ರಾಮನಗರ: ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ವಾಣಿಯೊಂದಿಗೆ ಸಮಾಜದಲ್ಲಿ ಸಮಾನತೆಯನ್ನು ಸಾರಿದವರು ಜಗದ್ಗುರು ರೇಣುಕಾಚಾರ್ಯರು ಎಂದು ಅವ್ವೇರಹಳ್ಳಿ ರೇವಣಸಿದ್ದೇಶ್ವರಸ್ವಾಮಿ ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು.ಯುಗಯುಗದಲ್ಲಿ ಅವತರಿಸಿದ ಮಹಾಮಹಿಮರು ಜಗದ್ಗುರು ರೇಣುಕಾಚಾರ್ಯರು ಲಿಂಗದಲ್ಲಿ ಉದ್ಭವವಾಗಿ ಅವ್ವೇರಹಳ್ಳಿ ಶ್ರೀ ರೇವಣಸಿದ್ದೇಶ್ವರ ಕ್ಷೇತ್ರಕ್ಕೆ ಬಂದು 700 ವರ್ಷಗಳ ಕಾಲ ತಪಸ್ಸು ಮಾಡಿ ಕ್ಷೇತ್ರವನ್ನು ಪುನೀತಗೊಳಿಸಿ ಜಗತ್ತಿಗೆ ಶಾಂತಿ ಸಂದೇಶ ನೀಡಿದವರು. ಇಂತಹ ಪವಿತ್ರ ಸ್ಥಳದಲ್ಲಿರುವ ನಾವುಗಳೇ ಧನ್ಯರು ಎಂದರು.
ರೇಣುಕಾಚಾರ್ಯರ ಜಯಂತಿಯಂದು ರೇವಣಸಿದ್ದೇಶ್ವರ ಕ್ಷೇತ್ರದಲ್ಲಿ ಸಂಜೆ ಉತ್ಸವ ನಡೆಸಲಾಗುತ್ತದೆ. ಸಾವಿರಾರು ಭಕ್ತರು ಭಾಗವಹಿಸುತ್ತಿದ್ದಾರೆ. ರಂಬಾಫುರಿ ಬಾಳೇಹೊನ್ನೂರಿನ ಪೀಠ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಇಂದು ಯುಗಮಾನೋತ್ಸವ ಆಚರಣೆ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಯುಗಮಾನೋತ್ಸವ ಮಾಡಬೇಕೆಂದು ಪಂಚಾಮಠಗಳ ಪೀಠಾಧ್ಯಕ್ಷರು ಹೇಳಿದ್ದಾರೆ ಸರ್ಕಾರದಿಂದ ಯುಗಮಾನೋತ್ಸವ ಆಚರಣೆ ನಡೆಸುತ್ತಿರುವುದು ಕೂಡ ಹೆಮ್ಮೆಯಾಗಿದೆ ಎಂದು ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಉಪನ್ಯಾಸ ನೀಡಿದ ವಿದ್ವಾನ್ ಚಂದ್ರಶೇಖರಯ್ಯ, ಸಮಾಜದ ಅಸಮಾನತೆಯನ್ನು ತೊಡೆದು ಹಾಕಲು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಬೋಧಿಸಿ ವೀರಶೈವಧರ್ಮವನ್ನು ನೆಲೆಗೊಳಿಸಿದ ಮಹಾತ್ಮರು ರೇಣುಕಾಚಾರ್ಯರು, ಆಂಧ್ರಪ್ರದೇಶದ ಕೊನಲಪಾಕಂ ಎಂಬಲ್ಲಿ ಸಾವಿರಾರು ವರ್ಷಗಳ ಹಿಂದೆ ಜನಿಸಿದರು. ರೇಣುಕಾಚಾರ್ಯರ ಧರ್ಮದ ದಶ ಸೂತ್ರಗಳು ಸರ್ವರಿಗೂ ಸರ್ವ ಕಾಲಕ್ಕೂ ಧರ್ಮದ ಹಾದಿಯಲ್ಲಿ ನಡೆಯುವ ದಿಕ್ಕನ್ನು ತೋರಿಸುತ್ತವೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಇಂದು ನಾವು ಮುನ್ನಡೆಯಬೇಕಿದೆ ಸದಾ ಅವರ ಆಶೀರ್ವಾದ ಶ್ರೀರಕ್ಷೆ ಸರ್ವ ಸಮಾಜಕ್ಕೂ ಸಿಗುವಂತಾಗಲಿ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಯಾರಾದರೂ ಇದ್ದರೆ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಅವರನ್ನು ಮೇಲಕ್ಕೆ ಎತ್ತುವ ಕೆಲಸ ಮಾಡಿದರೆ ಒಳಿತು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್.ಯೋಗಾನಂದ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರಮುಖರನ್ನು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಪೊಲೀಸ್ ಎಂ.ಎಸ್.ಶಂಕರಪ್ಪ, ವೀರಶೈವ ಸಂಘದ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ರಾಜಶೇಖರ್, ಎಸ್.ಆರ್. ನಾಗರಾಜು, ಮಾಜಿ ನಗರಸಭಾಧ್ಯಕ್ಷೆ ವಿಜಯಕುಮಾರಿ, ಮುಖಂಡರಾದ ಸಿ. ನಾಗರಾಜ್, ಅಕ್ಕಮಹಾದೇವಮ್ಮ, ರಾಜಣ್ಣ, ಎಂ.ಮಹೇಶ್, ಗುರುಲಿಂಗಯ್ಯ, ಕರುನಾಡ ಸೇನೆ ಜಗದೀಶ್ ಎಂ.ಐಜೂರು, ಉಮಾ, ಚಂದ್ರಣ್ಣ, ಹರ್ಷ, ಶಿವಣ್ಣ, ಗೌರೀಶ್, ಹರೀಶ್, ವಿಜಯಕುಮಾರ್, ನಾಗೇಶ್, ಶೋಭಾ, ಶಿವಕುಮಾರಸ್ವಾಮಿ, ಮಹದೇವಯ್ಯ, ವೀರಭದ್ರಸ್ವಾಮಿ, ಶಂಕರ್, ಮಾದು, ರುದ್ರೇಶ್, ಲೋಕೇಶ್, ಅಂಕನಹಳ್ಳಿ ಪಾರ್ಥ ಮತ್ತಿತರರು ಉಪಸ್ಥಿತರಿದ್ದರು.2ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಭಾಂಗಣದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು.