ಜನಿವಾರ್‌: ಇಬ್ಬರು ಪರೀಕ್ಷಾ ಸಿಬ್ಬಂದಿ ಬಂಧನ, ಬಿಡುಗಡೆ

| Published : May 06 2025, 12:18 AM IST

ಸಾರಾಂಶ

ನೀಟ್‌ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಪ್ರಕರಣದಲ್ಲಿ ಪರೀಕ್ಷಾ ಕೇಂದ್ರದ ಇಬ್ಬರು ಸಿಬ್ಬಂದಿಯನ್ನು ಬಂಧಿಸಿದ್ದು, ಪೊಲೀಸ್‌ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್‌ ಆಯುಕ್ತ ಎಸ್‌.ಡಿ.ಶರಣಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನೀಟ್‌ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಪ್ರಕರಣದಲ್ಲಿ ಪರೀಕ್ಷಾ ಕೇಂದ್ರದ ಇಬ್ಬರು ಸಿಬ್ಬಂದಿಯನ್ನು ಬಂಧಿಸಿದ್ದು, ಪೊಲೀಸ್‌ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್‌ ಆಯುಕ್ತ ಎಸ್‌.ಡಿ.ಶರಣಪ್ಪ ತಿಳಿಸಿದ್ದಾರೆ.

ನಗರದ ಸೇಂಟ್‌ ಮೇರಿ ಕಾಲೇಜಿನ ಪರೀಕ್ಷಾ ಕೇಂದ್ರದೊಳಗೆ ಬಿಡುವಾಗ ಶ್ರೀಪಾದ ಸುಧೀರ್‌ ಪಾಟೀಲ್‌ ಎನ್ನುವ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ಸೂಚಿಸಲಾಗಿತ್ತು. ಈ ಕುರಿತು ಪರೀಕ್ಷಾ ಕೇಂದ್ರದಲ್ಲಿ ತಪಾಸಣೆ (ಫ್ರಿಸ್ಕಿಂಗ್‌) ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಹೊರಗುತ್ತಿಗೆ ಸಂಸ್ಥೆಗೆ ಸೇರಿದ್ದ ಸಿಬ್ಬಂದಿ ಗಮೇಶ ಹಾಗೂ ಶರಣಗೌಡ ಅವರ ವಿರುದ್ಧ ಕಲಬುರಗಿಯ ಸ್ಟೇಷನ್‌ ಬಜಾರ್‌ ಠಾಣೆಗೆ ನೊಂದ ವಿದ್ಯಾರ್ಥಿ ದೂರು ನೀಡಿದ್ದು, ಎಪ್‌ಐಆರ್‌ ದಾಖಲಾಗಿದೆ. ವಿದ್ಯಾರ್ಥಿ ದೂರನ್ನಾಧರಿಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಕಾಯ್ದೆ 298ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತರು ಧೃಢಪಡಿಸಿದ್ದಾರೆ.

ವಿದ್ಯಾರ್ಥಿ ಅಳಲು: ಪರೀಕ್ಷಾ ಕೇಂದ್ರಕ್ಕೆ ಬಂದಾಗ ತಪಾಸಣೆ ಮಾಡಿ ಮೈಯೊಳಗೆ ದಾರ ಇದ್ದರೆ ತೆಗೆದು ಬಾ ಅಂದರು. ಆಗ ನಾನು, ಅದು ಧರ್ಮೋಪದೋಶ ಮಾಡಿ ಹಾಕಿರುವ ಜನಿವಾರ. ಅದನ್ನು ತೆಗೆಯಲಾಗದು ಎಂದೆ. ಆದರೂ ತೆಗೆಸಿದರು. ಅಳುತ್ತಲೇ ಒಳಗೆ ಹೋದ ನಾನು, ಓಎಂಆರ್‌ ಶೀಟ್‌ನಲ್ಲಿ ನೋಂದಣಿ ಸಂಖ್ಯೆಯನ್ನೇ ತಪ್ಪು ಬರೆದಿರುವೆ. ಜನಿವಾರ ತೆಗೆಸಿ ಮಾನಸಿಕ ಹಿಂಸೆ ನೀಡಿದ ಸಿಬ್ಬಂದಿಗೆ, ಘಟನೆ ನಡೆದ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೊಂದ ವಿದ್ಯಾರ್ಥಿ ಶ್ರೀಪಾದ್‌ ದೂರಿನಲ್ಲಿ ವಿವರಿಸಿದ್ದಾನೆ.