ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸಮಾಜಮುಖಿ ಸೇವೆಗಳು ಎಂದಿಗೂ ಕೂಡ ಕೊಡುವ ಕೈ ಆಗಬೇಕೆ ಹೊರತು ಬೇಡುವ ಕೈಗಳಾಗಬಾರದು ಎಂದು ಲಯನ್ಸ್ ಸನ್‌ ರೈಸ್ ಕ್ಲಬ್ ತಾಲೂಕು ಸಂಸ್ಥಾಪಕ ಅಧ್ಯಕ್ಷ ಡಾ. ಮಹೇಶ್ ತಿಳಿಸಿದ್ದಾರೆ.ಪಟ್ಟಣದ ಹೊರವಲಯದಲ್ಲಿರುವ ಪುಷ್ಪಗಿರಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಲಯನ್ಸ್ ಸನ್ ರೈಸ್ ಕ್ಲಬ್ ಚನ್ನರಾಯಪಟ್ಟಣ ಮತ್ತು ಬಾಗೂರು ಕ್ಲಬ್‌ಗಳ ರಾಜ್ಯಪಾಲರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜಮುಖಿ ಸೇವೆಗಳು ಎಂದಿಗೂ ಕೂಡ ಕೊಡುವ ಕೈ ಆಗಬೇಕೇ ಹೊರತು ಬೇಡುವ ಕೈ ಆಗಬಾರದು. ಇದರಿಂದ ನಾವು ಮಾಡುವ ಕೆಲಸಕ್ಕೆ ಒಂದು ಅರ್ಥ ಇರುತ್ತದೆ. ನಾವು ಸಂಪಾದಿಸಿದ ಹಣದಲ್ಲಿ ಇಂತಿಷ್ಟು ಹಣವನ್ನು ಸಮಾಜಮುಖಿ ಸೇವೆಗಳಿಗಾಗಿ ವಿನಿಯೋಗ ಮಾಡಿದರೆ ಅದರಲ್ಲಿ ಸಿಗುವಷ್ಟು ನೆಮ್ಮದಿ ತೃಪ್ತಿ ಬೇರೊಂದು ಕಾರ್ಯದಲ್ಲಿ ದೊರಕುವುದಿಲ್ಲ. ಸಮಾಜಮುಖಿ ಸೇವೆಗಳನ್ನು ಮಾಡಲು ಇಂತಹ ಸಂಸ್ಥೆಗಳ ನೆರವು ಬಹುಮುಖ್ಯವಾಗಿದೆ. ನಾವುಗಳು ಒಂದು ಪಟ್ಟು ಹಣವನ್ನು ಸಮಾಜಮುಖಿ ಸೇವೆಗೆ ತೊಡಗಿಸಿದರೆ ಅದಕ್ಕೆ ಎರಡು ಪಟ್ಟು ಹಣವನ್ನು ಸಂಸ್ಥೆಯಿಂದ ನೀಡಿ ಸಮಾಜಮುಖಿ ಸೇವೆಗಳ ಕಾರ್ಯಕ್ಕೆ ಸಹಕಾರಿಯಾಗುತ್ತದೆ. ಇಂಥ ಸಂಘಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದರೆ ಅದರಲ್ಲಿ ಕೆಲವು ನೀತಿ ನಿಯಮ ನಿಬಂಧನೆಗಳಿಗೆ ಒಳಪಡುತ್ತೇವೆ ಹಾಗೂ ನಮ್ಮಲ್ಲಿರುವ ಕೆಲವು ಕಾರ್ಯ ಚಟುವಟಿಕೆಗಳನ್ನು ಕೂಡ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಶಿಸ್ತು ಸಮಯಪ್ರಜ್ಞೆ ಇವುಗಳನ್ನು ಕೂಡ ಪಾಲನೆಯಲ್ಲಿ ಬಹು ಮುಖ್ಯ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಲಯನ್ಸ್ ಸನ್ ರೈಸ್ ಕ್ಲಬ್ ರಾಜ್ಯಪಾಲರಾದ ಕುಡುಪಿ ಅರವಿಂದ ಶರಣೆ, ಚನ್ನರಾಯಪಟ್ಟಣ ಲಯನ್ಸ್ ಸನ್ ರೈಸ್ ಕ್ಲಬ್ ಅಧ್ಯಕ್ಷರಾದ ಗಿರೀಶ್ ಲಾಯರ್‌, ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಮಂಜುನಾಥ್ ಹಾಗೂ ಬಾಗೂರು ಸಂಸ್ಥಾಪಕ ಅಧ್ಯಕ್ಷರಾದ ಶಿವಣ್ಣ ಅಧ್ಯಕ್ಷರಾದ ಕೃಷ್ಣ ಗೌಡ, ಕಾರ್ಯದರ್ಶಿ ಮಂಜು, ಖಜಾಂಚಿ ಲೋಕೇಶ್ ಹಾಜರಿದ್ದರು.