿ ಇದೆ, ಸರ್ಕಾರಕ್ಕೆ ರೈತರು ಹಾಗೂ ಕೃಷಿ ಇಲಾಖೆ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲವೆಂದು ಶಾಸಕ ಎಚ್.ಡಿ.ರೇವಣ್ಣ ಕಟುವಾಗಿ ಟೀಕಿಸಿದರು. ತಾಲೂಕಿನ ಕಿನ್ನರಹಳ್ಳಿಗೆ ವಿಕಸಿತ ಕೃಷಿ ಸಂಕಲ್ಪ ಯೋಜನೆಯಡಿ ಕೃಷಿ ಸಂಶೋದಕರ ತಂಡ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೆ ರೈತರು ಕೃಷಿಗಾಗಿ ಕೊಟ್ಟಿಗೆ ಗೊಬ್ಬರ ಹಾಗೂ ಹಿರಿಯರ ಮಾರ್ಗದರ್ಶದಲ್ಲಿ ಬೆಳೆ ಬೆಳೆಯುತ್ತಿದ್ದರು. ಜತೆಗೆ ೯೦ಕ್ಕೂ ಹೆಚ್ಚು ವರ್ಷಗಳು ಬದುಕುತ್ತಿದ್ದರು. ಆದರೆ ಈಗ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳ ಬಳಕೆ ಮಾಡದೇ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲ ಮತ್ತು ೫೦ ವರ್ಷಕ್ಕೆ ಇಂತಹ ಕಾಯಿಲೆ ಇಲ್ಲವೆಂದು ಹೇಳಲು ಆಗೊಲ್ಲ. ಆದ್ದರಿಂದ ಕೃಷಿ ಇಲಾಖೆಯ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತಮ ಬೆಳೆಯನ್ನು ಬೆಳೆಯಿರಿ ಎಂದು ಸಲಹೆ ನೀಡಿದರು.ಹೈನುಗಾರಿಕೆಯಿಂದ ರೈತರ ಸಂಕಷ್ಟ ಪರಿಸ್ಥಿತಿಯಲ್ಲೂ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ. ಜಿಲ್ಲೆಯ ನಂದಿನಿ ಡೇರಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, ಮಾಜಿ ಪ್ರಧಾನಿ ದೇವೇಗೌಡರು ಕೊಡುಗೆಯಿಂದ ಈ ಸ್ಥಾನ ಪಡೆಯಲು ಸಾಧ್ಯವಾಗಿದೆ. ಅದೇ ರೀತಿ ಹಾಸನದಲ್ಲಿ ಕೃಷಿ ಕಾಲೇಜು ಸ್ಥಾಪನೆ ಮತ್ತು ಅಭಿವೃದ್ಧಿಯಲ್ಲಿ ಸಾಕಷ್ಟು ಕಾಳಜಿ ವಹಿಸಿದ ಕಾರಣದಿಂದ ರೈತರಿಗೆ ಒಳ್ಳೆಯದಾಗುತ್ತಿದೆ. ಆದರೆ ರಾಜಕೀಯ ಕಾರಣಕ್ಕೆ ಸ್ಥಳಾಂತರ ಎಷ್ಟು ಸರಿ, ಇಲ್ಲಿಯೂ ಇರಲಿ, ಮಂಡ್ಯದಲ್ಲೂ ನೂರು ಕೋಟಿ ರು. ಖರ್ಚು ಮಾಡಿ ಅಭಿವೃದ್ಧಿ ಮಾಡಲಿ, ರೈತರಿಗೆ ಒಳೆಯದು ಮಾಡಲಿ ಎಂದು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು. ಬಿಎಸ್ಸಿ ಎಜಿ ವಿದ್ಯಾರ್ಥಿಗಳು ರೈತರ ಮೇಲಿನ ಗೌರವ ಹಾಗೂ ಕಾಳಜಿಯಿಂದ ಕಲಿಯುವ ಜತೆಗೆ ರೈತರ ಶ್ರೇಯಸ್ಸಿಗೆ ಶ್ರಮವಹಿಸುತ್ತಾರೆ, ಅದರ ಉಪಯೋಗ ಪಡೆಯಬೇಕೆಂದರು.ಕೃಷಿ ಇಲಾಖೆ ಅಧಿಕಾರಿಗಳು ರೈತರ ಬೆಳೆ ವಿಮೆ ಮಾಡಿಸಲು ಸೂಕ್ತ ಕ್ರಮಗಳು, ನಷ್ಟ ಉಂಟಾದಾಗ ಹೆಚ್ಚಿನ ಕಾಳಜಿ ಹಾಗೂ ಜವಾಬ್ದಾರಿಯಿಂದ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ಕೊಡಿಸುವಲ್ಲಿ ಕಾಳಜಿ ಅಗತ್ಯವೆಂದರು. ಜತೆಗೆ ಕಂದಾಯ ಇಲಾಖೆ ಅಧಿಕಾರಿಗಳು ರೈತರಿಗೆ ಖಾತೆ, ಪೌತಿ ಖಾತೆ ಹಾಗೂ ಇತರೆ ಖಾತೆ ಮಾಡಿಸುವಾಗ ಸತಾಯಿಸಬಾರದು ಎಂದು ಸಲಹೆ ನೀಡಿದರು. ವಿಜ್ಞಾನಿಗಳಾದ ಚಲುವರಾಜು, ಕೃಷಿ ಕಾಲೇಜಿನ ಅಧಿಕಾರಿ ನಾಗರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸವಿತಾ, ಅಧಿಕಾರಿಗಳಾದ ರಾಮಕೃಷ್ಣ, ಗುಣಶೇಖರ್, ಪಲ್ಲವಿ, ಇತರರು ಇದ್ದರು.