ವಿಕೇಂದ್ರೀಕರಣ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಲು ಜೀವನವನ್ನೇ ಮುಡಿಪಾಗಿಟ್ಟ ಅಪರೂಪದ ವ್ಯಕ್ತಿಗಳಲ್ಲಿ ಎಸ್. ಜನಾರ್ದನ್ ಮರವಂತೆ ಒಬ್ಬರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಕುಂದಾಪುರ: ವಿಕೇಂದ್ರೀಕರಣ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಲು ಜೀವನವನ್ನೇ ಮುಡಿಪಾಗಿಟ್ಟ ಅಪರೂಪದ ವ್ಯಕ್ತಿಗಳಲ್ಲಿ ಎಸ್. ಜನಾರ್ದನ್ ಮರವಂತೆ ಒಬ್ಬರು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಭಾನುವಾರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ, ಜನಪ್ರತಿನಿಧಿ ಪ್ರಕಾಶನ, ಸದ್ಭಾವನಾ ವೇದಿಕೆ ಹಾಗೂ ನಮ್ಮ ಭೂಮಿ ಹಟ್ಟಿಯಂಗಡಿ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಪಂಚಾಯತ್ ರಾಜ್ ತಜ್ಞ ಹಾಗೂ ಹಿರಿಯ ಪತ್ರಕರ್ತ ಎಸ್. ಜನಾರ್ದನ್ ಮರವಂತೆ ಅವರ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಪಂಚಾಯತ್ ರಾಜ್ ತಜ್ಞ ಹಾಗೂ ಹಿರಿಯ ನ್ಯಾಯವಾದಿ ಟಿ.ಬಿ. ಶೆಟ್ಟಿ ಮಾತನಾಡಿ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಆಳವಾಗಿ ಅಧ್ಯಯನ ಮಾಡಿ ಅಪಾರ ಅನುಭವ ಸಂಪಾದಿಸಿದ್ದ ಅಪರೂಪದ ವ್ಯಕ್ತಿತ್ವ ಜನಾರ್ದನ್ ಮರವಂತೆ ಅವರದ್ದಾಗಿತ್ತು. ನೂರಾರು ಕಾಯ್ದೆಗಳ ಕುರಿತು ಅಪೂರ್ವ ಜ್ಞಾನ ಹೊಂದಿದ್ದ ಅವರು ರಮೇಶ್ ಕುಮಾರ್ ಸಮಿತಿಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಅವರ ಸ್ಥಾನವನ್ನು ತುಂಬುವುದು ಅಸಾಧ್ಯ ಎಂದರು.
ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಡ್ಕೆಕೊಡ್ಲು, ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಮಾತನಾಡಿದರು.ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಜನಾರ್ದನ್ ಮರವಂತೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಹಿರಿಯ ಲೇಖಕಿ ಡಾ. ಪಾರ್ವತಿ ಜಿ. ಐತಾಳ್, ಸಹಕಾರಿ ಧುರೀಣ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಪತ್ರಕರ್ತ ಶಶಿಧರ ಹೆಮ್ಮಾಡಿ, ಕಲಾ ಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ಕಾರ್ಮಿಕ ಮುಖಂಡ ಎಚ್. ನರಸಿಂಹ, ಪಂಚಾಯತ್ ರಾಜ್ ತಜ್ಞ ವಿಲ್ಫ್ರೆಡ್ ಡಿಸೋಜ, ಉದ್ಯಮಿ ಪ್ರಶಾಂತ್ ತೋಳಾರ್, ಸಚ್ಚಿದಾನಂದ ಎಂ.ಎಲ್., ಡಾ. ಅತುಲ್ ಕುಮಾರ್ ಶೆಟ್ಟಿ ಚಿತ್ತೂರು, ಮೋಹನಚಂದ್ರ ಉಪ್ಪುಂದ, ಜತೀಂದ್ರ ಮರವಂತೆ, ಸದ್ಭಾವನಾ ವೇದಿಕೆಯ ಯಾಕೂಬ್ ಖಾದರ್ ಗುಲ್ವಾಡಿ, ನಮ್ಮ ಭೂಮಿ ಸಂಸ್ಥೆಯ ಸುರೇಶ್ ಹಾಗೂ ಪ್ರಾಧ್ಯಾಪಕ ರಾಮಾಂಜಿ ಅವರು ನುಡಿನಮನ ಸಲ್ಲಿಸಿದರು. ಜನಪ್ರತಿನಿಧಿ ಪ್ರಕಾಶನದ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.