ರಸ್ತೆಗಳಿಗೆ ಕಂಟಕವಾದ ಜಲ ಜೀವನ್ ಮಿಷನ್ ಕಾಮಗಾರಿ

| Published : May 27 2024, 01:07 AM IST

ರಸ್ತೆಗಳಿಗೆ ಕಂಟಕವಾದ ಜಲ ಜೀವನ್ ಮಿಷನ್ ಕಾಮಗಾರಿ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ಪ್ರತಿ ಮನೆಗೂ ನಲ್ಲಿ ನೀರೊದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ ಯೋಜನೆ ಗ್ರಾಮೀಣ ಭಾಗದ ರಸ್ತೆಗಳಿಗೆ ಕಂಟಕ ತಂದೊಡ್ಡುತ್ತಿದೆ.

ದಾಬಸ್‌ಪೇಟೆ: ಪ್ರತಿ ಮನೆಗೂ ನಲ್ಲಿ ನೀರೊದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ ಯೋಜನೆ ಗ್ರಾಮೀಣ ಭಾಗದ ರಸ್ತೆಗಳಿಗೆ ಕಂಟಕ ತಂದೊಡ್ಡುತ್ತಿದೆ.

ನೆಲಮಂಗಲ ತಾಲೂಕಿನ ಪ್ರತಿಯೊಂದು ಹಳ್ಳಿಯಲ್ಲಿಯೂ ಆರೇಳು ತಿಂಗಳ ಹಿಂದೆ ಈ ಯೋಜನೆ ಜಾರಿಗೊಳಿಸಲು ಮುಖ್ಯರಸ್ತೆಗಳನ್ನು ಅಗೆದು ಮತ್ತೆ ಸರಿಪಡಿಸದೆ ಹಾಗೆ ಬಿಡಲಾಗಿದೆ. ಇದರಿಂದ ಜನ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವೃದ್ಧರು, ಮಕ್ಕಳು, ದ್ವಿಚಕ್ರ ವಾಹನಗಳು ಬಿದ್ದು ಗಾಯ ಮಾಡಿಕೊಂಡಿರುವ ಪ್ರಕರಣಗಳಿವೆ. ಗುತ್ತಿಗೆದಾರರು ಕಾಮಗಾರಿ ತ್ವರಿತವಾಗಿ ಮುಗಿಸಿ, ರಸ್ತೆಗುಂಡಿಗಳನ್ನು ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನೆಲಮಂಗಲ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರು ಒದಸಗಿಸುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಡಿ 179 ಕೋಟಿ ವೆಚ್ಚದಲ್ಲಿ 311 ಕಾಮಗಾರಿಗಳನ್ನು ಮಾಡಲಿದ್ದು, 211 ಕಾಮಗಾರಿಗಳ ಕಾರ್ಯ ನಡೆಯುತ್ತಿದ್ದು, ಒಟ್ಟು 48,138 ಮನೆಗಳಿಗೆ ನೀರು ಒದಗಿಸುವ ಯೋಜನೆ ಇದಾಗಿದೆ. ಪ್ರಥಮ ಹಂತದಲ್ಲಿ 111 ಕೋಟಿ ಅನುದಾನ ಬಿಡುಗಡೆಯಾಗಿದೆ. 100 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ.

ನೆಲಮಂಗಲ ತಾಲೂಕಿನ 21 ಗ್ರಾಪಂ ವ್ಯಾಪ್ತಿಯಲ್ಲಿ 5667 ಲಕ್ಷ ರು. ಮಂಜೂರಾಗಿದೆ. ಒಟ್ಟು 289 ಓವರ್‌ಹೆಡ್ ಟ್ಯಾಂಕ್‌ಗಳು, 269 ಕೊಳವೆಬಾವಿ ಮಂಜೂರಾಗಿದೆ. 232 ಕೊಳವೆಬಾವಿ ಕೊರೆದಿದೆ. ಮನೆಗಳಿಗೆ ನೀರಿನ ಸಂಪರ್ಕ ಕೊಡುವ ಗುರಿ ಹೊಂದಲಾಗಿದೆ.

ಅರೆಬರೆ ಕಾಮಗಾರಿಗೆ ಆಕ್ರೋಶ:ಗುತ್ತಿಗೆದಾರರು ಒಂದು ಭಾಗದ ಕೆಲಸ ಪೂರ್ತಿಗೊಳಿಸುವ ಬದಲು ಅರೆಬರೆ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲೊಂದಿಷ್ಟು ಕೆಲಸ ಮಾಡಿ, ಅಲ್ಲೊಂದಿಷ್ಟು ಮಾಡುತ್ತಾರೆ. ಎರಡೂ ಕಡೆ ಪೂರ್ತಿ ಮಾಡದೆ ಮಗದೊಂದು ಕಡೆ ಕೆಲಸ ಆರಂಭಿಸುತ್ತಾರೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು.

ಕಾಮಗಾರಿಯನ್ನು ಪೂರ್ಣಗೊಳಿಸದ ಕಾರಣ ಅರೆಬರೆ ಕಾಮಗಾರಿ ಮುಗಿಸಿ ನಳ ನೀರು ಸಂಪರ್ಕ ನೀಡಲು ಕೆಲವು ಕಡೆ ಆರು ತಿಂಗಳಾದರೂ ಗುಂಡಿಗಳನ್ನು ಮುಚ್ಚಿಲ್ಲ ಹಾಗೂ ಐದಾರು ಅಡಿ ಪೈಪ್‌ಗಳನ್ನು ಭೂಮಿಯಿಂದ ಹೊರಗೆ ಬಿಡಲಾಗಿದೆ.

ಅಧಿಕಾರಿಗಳ ಜಾಣ ಕುರುಡು:

ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ರಸ್ತೆಗಳಿಗೆ ಹಾನಿಯಾಗುತ್ತಿದ್ದರೂ, ಕಾಮಗಾರಿಗಳನ್ನು ವಿಳಂಬ ಮಾಡುವ ಜತೆಗೆ ಕಾಮಗಾರಿಗಳಿಗೆ ಬಳಸುತ್ತಿರುವ ಸಾಮಗ್ರಿಗಳು ಕಳಪೆಯಿಂದ ಕೂಡಿವೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.ಕೋಟ್..............

ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆ , ಚರಂಡಿಗಳು ಹಾಳಾಗಿವೆ. ಎಲ್ಲೆಂದರಲ್ಲೆ ಕಾಂಕ್ರೀಟ್ ತ್ಯಾಜ್ಯ ಗುಡ್ಡೆ ಹಾಕಲಾಗಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ರಸ್ತೆಗಳನ್ನು ಅಗೆದು ಹಾಗೆ ಬಿಟ್ಟಿದ್ದು ಓಡಾಡಲು ಕಷ್ಟವಾಗಿದೆ. ಮನೆಗಳ ಬಳಿ ಮೊಣಕಾಲುದ್ದ ಗುಂಡಿಗಳನ್ನು ಅಗೆದು ಹಾಗೆ ಬಿಡಲಾಗಿದೆ. ವಯೋವೃದ್ಧರು, ಮಕ್ಕಳು ಓಡಾಡುವುದು ಕಷ್ಟವಾಗಿದೆ.

-ಸತೀಶ್, ಹೊನ್ನೇನಹಳ್ಳಿ ನಿವಾಸಿಕೋಟ್..........

ನೆಲಮಂಗಲ ತಾಲೂಕಿನಲ್ಲಿ ಜಲಜೀವನ್ ಮಿಷನ್‌ ಯೋಜನೆಯ ಕೆಲಸ ನಡೆಯುತ್ತಿದ್ದು, ಕಾರ್ಮಿಕರ ಕೊರತೆಯಿಂದ ಸ್ವಲ್ಪ ತಡವಾಗಿದೆ. ಶೀಘ್ರದಲ್ಲೇ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ.

-ಶ್ರೀಕಾಂತ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌,

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ನೆಲಮಂಗಲ

ಪೋಟೋ 1 * 2 * 3 * 4 : ನೆಲಮಂಗಲ ತಾಲ್ಲೂಕಿನ ಹಾಲೇನಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಗೆ ರಸ್ತೆ ಅಗೆದು ಸರಿಪಡಿಸದೇ ಹಾಗೆ ಬಿಟ್ಟಿರುವುದುಪೋಟೋ 5 :

ಕೆ.ಜಿ.ಶ್ರೀನಿವಾಸಪುರದಲ್ಲಿ ಓವರ್ ಟ್ಯಾಂಕ್ ನಿರ್ಮಾಣ ಮಾಡಿ ಅರ್ಧಕ್ಕೆ ಬಿಟ್ಟಿರುವುದು.ಪೋಟೋ 6 :

ಹೊನ್ನೇನಹಳ್ಳಿ ಗ್ರಾಮದಲ್ಲಿ ಅಳವಡಿಸಿರುವ ನಲ್ಲಿಗೆ ನೀರು ಸರಬರಾಜು ಮಾಡದೇ ಇರುವುದು