ಸಾರಾಂಶ
ಬ್ಯಾಡಗಿ: ಕಾಂಗ್ರೆಸ್ ಪಕ್ಷದ ಕ್ರೆಡಿಟ್ ಪಾಲಿಟಿಕ್ಸ್ ದುರಾಸೆಯಿಂದಲೇ ಆರ್ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವದಲ್ಲಿ 11 ಜೀವಗಳು ಬಲಿಯಾಗಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ರಾಜೀನಾಮೆ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.
ಸೋಮವಾರ ಬಿಜೆಪಿ ತಾಲೂಕು ಮಂಡಳದ ವತಿಯಿಂದ ಪಟ್ಟಣದ ಹಳೇ ಪುರಸಭೆ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಹಾಗೂ ಮಡಿದವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಗೆದ್ದ ಕ್ರಿಕೆಟ್ ತಂಡವನ್ನು ಕ್ರೀಡಾಂಗಣದಲ್ಲಿಯೇ ಅಭಿನಂದಿಸಬೇಕಾಗಿದ್ದ ಕ್ರೀಡೆಗೆ ಸಲ್ಲುವ ಗೌರವವಾಗಿದೆ. ಆದರೆ ಬದಲಾಗಿ ಕಾಂಗ್ರೆಸ್ ಸರ್ಕಾರ ವಿಧಾನಸೌಧದೆದುರು ಕಾರ್ಯಕ್ರಮವನ್ನು ಆಯೋಜಿಸಿದ್ದು ಅತ್ಯಂತ ದುರದೃಷ್ಟಕರ. ಅದರಲ್ಲೂ ಹಿರಿಯ ಪೊಲೀಸ್ ಅಧಿಕಾರಿಗಳ ಮಾತನ್ನು ತಿರಸ್ಕರಿಸಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಿದ್ದರಾಮಯ್ಯ ಅವರ ದುರಹಂಕಾರವೇ ಕಾರಣವಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, 60 ಕೋಟಿಗೂ ಅಧಿಕ ಜನರು ಸೇರಿದ್ದ ಉತ್ತರ ಪ್ರದೇಶದಲ್ಲಿ ನಡೆದ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಹಲವರು ಸಾವಿಗೀಡಾದ ಸಮಯದಲ್ಲಿ ಇದು ಅಲ್ಲಿನ ಸರ್ಕಾರದ ವೈಫಲ್ಯ ಎಂದು ಯೋಗಿ ಸರ್ಕಾರದ ಮೇಲೆ ವಿರುದ್ಧ ಬೊಬ್ಬೆ ಹೊಡೆಯುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರೇ ಅಂತಹದ್ದೊಂದು ಮೇಳವನ್ನು ಆಯೋಜಿಸಿ ತೋರಿಸಿ ಕೇವಲ 3 ಲಕ್ಷ ಜನರನ್ನು ನಿಭಾಯಿಸದೇ ಸಾವಲ್ಲೂ ರಾಜಕೀಯ ಮಾಡುತ್ತಿರುವುದು ನಾಚಿಕೇಡಿನ ಸಂಗತಿ ಎಂದರು.ತಾಲೂಕಾಧ್ಯಕ್ಷ ಎನ್.ಸಿ. ಬಟ್ಟಲಕಟ್ಟಿ, ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ ಮಾತನಾಡಿದರು. ಈ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಸದಸ್ಯರಾದ ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಫಕ್ಕೀರಮ್ಮ ಛಲವಾದಿ, ಗಾಯತ್ರಿ ರಾಯ್ಕರ, ವಿನಯ್ ಹಿರೇಮಠ, ಮುಖಂಡರಾದ ಶಿವಬಸಪ್ಪ ಕುಳೇನೂರ, ಶಿವಾನಂದ ಯಮನಕ್ಕವವರ, ವಿಜಯಭರತ ಬಳ್ಳಾರಿ, ವೀರೇಂದ್ರ ಶೆಟ್ಟರ, ಸುರೇಶ ಉದ್ಯೋಗಣ್ಣನವರ, ಶಂಕರಗೌಡ ಪಾಟೀಲ, ವಿನಯ ಕಂಬಳಿ, ಪರಶುರಾಮ ಉಜನಿಕೊಪ್ಪ, ಶಿವಯೋಗಿ ಗಡಾದ, ಪಾಂಡುರಂಗ ಸುತಾರ, ಬಸವರಾಜ ಹಾವನೂರ, ಪ್ರದೀಪ ಜಾಧವ, ವಿಜಯ ಕತ್ತಿ, ಕುಮಾರ ಮಾಳಗಿ, ಜಿತೇಂದ್ರ ಸುಣಗಾರ, ಬಿದ್ದಾಡೆಪ್ಪ ರಿತ್ತಿ, ಜ್ಯೋತಿ ಕುದರಿಹಾಳ, ಗುತ್ತೆಮ್ಮ ಮಾಳಗಿ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಬಸವರಾಜ ಮುಚ್ಚಟ್ಟಿ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.