ಹುಬ್ಬಳ್ಳಿ:
ಮಾಜಿ ಸಚಿವ ಎ.ಎಂ. ಹಿಂಡಸಗಿರಿ ಹಾಗೂ ಪ್ರಧಾನಮಂತ್ರಿ 15 ಸೂತ್ರಗಳ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದಲ್ಲಿ ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರಅಹ್ಮದ್ ಖಾನ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಜೈನ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಒಳಗೊಂಡ ಮನವಿ ಸಲ್ಲಿಸಿದರು.ದೇವಸ್ಥಾನಗಳ ಪೂಜಾರಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ₹6000 ಗೌರವಧನದ ಮಾದರಿಯಲ್ಲಿ ಜೈನ ಸಮಾಜದ ಸ್ಥಾನಕ, ಮಂದಿರ ಹಾಗೂ ತೇರಾಪಂಥ ಸಭಾಭವನಗಳಲ್ಲಿ ನಡೆಯುವ ಧಾರ್ಮಿಕ ಪಾಠಶಾಲೆಗಳಲ್ಲಿ ಸೇವೆ ಸಲ್ಲಿಸುವವರಿಗೆ ಸಹ ಸರ್ಕಾರದಿಂದ ಗೌರವಧನ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯಾದ್ಯಂತ ವಾಸಿಸುವ 20ರಿಂದ 21 ಲಕ್ಷ ಜೈನ ಸಮಾಜದ ಜನರ ಅಭಿವೃದ್ಧಿಗಾಗಿ ಪೂರ್ವ ಘೋಷಿತ ಜೈನ ಅಭಿವೃದ್ಧಿ ನಿಗಮವನ್ನು ಶೀಘ್ರದಲ್ಲೇ ರಚಿಸಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು. ಜತೆಗೆ ಜೈನ ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ₹100 ಕೋಟಿ ಅನುದಾನಕ್ಕಾಗಿ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.ಮನವಿ ಸ್ವೀಕರಿಸಿದ ಸಚಿವ, ಎಲ್ಲ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ. ಜೈನ ಸಮಾಜಕ್ಕಾಗಿ ಘೋಷಿಸಲಾದ ಜೈನ ಕಲ್ಯಾಣ ನಿಗಮದ ರಚನೆ ಪ್ರಕ್ರಿಯೆ ವೇಗಗೊಳಿಸಲಾಗುತ್ತಿದೆ. ಜೈನ ಧಾರ್ಮಿಕ ಪಾಠಶಾಲೆಗಳ ಸಿಬ್ಬಂದಿಗೆ ಸರ್ಕಾರದಿಂದ ವೇತನ ನೀಡುವ ಬೇಡಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಜೈನ ಪ್ರತಿನಿಧಿ ಮಂಡಳಿ ವತಿಯಿಂದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಹಾಗೂ ಮಾಜಿ ಸಚಿವ ಎ.ಎಂ. ಹಿಂಡಸಗಿರಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಜಿತೇಂದ್ರ ಅಗ್ರವಾಲ್ ಉಪಸ್ಥಿತರಿದ್ದರು.