ಜನೌಷಧಿ ಕೇಂದ್ರ ಸ್ಥಗಿತ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

| Published : Jun 02 2025, 11:55 PM IST / Updated: Jun 02 2025, 11:56 PM IST

ಸಾರಾಂಶ

ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಡಂಬಳ ಹೋಬಳಿ ಕದಾಂಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಬಿಜೆಪಿ ವತಿಯಿಂದ ಕೈಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.

ಡಂಬಳ: ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಡಂಬಳ ಹೋಬಳಿ ಕದಾಂಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಬಿಜೆಪಿ ವತಿಯಿಂದ ಕೈಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಗಿಡ್ಡಪ್ಪ ಹಾರೂಗೇರಿ ಮಾತನಾಡಿ, ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನೌಷಧ ಕೇಂದ್ರ ಆರಂಭಿಸಿದರು. ಬಡವರಿಗೆ ಔಷಧಿಗಳು ಅತಿ ಕಡಿಮೆ ದರದಲ್ಲಿ ದೊರೆಯುತ್ತಿದ್ದವು. ರಾಜ್ಯ ಸರ್ಕಾರ ಜನೌಷಧಿ ಕೇಂದ್ರ ಮುಚ್ಚುವ ಹೇಳಿಕೆ ನೀಡಿದ್ದು, ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಡವರಿಗೆ ಆರೋಗ್ಯ ಸಂಜೀವಿನಿಯಾಗಿದ್ದ ಕೇಂದ್ರ ಸರ್ಕಾರದ ಜನಪರ ಯೋಜನೆಯನ್ನು ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದು ನಮ್ಮ ರಾಜ್ಯದ ಬಡಜನರಿಗೆ ಮಾಡಿದ ಅನ್ಯಾಯವಾಗಿದೆ. ತಕ್ಷಣ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಆದೇಶ ಹಿಂಪಡೆಯಬೇಕು ಎಂದು ಹೇಳಿದರು.

ಹಿರಿಯರಾದ ವೆಂಕನಗೌಡ ಪಾಟೀಲ ಮಾತನಾಡಿ, ಜನೌಷಧಿ ಕೇಂದ್ರಗಳನ್ನು ಮುಂದುವರಿಸಬೇಕು. ಇದರಲ್ಲಿ ರಾಜಕೀಯ ಕುತಂತ್ರ ಎದ್ದು ಕಾಣುತ್ತಿದೆ. ಖಾಸಗಿ ಔಷಧಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿರುವುದು ಎದ್ದು ಕಾಣುತ್ತಿದೆ. ಬಡರೋಗಿಗಳ ಪರ ನಿಲ್ಲಬೇಕಾದ ಸರ್ಕಾರ ಬಡರೋಗಿಗಳ ಮೈಮೇಲೆ ಬರೆ ಎಳೆಯುತ್ತಿದೆ. ರಾಜ್ಯ ಸರ್ಕಾರ ಆದೇಶ ರದ್ದು ಮಾಡದಿದ್ದರೆ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಹಿರಿಯರಾದ ಮುದ್ಲಿಂಗಪ್ಪ ಕೊರ್ಲಹಳ್ಳಿ, ಸಿದ್ದನಗೌಡ ಪಾಟೀಲ, ಪಾಂಡಪ್ಪ ಚವ್ಹಾಣ, ಟಾಕರೆಪ್ಪ ಲಮಾಣಿ, ಈರಪ್ಪ ಅರಕಾಲ, ಮೈಲಾರಪ್ಪ ನೋಟಗಾರ, ಅಂದಪ್ಪ ಸೋಗಿ, ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ ಹರ್ಲಾಪುರಮಠ, ಶಿವಾನಂದ ಬಂಡಿ, ಪ್ರಕಾಶ ಕೊತಂಬರಿ, ರಾಜೇಶ ಅರಕಾಲ, ಪ್ರಭು ಕೊರ್ಲಹಳ್ಳಿ, ಶಿವಾನಂದ ಹರಿಜನ ಸೋಮಯ್ಯ ಹಿರೇಮಠ, ಶಂಭು ಸಂದಿಗೋಡ, ಲಕ್ಷ್ಮಣ ಬೂದಿಹಾಳ, ಪ್ರಮೋದ ನಾಡಗೌಡ್ರ ಸೇರಿದಂತೆ ಪಕ್ಷದ ಮುಖಂಡರು ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.