ಸಾರಾಂಶ
ಜಮಖಂಡಿಗೆ ಹೆಸರು ಬರಲು ಕಾರಣವಾದ ಈ ಜಂಬುಕೇಶ್ವರ ದೇವಸ್ಥಾನ ಎಲ್ಲ ಧರ್ಮಿಯರಿಗೆ ಆರಾಧ್ಯ ದೇವಸ್ಥಾನವಾಗಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಅಮರ ಶಿಲ್ಪಿ ಜಕಣಾಚಾರಿಯವರು 8ನೇ ಶತಮಾನದಲ್ಲಿ ನಿರ್ಮಿಸಿದ ಐತಿಹಾಸಿಕ ಜಂಬುಕೇಶ್ವರ ದೇವಸ್ಥಾನ ಶಿಥಿಲಾವಸ್ಥೆ ಯಾಗಿರುವುದರಿಂದ ಅದರ ಜೀರ್ಣೊದ್ಧಾರಕ್ಕಾಗಿ ಶಾಸಕರ ನಿಧಿಯಲ್ಲಿ ₹13 ಲಕ್ಷ ಅನುದಾನದಲ್ಲಿ ಮೇಲ್ಚಾವಣಿ, ದೇವಸ್ಥಾನದ ತಡೆಗೋಡೆ ವಿವಿಧ ರಿಪೇರಿ ಕಾಮಗಾರಿಗಳು ಮಾಡಲಾಗುತ್ತಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.ನಗರದ ಜಂಬುಕೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿಗೆ ಹೆಸರು ಬರಲು ಕಾರಣವಾದ ಈ ಜಂಬುಕೇಶ್ವರ ದೇವಸ್ಥಾನ ಎಲ್ಲ ಧರ್ಮಿಯರಿಗೆ ಆರಾಧ್ಯ ದೇವಸ್ಥಾನವಾಗಿದೆ. ಹಲವು ವರ್ಷಗಳಿಂದ ದೇವಸ್ಥಾನ ಶಿಥಿಲಗೊಂಡಿದೆ. ತಗ್ಗು ಪ್ರದೇಶದಲ್ಲಿರುವದರಿಂದ ಮಳೆ ನೀರು ದೇವಸ್ಥಾನಕ್ಕೆ ನುಗ್ಗಿ, ದೇವರಪೂಜೆ, ಭಕ್ತರ ದರ್ಶನಕ್ಕೆ ಮಳೆಗಾಲದಲ್ಲಿ ತೊಂದರೆ ಉಂಟಾಗುತ್ತದೆ. ದೇವಸ್ಥಾನದ ಆವರಣದಲ್ಲಿ ಮಳೆನೀರು ಸಂಗ್ರಹವಾಗಿ ಹತ್ತಿರದ ಮನೆಗಳಿಗೆ ಹಾನಿ ಉಂಟುಮಾಡುತ್ತಿದ್ದು ಅದನ್ನು ತಡೆಯಲು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಇತಿಹಾಸ ಹೊಂದಿದ ಜಂಬುಕೇಶ್ವರ ದೇವಸ್ಥಾನಕ್ಕೆ ಪಕ್ಷಾತೀತ ಜಾತ್ಯಾತೀತವಾಗಿದೆ. ಸಾವಿರಾರು ಭಕ್ತರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ರಾಜೇಶ್ವರಿ ಹಿರೇಮಠ ಮಾತನಾಡಿ, ಹಲವು ವರ್ಷಗಳಿಂದ ಈ ದೇವಸ್ಥಾನ ಶಿಥಿಲಗೊಂಡ ಹಿನ್ನಲೆಯಲ್ಲಿ ಇದರ ಜೀರ್ಣೋದ್ಧಾರ ಕಾರ್ಯ ಪ್ರಾರಂಭವಾಗಿದ್ದು ಭಕ್ತರಿಗೆ ಸಂತಸ ಉಂಟುಮಾಡಿದೆ. ಮಳೆಯ ನೀರು ಸಂಗ್ರಹಕ್ಕಾಗಿ ಬೃಹತ್ ಆಕಾರದ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ನೀರನ್ನು ಎತ್ತಿ ಲಕ್ಕನಕೆರೆಗೆ ಸರಬರಾಜು ಮಾಡುವ ಯೋಜನೆ ಹೊಂದಲಾಗಿದೆ. ಬರುವ ಶಿವರಾತ್ರಿ ದಿನದಂದು ಕಾಮಗಾರಿ ಪೂರ್ಣಗೊಳಿಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಹೊಂದಲಾಗಿದೆ. ಈ ಸೇವಾ ಕಾರ್ಯಕ್ಕೆ ಯುವ ಸಹೋದರರು ಸಹಕಾರ ನೀಡುತ್ತಿದ್ದಾರೆ ಎಂದರು.ಅಜೇಯ ಕಡಪಟ್ಟಿ, ಗಣೇಶ ಶಿರಗಣ್ಣವರ, ಶಂಕರ ಕಾಳೆ, ಗುರುರಾಜ ಸಾಲಿಮಠ, ಲಕ್ಷ್ಮಣ ಸಿಂಧೂರ, ಹಣಮಂತ ಬಿಳ್ಳೂರ, ಸುರೇಶ ಸೊನ್ನದ, ಆನಂದ ಜೋಶಿ, ಲಕ್ಷ್ಮಣ ಚಿನಗುಂಡಿ, ಲಕ್ಷ್ಮಣ ಬೀಳಗಿ, ಪಾಪಣ್ಣ ಶಿರೋಳ, ಅರವಿಂದ ಬೀಳಗಿ, ಆನಂದ ದೇಸಾಯಿ, ಶ್ರೀಧರ ಕಂಬಿ, ಮಂಜು ಭೂವಿ, ಶಶಿ ಜಗದಾಳ, ಮಾಂತು ಇತರರು ಇದ್ದರು.