ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರುತಮ್ಮ ವಿರುದ್ಧದ 26 ಕೋಟಿ ರು. ಅಕ್ರಮ ಆಸ್ತಿ ಸಂಪಾದನೆ ಆರೋಪ ಬಗ್ಗೆ ಸೂಕ್ತ ದಾಖಲೆ ಸಹಿತ ಲೆಕ್ಕ ಕೊಡಲು ಲೋಕಾಯುಕ್ತ ಪೊಲೀಸರಿಂದ ಸಚಿವ ಜಮೀರ್ ಅಹಮ್ಮದ್ ಖಾನ್ ಸಮಯ ಪಡೆದಿದ್ದಾರೆ.
ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪೊಲೀಸರು ಇದೇ ತಿಂಗಳ 21 ರೊಳಗೆ ತಮ್ಮ ಆದಾಯ ಮೀರಿದ ಸಂಪತ್ತಿನ ಬಗ್ಗೆ ಸ್ಪಷ್ಟ ಪುರಾವೆಗಳ ಸಹಿತ ಹಾಜರಾಗಿ ನೀಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಚಿವ ಜಮೀರ್ ಅವರಿಗೆ ತಾತ್ಕಾಲಿಕವಾಗಿ ನಿರಾಳತೆ ಲಭಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.ಅಕ್ರಮ ಆಸ್ತಿ ಸಂಪಾದನ ಪ್ರಕರಣದ ತನಿಖೆಗೆ ನಡೆಸಿ ನ್ಯಾಯಾಲಯಕ್ಕೆ ಸಚಿವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ರಾಜ್ಯಪಾಲರಿಂದ ಅಭಿಯೋಜನೆಗೆ (ಪ್ರಾಸಿಕ್ಯೂಷನ್) ಲೋಕಾಯುಕ್ತ ಪೊಲೀಸರು ಅನುಮತಿ ಕೋರಿದ್ದರು. ಆದರೆ ಪ್ರಾಸಿಕ್ಯೂಷನ್ ಅನುಮತಿಗೆ ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ವರದಿ ಸಲ್ಲಿಸುವಂತೆ ಕಡತವನ್ನು ಲೋಕಾಯುಕ್ತ ಪೊಲೀಸರಿಗೆ ಲೋಕಭವನ ಮರಳಿಸಿತ್ತು. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ಆಕ್ರಮ ಆಸ್ತಿ ಸಂಪತ್ತಿನ ಕುರಿತು ದಾಖಲೆ ನೀಡಲು ಜಮೀರ್ ಸಮಯಾವಕಾಶ ಕೋರಿದ್ದಾರೆ.
ಮುಂದಿನ ನಡೆಯೇನು?:
2005ರಿಂದ 2025ರವರೆಗೆ ಜಮೀರ್ ಶಾಸಕರಾಗಿದ್ದಾರೆ. ಈ ಅವಧಿಯಲ್ಲಿ ಮೂರು ಬಾರಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ರಾಜಕೀಯ ಪ್ರವೇಶಕ್ಕೂ ಮುನ್ನ ಸಾರಿಗೆ ಉದ್ಯಮದಲ್ಲಿ ತೊಡಗಿದ್ದಾಗಿ ಚುನಾವಣಾ ಆಫಿಡವಿಟ್ನಲ್ಲಿ ಉಲ್ಲೇಖಿಸಿದ್ದರು. ಆದರೆ ಶಾಸಕ, ಮಂತ್ರಿಯಾಗಿ ಪಡೆದಿರುವ ವೇತನ, ಇತರೆ ಭತ್ಯೆಗಳು ಹಾಗೂ ಸಾರಿಗೆ ವ್ಯವಹಾರದಲ್ಲಿ ಗಳಿಕೆ ಎಲ್ಲ ಲೆಕ್ಕ ಹಾಕಿ ಜಮೀರ್ ಅವರು 26 ಕೋಟಿ ರು.ಗಳಷ್ಟು ಆದಾಯ ಮೀರಿದ ಆಸ್ತಿ ಸಂಪಾದಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿತ್ತು.
ಅಲ್ಲದೆ, ಇದೇ ಪ್ರಕರಣ ಸಂಬಂಧ ಸಚಿವ ಜಮೀರ್, ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಕೊನೆಗೆ ಸಚಿವರದ್ದು ವಾರ್ಷಿಕ 15 ಲಕ್ಷ ರು. ಆದಾಯವಾಗಿದೆ. ಆದರೆ ಅವರ ಖರ್ಚುವೆಚ್ಚಗಳಿಗೂ ವಾರ್ಷಿಕ ಆದಾಯಕ್ಕಿಂತ ಹೆಚ್ಚಾಗಿದ್ದು, ಆದಾಯಕ್ಕಿಂತ ಒಟ್ಟಾರೆ 26 ಕೋಟಿ ರು. ಆಸ್ತಿ ಪತ್ತೆಯಾಗಿತ್ತು. ಈ ತನಿಖೆ ಪೂರ್ಣಗೊಳಿಸಿದ ಪೊಲೀಸರು, ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆಗೆ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಮನವಿ ಮಾಡಿದ್ದರು.ಈಗ ತಮ್ಮ ಆದಾಯ ಮೀರಿ ಆಸ್ತಿ ಬಗ್ಗೆ ಪುರಾವೆ ಸಲ್ಲಿಕೆಗೆ ಜಮೀರ್ ಟೈಂ ಕೋರಿದ್ದಾರೆ. ಈಗ ಸಚಿವರು ನೀಡುವ ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ಪೊಲೀಸರು ನಿರ್ಧರಿಸಿದ್ದಾರೆ. ಒಂದು ವೇಳೆ ಜಮೀರ್ ಅವರು ನೀಡುವ ಲೆಕ್ಕ ತಪ್ಪಾಗಿದ್ದರೆ ಮತ್ತೆ ದೋಷಾರೋಪ ಪಟ್ಟಿ ಸಲ್ಲಿಕೆಗೆ ರಾಜ್ಯಪಾಲರಿಗೆ ಮನವಿ ಸಹ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಅನುವಾದ ಕೆಲಸ ಶುರು:ಇನ್ನೊಂದೆಡೆ ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕನ್ನಡದಿಂದ ಇಂಗ್ಲಿಷ್ಗೆ ಅನುವಾದಿಸುವ ಕೆಲಸವನ್ನು ಲೋಕಾಯುಕ್ತ ಪೊಲೀಸರು ಭರದಿಂದ ನಡೆಸಿದ್ದಾರೆ. ರಾಜ್ಯಪಾಲರ ಸೂಚನೆ ಮೇರೆಗೆ ತರ್ಜುಮೆ ನಡೆದಿದ್ದು, ಸಚಿವರ ಲೆಕ್ಕದ ಗುಣಾಕಾರ-ಭಾಗಾಕಾರ ಬಳಿಕ ಪ್ರಾಸಿಕ್ಯೂಷನ್ ಅನುಮತಿ ತೀರ್ಮಾನವಾಗಲಿದೆ ಎನ್ನಲಾಗಿದೆ. ಕನ್ನಡ ದಿನ ಪತ್ರಿಕೆ ಓದಿ ಗೊತ್ತಾಯ್ತು ಎಂದಿದ್ದ ಜಮೀರ್:
ನನ್ನ ವಿರುದ್ಧದ ಆದಾಯ ಮೀರಿ ಆಸ್ತಿ ಸಂಪಾದನೆ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಗೆ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ಸಂಗತಿ ಕನ್ನಡ ದಿನ ಪತ್ರಿಕೆ ಓದಿ ಗೊತ್ತಾಯಿತು. ಹೀಗಾಗಿ ನಾನು ನಿರಾಪರಾಧಿ ಎಂದು ಸಾಬೀತುಪಡಿಸಲು ಕೊಂಚ ಸಮಯ ನೀಡಿ ಎಂದು ಲೋಕಾಯುಕ್ತ ಪೊಲೀಸರಿಗೆ ಸಚಿವ ಜಮೀರ್ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯಪಾಲರಿಂದ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ಕುರಿತು ‘ಕನ್ನಡಪ್ರಭ’ ಜು.11ರಂದು ವಿಶೇಷ ವರದಿ ಪ್ರಕಟಿಸಿತ್ತು.