ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಬಾಬು ಜಗಜೀವನರಾಂ ಭವನವನ್ನು ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸಿ ಉದ್ಘಾಟನೆಗೆ ಸಜ್ಜುಗೊಳಿಸುವಂತೆ ಶಾಸಕ ವೀರೇಂದ್ರ ಪಪ್ಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸರ್ಕಾರಿ ಕಲಾ ಕಾಲೇಜು ಹಿಂಭಾಗದಲ್ಲಿ ಅನುದಾನದ ಕೊರತೆಯಿಂದ ಕುಂಠಿತಗೊಂಡಿರುವ ಭವನದ ಕಾಮಗಾರಿ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಮಹನೀಯರ ಹೆಸರಿನಲ್ಲಿರುವ ಭವನಗಳ ಕಾಮಗಾರಿಗಳು ಯಾವ್ಯಾವುದೋ ಕಾರಣಕ್ಕೆ ಅರ್ಧಕ್ಕೆ ನಿಲ್ಲಬಾರದು. ಶೀಘ್ರ ಕಾಮಗಾರಿ ಪೂರ್ಣಗೊಂಡು ಬಳಕೆಗೆ ಮುಕ್ತವಾಗಬೇಕು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ವಿಚಾರದಲ್ಲಿ ಉದಾಸೀನ ತೋರಬಾರದು. ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಾಗಿ ಬೇಕಾಗಿರುವ ಅನುದಾನ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ ಪಟ್ಟಿ ಸಲ್ಲಿಸಿದರೆ ಸರ್ಕಾರದ ಜೊತೆ ಮಾತನಾಡಿ ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ಬಾಬು ಜಗಜೀವನ್ ರಾಮ್ ಭವನ ಕಾಮಗಾರಿ ಅರ್ಧದಲ್ಲೇ ಕುಂಠಿತವಾಗಿರುವುದು ಬೇಸರದ ವಿಚಾರ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಭವನದ ಕಾಮಗಾರಿಗೆ ಶಾಸಕರ ಅನುದಾನದಿಂದ ಹಣ ಬಿಡುಗಡೆ ಮಾಡುತ್ತಿದ್ದೆ ಎಂದು ಬೇಸರಿಸಿದರು.

ಎಂಟು ವರ್ಷಗಳಿಂದ ಪಾಳು ಬಿದ್ದಿರುವಂತ ಡಾ.ಬಾಬು ಜಗಜೀವನ್ ರಾಮ್ ಭವನದ ಕಾಮಗಾರಿಯನ್ನು ಮುಗಿಸಿ ಹಸ್ತಾಂತರ ಮಾಡಬೇಕೆಂದು ದಲಿತ ಮುಖಂಡರಿಂದ ಹಾಗೂ ಇತರೆ ಸಂಘ-ಸಂಸ್ಥೆಗಳಿಂದ ಮನವಿಗಳು ಬಂದ ಹಿನ್ನಲೆ ಕಾಮಗಾರಿ ಪರಿಶೀಲಿಸಿದ್ದೇನೆ. ಭವನದ ಅರ್ಧದಷ್ಟು ಕೆಲಸಗಳು ಮುಗಿದಿವೆ. ಇನ್ನಷ್ಟು ಮುಖ್ಯವಾದ ಕೆಲಸಗಳು ಆಗಬೇಕಿದೆ. ದಲಿತ ಸಮುದಾಯಕ್ಕೆ ಅವಶ್ಯಕತೆ ಇರುವ ಭವನದ ಕಾಮಗಾರಿಯ ಮುಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾಳಜಿ ವಹಿಸಬೇಕೆಂದರು.


ಬಾಬು ಜಗಜೀವನ್ ರಾಮ್ ಸಮುದಾಯ ಭವನ ನಿರ್ಮಾಣದ ಕಾಮಗಾರಿ 2018ರಲ್ಲಿ ಪ್ರಾರಂಭವಾಗಿದ್ದು, 9 ಕೋಟಿ 90 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಬೇಕಾಗಿತ್ತು. ಆದರೆ ಭವನದ ನಿರ್ಮಾಣದ ಯೋಜನೆಯಲ್ಲಿತುಸು ಬದಲಾವಣೆಯಾಗಿದ್ದರಿಂದ ಮುಗಿಸಲು ಸಾಧ್ಯವಾಗಿಲ್ಲ. ಹಾಗಾಗಿ ಇನ್ನಷ್ಟು ಹಣವನ್ನು ಭವನಕ್ಕೆ ಮೀಸಲಿಟ್ಟರೆ ಭವನವು ಸಂಪೂರ್ಣವಾಗಿ ಕಾಮಗಾರಿ ಮುಗಿಯುತ್ತದೆ ಎಂದು ಅಧಿಕಾರಿಗಳು ಶಾಸಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಶಿವಣ್ಣ, ಪಪ್ಪಿಸ್ ಸ್ಟೂಡೆಂಟ್ ವಿಂಗ್ ಅಧ್ಯಕ್ಷ ರವಿ ಚಿನ್ನು, ಕಾರ್ಯದರ್ಶಿ ಸಲೀಂ, ಪದಾಧಿಕಾಗಳಾದ ದರ್ಶನ್, ಹೇಮಂತ್ ಹಾಗೂ ದಲಿತ ಮುಖಂಡರು ಇದ್ದರು.