ಸಾರಾಂಶ
ಎಚ್.ಡಿ.ದೇವೇಗೌಡರ ಕುಟುಂಬವನ್ನೇ ಕೊಂಡುಕೊಳ್ಳುವ ಬಗ್ಗೆ ಜಮೀರ್ ಅಹಮದ್ ಖಾನ್ ಮಾತನಾಡಿದ್ದಾರೆ.ಈ ದೇಶದ ಪ್ರಧಾನಿ ಆಗಿದ್ದವರನ್ನು ಖರೀದಿ ಮಾಡುತ್ತೇನೆ ಎನ್ನುವ ಅವರ ಮಾತಿನ ಅರ್ಥವೇನು. ನಿನಗೆ ಧೈರ್ಯ ಇದ್ದರೆ ಬಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸವಾಲೆಸೆದರು.
ಚನ್ನಪಟ್ಟಣ: ಎಚ್.ಡಿ.ದೇವೇಗೌಡರ ಕುಟುಂಬವನ್ನೇ ಕೊಂಡುಕೊಳ್ಳುವ ಬಗ್ಗೆ ಜಮೀರ್ ಅಹಮದ್ ಖಾನ್ ಮಾತನಾಡಿದ್ದಾರೆ.ಈ ದೇಶದ ಪ್ರಧಾನಿ ಆಗಿದ್ದವರನ್ನು ಖರೀದಿ ಮಾಡುತ್ತೇನೆ ಎನ್ನುವ ಅವರ ಮಾತಿನ ಅರ್ಥವೇನು. ನಿನಗೆ ಧೈರ್ಯ ಇದ್ದರೆ ಬಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸವಾಲೆಸೆದರು.
ಚನ್ನಪಟ್ಟಣದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರ ಕುಟುಂಬವನ್ನೆ ಖರೀದಿ ಮಾಡಲು ಪಾಕಿಸ್ತಾನದಿಂದ ಹಣ ಬಂದಿದೆಯಾ? ಇಡೀ ಒಕ್ಕಲಿಗ ಸಮುದಾಯ ಇಲ್ಲವೇ ಇಡೀ ಹಿಂದೂಗಳನ್ನು ಖರೀದಿ ಮಾಡುವ ಹುನ್ನಾರ ನಡೆಯುತ್ತಿದೆಯೇ ಎಂದರು.
ನಾವು ಅರಬ್ನಿಂದ ಬಂದವರಲ್ಲ. ಇಂತಹ ಮಾತುಗಳನ್ನು ಆಡುವವರನ್ನು ಪಕ್ಷದಲ್ಲಿಟ್ಟುಕೊಂಡಿರುವ ಕಾಂಗ್ರೆಸ್ ಗೆ ಮಾನ ಮರ್ಯಾದೆ ಇಲ್ಲ. ನಮ್ಮ ಹಳ್ಳಿಗಳಲ್ಲಿರುವ ಆಂಜನೇಯ-ರಾಮನ ಗುಡಿಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ತೇಗಿರುವ ಜಮೀರ್ ಗೆ ತಾಕ್ಕತ್ತಿದ್ದರೆ ಚನ್ನಪಟ್ಟಣಕ್ಕೆ ಬರಲಿ ಎಂದು ಸವಾಲು ಹಾಕಿದರು.
ಈ ಹಿಂದೆ ಕೋತ್ವಲ್ ಸೇರಿದಂತೆ ಅನೇಕ ರೌಡಿ ಶೀಟರ್ಗಳಿಂದ ಸಾಧ್ಯವಾಗದಷ್ಟು ಹಣವನ್ನು ಇಂದು ಕಾಂಗ್ರೆಸ್ ಸರ್ಕಾರ ವೈನ್ ಸ್ಟೋರ್ಗಳ ಮೂಲಕ ವಸೂಲಿ ಮಾಡುತ್ತಿದೆ.
ವಾರಕ್ಕೆ 18 ಕೋಟಿ ವಸೂಲಿ ಮಾಡುತ್ತಿರುವ ಭ್ರಷ್ಟ ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವೆ. ಆ ಲೂಟಿ ಹಣದಲ್ಲಿ ದೇವೆಗೌಡರ ಕುಟುಂಬ ಖರೀದಿ ಮಾಡುವುದಾಗಿ ಹೇಳುತ್ತಿರುವ
ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಮತದಾರರನ್ನು ಖರೀದಿ ಮಾಡಲಿದೆ ಎನ್ನುವ ಎಚ್ಚರಿಕೆ ಇರಲಿ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಿಗೆ 14 ಸೈಟ್ ಏಕೆ ಬೇಕಂತೆ. ಇದಕ್ಕೆ 62 ಕೋಟಿ ಹಣ ಕೇಳಿದ್ದಾರೆ. ಸಿದ್ದರಾಮಯ್ಯ ಅವರ ತೆರೆದ ಪುಸ್ತಕವನ್ನು ತೆರೆದು ನೋಡಿದರೆ ಬರೀ ಕಳ್ಳತನ, ದರೋಡೆಗಳೇ
ಇವೆ. ದಲಿತರಿಗೆ ಸಾಲ ನೀಡಬೇಕಿದ್ದ 187 ಕೋಟಿಯಲ್ಲಿ 87 ಕೋಟಿಯನ್ನು ಈಗಾಗಲೇ ತಿಂದು ತೇಗಿದ್ದಾರೆ. ಇಂತಹವರಿಗೆ ಅಧಿಕಾರ ನೀಡುವ ಮೊದಲು ಯೋಚನೆ ಮಾಡಿ ಎಂದು ಅಶೋಕ್ ಟೀಕಿಸಿದರು.
ಕಾಂಗ್ರೆಸ್ ಸೇರಿ ಯೋಗೇಶ್ವರ್ ಆತ್ಮಹತ್ಯೆಗೆ ಶರಣು: ಅಶ್ವತ್ಥ ನಾರಾಯಣ
ಚನ್ನಪಟ್ಟಣ: ಹಾಲು ಉತ್ಪಾದಕರಿಗೆ ಸಬ್ಸಿಡಿ ಹಣ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಒಂದು ರುಪಾಯಿ ಅನುದಾನ ನೀಡಲು ಕಾಂಗ್ರೆಸ್ ಸರ್ಕಾರದಲ್ಲಿ ಹಣ ಇಲ್ಲ. ಇದು ಗೊತ್ತಿದ್ದರು ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಲೇವಡಿ ಮಾಡಿದರು.
ಚನ್ನಪಟ್ಟಣದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರೈತರು ಹಾಗೂ ಅಧಿಕಾರಿಗಳ ಆತ್ಮಹತ್ಯೆಗೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ ಎಂದು ಹರಿಹಾಯ್ದರು.
ಈ ಜಿಲ್ಲೆಯಿಂದ 8 ಬಾರಿ ಶಾಸರಕಾಗಿರುವ ಡಿ.ಕೆ.ಶಿವಕುಮಾರ್ ರವರ ಕೊಡುಗೆ ಶೂನ್ಯ. ಸ್ವ ಕ್ಷೇತ್ರಕ್ಕೆ ಒಂದು ಮೆಡಿಕಲ್ ಕಾಲೇಜು ಪಡೆಯುವಷ್ಟು ಶಕ್ತಿ ಅವರಿಗಿಲ್ಲ. ರಾಮನಗರದ ಕಾಲೇಜನ್ನು ಕನಕಪುರಕ್ಕೆ ಕದ್ದೊಯ್ಯುವ ಪ್ರಯತ್ನ ಮಾಡಿದರು. ಚುನಾವಣಾ ಪ್ರಚಾರಕ್ಕೆ ಬಿಟ್ಟರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಮ್ಮೆಯೂ ರಾಮನಗರದ ಕಡೆ ಮುಖ ಮಾಡಿಲ್ಲ. ನಯಾ ಪೈಸೆ ಅನುದಾನವನ್ನು ಜಿಲ್ಲೆಗೆ ನೀಡಿಲ್ಲ. ಆತ್ಮಸಾಕ್ಷಿ ಇಲ್ಲದ ಕಾಂಗ್ರೆಸ್ ಪಡೆಗೆ ಏಕೆ ಮತ ನೀಡಬೇಕು ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದರು.
ಅಧಿಕಾರಿಗಳು - ಗುತ್ತಿಗೆದಾರರನ್ನು ಹೆದರಿಸಿ ಹಣ ವಸೂಲಿ: ಸೋಮಣ್ಣ
ಚನ್ನಪಟ್ಟಣ: ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆಗಳಿಗಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದರು.
ಚನ್ನಪಟ್ಟಣದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನಿರ್ಲಿಪ್ತಗೊಂಡಿದೆ. ಒಂದು ತಪ್ಪು ಮುಚ್ಚಲು ಹೋಗಿ ಅನೇಕ ತಪ್ಪುಗಳನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ದೂರಿದರು.
ಈವರೆಗೂ ಡಿ.ಕೆ.ಶಿವಕುಮಾರ್ ಹೇಳಿದ್ದು ಒಂದೇ ಒಂದು ಮಾತು ನಿಜ. ಶಕ್ತಿ ಯೋಜನೆ ಸ್ಥಗಿತ ಮಾಡುವ ಬಗ್ಗೆ ಹೇಳಿರುವುದೇ ಅವರ ಜೀವನದ ಒಂದು ಸತ್ಯವಾಗಿದೆ. ಚನ್ನಪಟ್ಟಣ ಉಪ
ಚುನಾವಣಾ ಫಲಿತಾಂಶದ ಬಳಿಕ ಅವರ ಮಾತು ನಿಜವಾಗಲಿದೆ. ಬಿ ಫಾರಂ ನೀಡುತ್ತೇವೆ ಎಂದರೂ, ಮ್ಯಾಚ್ಫಿಕ್ಸಿಂಗ್ ಮಾಡಿಕೊಂಡು ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ. ಈ
ಹಿಂದೆ ಸೈಕಲ್ ತುಳಿದಿದ್ದ ಅವರು 3 ತಿಂಗಳಿನಲ್ಲಿ ತಮ್ಮ ಸೈಕಲ್ ಪಂಚರ್ ಮಾಡಿಕೊಂಡರು ಎಂದು ಲೇವಡಿ ಮಾಡಿದರು.
ದೇವೇಗೌಡರ ದೂರದೃಷ್ಟಿಯಂತೆ ಕ್ಷೇತ್ರದ ಅಭಿವೃದ್ಧಿಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಬೇಕಿದೆ. ಏನು ತಪ್ಪು ಮಾಡದೇ 2 ಬಾರಿ ಸೋಲು ಕಂಡಿರುವ ನಿಖಿಲ್ ಕುಮಾರಸ್ವಾಮಿ ಈ ಬಾರಿ ಗೆಲುವು ಸಾಧಿಸಲೇಬೇಕಿದೆ.
ಚುನಾವಣೆಗೆ ಬಾಕಿ ಉಳಿರುವ 48 ಗಂಟೆಯೊಳಗೆ ಕಾಂಗ್ರೆಸ್ ತನ್ನ ಕೈ ಚಳಕ ತೋರಿಸಲಿದೆ. ಹೀಗಾಗಿ ನಮ್ಮ ಕಾರ್ಯಕರ್ತರು ಕಾಂಗ್ರೆಸ್ನ ಕಳ್ಳರ ಸಂತೆಗೆ ತಕ್ಕ ಉತ್ತರ ನೀಡಬೇಕು. ಮತದಾರರು ಕಾಂಗ್ರೆಸ್ನ ಹಣ ಪಡೆದುಕೊಳ್ಳಿ ಬೇಡ ಎನ್ನುವುದಿಲ್ಲ. ಆದರೆ, ಅವರ ಹೀನಾ ಕೃತ್ಯಗಳಿಗೆ ಬಲಿಯಾಗದೆ ಮನಸಾಕ್ಷಿಯಂತೆ ಮತ ಚಲಾಯಿಸಿ ಎಂದು ವಿ.ಸೋಮಣ್ಣ ಮನವಿ ಮಾಡಿದರು.
ಕಾಂಗ್ರೆಸ್ ನಲ್ಲಿ ಕಳ್ಳ ಮತ್ತು ಸುಳ್ಳ ಇದ್ದರು. ಈಗ ಮಳ್ಳನು ಅವರೊಂದಿಗೆ ಸೇರಿಕೊಂಡಿದ್ದಾರೆ. ಕಳ್ಳ ಸುಳ್ಳರ ಹೆಸರು ಎಲ್ಲರಿಗೂ ಗೊತ್ತಿದೆ. ಆ ಮಳ್ಳ ಯೋಗೇಶ್ವರ್ ಆಗಿದ್ದಾರೆ. ಆಲಿಬಾಬ 40 ಕಳ್ಳರ ಕೂಟ ಕಾಂಗ್ರೆಸ್ನಲ್ಲಿದೆ. ವಾಲ್ಮಿಕಿ ಸೇರಿದಂತೆ ಹತ್ತಾರು ಹಗರಣಗಳಲ್ಲಿ ಅಧಿಕಾರಿಗಳ ಹೆಣದ ಮೇಲೆ ಹಣ ಸಂಪಾದಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಉಪಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಬೇಕು.
-ಡಾ.ಎಂ.ವೆಂಕಟಸ್ವಾಮಿ, ಕಾರ್ಯಾಧ್ಯಕ್ಷರು, ಆರ್ಪಿಐ ಪಕ್ಷ
ಬೊಂಬೆ ಹೇಳುತೈತೆ, ನಿಖಿಲ್ ಇಲ್ಲಿನ ಎಂಎಲ್ಎ ಎಂದು. ಈ ಉಪ ಚುನಾವಣೆ ರಾಜ್ಯ ರಾಜಕೀಯದ ದಿಕ್ಸೂಚಿ ಆಗಲಿದೆ. ಭಗೀರಥ ಎಂಬ ಪದ ಇಲ್ಲಿ ಸಾಕಷ್ಟು ವಿರ್ಮಶೆಯಾಗುತ್ತಿದೆ.
ಆದರೆ, ಭಾರತದ ಭಗೀರಥನಾಗಿ ದೇವೇಗೌಡರು ನಿಲ್ಲುತ್ತಾರೆ. ನೀರಾವರಿಗಾಗಿಯೇ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದವರು. ಕಣ್ಣೀರಿನಲ್ಲಿ ಶೇ.1ರಷ್ಟು ನೀರು. 99ರಷ್ಟು ಭಾವನೆ ಗಳಿವೆ. ಆದರೆ, ಇಂತಹ ಕಣ್ಣಿರನ್ನು ವಿರೋಧ ಪಕ್ಷಗಳು ಟೀಕೆ ಮಾಡಿವೆ.
-ಡಾ.ಸಿ.ಎನ್.ಮಂಜುನಾಥ್, ಸಂಸದರು