- ಲಿಂಕ್‌ ಬ್ಯುಸಿನೆಸ್‌ಗೆ ಬ್ರೇಕ್ ಹಾಕಲು ರೈತ ಸಂಘಟನೆಗಳ ಒತ್ತಾಯ - - -

ಜಗಳೂರು: ತಾಲೂಕಿನ ರೈತರಿಗೆ ಸಕಾಲದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ (ವಾಸುದೇವ ಮೇಟಿ ಬಣ) ಶನಿವಾರ ಜಗಳೂರು ತಾಲೂಕು ದಂಡಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಗುಮ್ಮನೂರು ಬಸವರಾಜ್ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದೆ. ಕೆಲವೇ ದಿನಗಳಲ್ಲಿ ಜಗಳೂರು ತಾಲೂಕಿನಾದ್ಯಂತ ರೈತರು ಬಿತ್ತನೆ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ಹೀಗಾಗಿ, ಕೃಷಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಮತ್ತು ರಸಗೊಬ್ಬರವನ್ನು ಸಮರ್ಪಕವಾಗಿ ವಿತರಿಸಬೇಕು ಎಂದರು.

ಲಿಂಕ್‌ ಬ್ಯುಸಿನೆಸ್‌ಗೆ ಬ್ರೇಕ್ ಹಾಕಿ:

ರೈತರಿಗೆ ಯೂರಿಯಾ ಗೊಬ್ಬರ ವಿತರಣೆ ಮಾಡುವಾಗ ಅದರ ಜೊತೆಗೆ ಬೇರೆ ಯಾವುದೇ ಉತ್ಪನ್ನಗಳನ್ನು ಬಲವಂತವಾಗಿ ಲಿಂಕ್ ಮಾಡಿ (ಜೊತೆಯಾಗಿ) ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಹಾಗೂ ಸೊಸೈಟಿಗಳಲ್ಲಿ ಸಕಾಲಕ್ಕೆ ರಾಸಾಯನಿಕ ಗೊಬ್ಬರ ವಿತರಿಸಬೇಕು ಎಂದರು.


ಕಠಿಣ ಕ್ರಮಕ್ಕೆ ಆಗ್ರಹ:

ತಾಲೂಕು ರೈತ ಸಂಘ ಅಧ್ಯಕ್ಷ ಬಿ.ಕುಮಾರ್ ಮಾತನಾಡಿ, ಸರ್ಕಾರ ಮತ್ತು ತಾಲೂಕು ಆಡಳಿತ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ನಕಲಿ ಅಥವಾ ಕಳಪೆ ಬಿತ್ತನೆಬೀಜ ಮತ್ತು ರಸಗೊಬ್ಬರವನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನಿಗದಿಪಡಿಸಿದ ಎಂ.ಆರ್.ಪಿ. (ಗರಿಷ್ಠ ಚಿಲ್ಲರೆ ಬೆಲೆ) ದರಕ್ಕಿಂತ ಹೆಚ್ಚಿನ ಬೆಲೆಯನ್ನು ರೈತರಿಂದ ವಸೂಲಿ ಮಾಡುವುದನ್ನು ಕಡ್ಡಾಯವಾಗಿ ತಡೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ರೈತ ಮುಖಂಡರಾದ ಪಾಲನಾಯಕ, ಸಕ್ರೇಶ್, ಸೂರಪ್ಪ, ಭೀಮೇಶ್, ಹನುಮಂತಪ್ಪ, ಚನ್ನಪ್ಪ, ಏಕಾಂತಪ್ಪ, ಟಿ.ಕಿರಣ್ ಕುಮಾರ್, ಎನ್.ಎಂ.ಭರತ್, ಜಗದೀಶ್, ಚನ್ನಬಸಪ್ಪ, ಮಾರುತಿ, ಕುಬೇರಪ್ಪ, ಭರಮಸಮುದ್ರ ಚಂದ್ರಪ್ಪ, ಮಧು, ಆರ್. ಓಬಳೇಶ್ ಸೇರಿದಂತೆ ಅನೇಕರು ಹಾಜರಿದ್ದರು.

- - - (** ಈ ಫೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿ)

-೧೬ಜೆಎಲ್ಆರ್ ಚಿತ್ರ 2:

ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಆಗ್ರಹಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.