ಧಾರವಾಡ:

ಸಂತಾನಹೀನತೆ ಒಂದು ಸಾಮಾಜಿಕ ಕಳಂಕವಲ್ಲ. ಪ್ರಸ್ತುತ ವೈದ್ಯಕೀಯ ವಿಜ್ಞಾನದ ಆವಿಷ್ಕಾರದ ನೆಲೆಯಲ್ಲಿ ಬಂಜೆತನ ನಿವಾರಣೆಗೆ ಇನ್ ವಿಟ್ರೋ ಫರ್ಟಿಲೈಜೇಷನ್ (ಐವಿಎಫ್‌) ಹೊಸ ಭರವಸೆ ಮೂಡಿಸುವ ಆಶಾಕಿರಣವಾಗಿದೆ ಎಂದು ಬೆಂಗಳೂರಿನ ರಾಜೀವ ಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಸ್ನಾತಕೋತ್ತರ ವಿಭಾಗದ ಮಾಜಿ ಸಂಯೋಜಕ ಡಾ. ಮಹಾದೇವಸ್ವಾಮಿ ಎಂ.ಪಿ. ಹೇಳಿದರು.

ನಗರದ ಜೀವಾ ಫರ್ಟಿಲಿಟಿ ಸೆಂಟರ್‌ನ 5ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಂತಾರಾಷ್ಟಿçಯ ಐವಿಎಫ್‌ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ವಿಜ್ಞಾನದ ಸಾಧನೆ ಗೌರವಿಸುವ ಜತೆಗೆ ಬಂಜೆತನದ ಬಗ್ಗೆ ಜಾಗೃತಿ, ಸಹಾನುಭೂತಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವುದೇಐವಿಎಫ್‌ ದಿನಾಚರಣೆಯ ಉದ್ದೇಶವಾಗಿದೆ ಎಂದರು.

ಸಂತಾನೋತ್ಪತ್ತಿ ಮತ್ತು ಐವಿಎಫ್‌ ತಜ್ಞೆ ಡಾ. ನಿಷ್ಠಾ ಮಹಾಬಲಶೆಟ್ಟಿ ಮಾತನಾಡಿ, ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣುವನ್ನು ಪ್ರಯೋಗಾಲಯದಲ್ಲಿ ಅತ್ಯಾಧುನಿಕ ವೈದ್ಯಕೀಯ ವಿಜ್ಞಾನದ ಉಪಕರಣಗಳ ಪ್ರಯೋಗಶೀಲತೆಯಲ್ಲಿ ಸಂಯೋಜಿಸಿ ರೂಪಿಸಿದ ಭ್ರೂಣವನ್ನು ನಂತರ ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಿ ಮಕ್ಕಳನ್ನು ಪಡೆದುಕೊಳ್ಳುವ ಈ ವಿಶಿಷ್ಟ ವಿಧಾನವು ವೈದ್ಯಕೀಯ ವಿಜ್ಞಾನದ ವಿಸ್ಮಯವಾಗಿದೆ ಎಂದು ಹೇಳಿದರು.ಸ್ತ್ರೀರೋಗ ತಜ್ಞೆ ಡಾ. ನಿರ್ಮಲಾ ಮಹಾಬಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯರಾದ ಡಾ. ಡಿ.ಎಂ. ಮಹಾಬಲಶೆಟ್ಟಿ, ಡಾ. ಎಂ.ಡಿ. ಅಮೃತ ಸೇರಿದಂತೆ ವಿವಿಧ ತಜ್ಞ ವೈದ್ಯರು, ಐವಿಎಫ್‌ ಮೂಲಕ ಮಕ್ಕಳನ್ನು ಪಡೆದ ಮತ್ತು ಮಕ್ಕಳನ್ನು ಪಡೆಯಲು ನೋಂದಾಯಿಸಿಕೊಂಡ ದಂಪತಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಲಪ್ರಭಾ ಉಪ್ಪಿನ ಸ್ವಾಗತಿಸಿದರು. ಶೀತಲ್ ಬೆಟಗೇರಿ ವಂದಿಸಿದರು.