ಮಾಲೂರಿನಲ್ಲಿ ಆ.೧೦ ನಡೆದ ಸಾಧನಾ ಸಂಭ್ರಮ ಸಮಾವೇಶದಲ್ಲಿ ವೇದಿಕೆ ಮೇಲೆ ನಾನು ಗರಂ ಆಗಿರಲಿಲ್ಲ. ಮುಖ್ಯಮಂತ್ರಿಗಳು ಎಲ್ಲ ಶಾಸಕರನ್ನು ಕರೆಸಿ ನಂತರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಒಟ್ಟಾಗಿ ಹೋಗೋಣ ಎಂದು ಹೇಳಿದ್ದರು.

ಕನ್ನಡಪ್ರಭ ವಾರ್ತೆ ಕೋಲಾರ

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಂತ್ರಿಗಿರಿ ಕೈ ತಪ್ಪಿದ ಹಿನ್ನೆಲೆಯಲ್ಲಿ ಮತ್ತೆ ಅಸಮಾಧಾನ ಹೊರಹಾಕಿದ್ದು, ಆಹಾರ ಸಚಿವ ಕೆ.ಎಚ್ ಮುನಿಯಪ್ಪನವರೇ ಇದಕ್ಕೆ ಕಾರಣವೆಂದು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಲೂರಿನಲ್ಲಿ ಆ.೧೦ ನಡೆದ ಸಾಧನಾ ಸಂಭ್ರಮ ಸಮಾವೇಶದಲ್ಲಿ ವೇದಿಕೆ ಮೇಲೆ ನಾನು ಗರಂ ಆಗಿರಲಿಲ್ಲ. ಮುಖ್ಯಮಂತ್ರಿಗಳು ಎಲ್ಲ ಶಾಸಕರನ್ನು ಕರೆಸಿ ನಂತರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಒಟ್ಟಾಗಿ ಹೋಗೋಣ ಎಂದು ಹೇಳಿದ್ದರು. ಆದರೆ ಆ ಕೆಲಸ ಅವರು ಮಾಡಲಿಲ್ಲ. ಅದಕ್ಕೆ ನನ್ನ ಮನಸ್ಸಿಗೆ ಘಾಸಿಯಾಗಿ ಮೌನವಹಿಸಿದ್ದೆ ಎಂದರು.

ಕೆ.ಎಚ್.ಮುನಿಯಪ್ಪ ಅವರನ್ನು ಮುಖ್ಯಮಂತ್ರಿಗಳು ಏಳು ಬಾರಿ ಸಂಸದರಾಗಿ ಆಯ್ಕೆ ಮಾಡಿದ ಜಿಲ್ಲೆಯೆಂದು ಹೊಗಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಬಲಗೈ ಸಮುದಾಯದ ಮತಗಳನ್ನು ಪಡೆದು ಏಳುಬಾರಿ ಆಯ್ಕೆಯಾಗಿದ್ದು ಎಂಬುದನ್ನು ಮರೆತಿದ್ದಾರೆ. ಒಂದು ಬಾರಿ ನಮ್ಮ ಮತಗಳು ಕೈಕೊಟ್ಟಿದ್ದಕ್ಕೆ ಏನಾಯ್ತು ಎಂಬುದು ಅವರಿಗೇ ಗೊತ್ತಿದೆ. ಮತ್ತೆ ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ಮಾಡಬಾರದು. ಜಿಲ್ಲೆಯಲ್ಲಿ ನಾನೇ ಇರಬೇಕು ಎಂಬುದು ಅವರ ಉದ್ದೇಶ. ಯಾವಯಾವ ಸಂದರರ್ಭದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದಾರೆಂಬುದು ಜಗಜ್ಜಾಹೀರು. ಅದಕ್ಕೇನು ಉದಾಹರಣೆ ಬೇಕಿಲ್ಲ.

ನನಗೆ ಸಚಿವ ಸ್ಥಾನ ತಪ್ಪಿರುವುದರ ವಿರುದ್ಧ ಜನ ಮುಂದೆ ತೀರ್ಮಾನ ಮಾಡುತ್ತಾರೆ. ಇಂದು ನಾವು ಕತ್ತಲೆಯಲ್ಲಿ ಇದ್ದೇವೆ. ಬೆಳಕು ಬರುವವರೆಗೆ ಕಾಯುತ್ತೇವೆ. ನನ್ನ ಅಸಮಾಧಾನ ಕುರಿತು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಇನ್ನೂ ಚರ್ಚೆಯಾಗಿಲ್ಲ. ಅಲ್ಲಿ ತನಕ ದೂರವಿರೋಣ ಎಂದು ಮುಖ್ಯಮಂತ್ರಿಗಳ ಜತೆ ಕಾಣಿಸಿಕೊಳ್ಳಲಿಲ್ಲ ಎಂದರು.