ಮುಳಗುಂದ: ಸಮಾಜದಲ್ಲಿ ಸಹಬಾಳ್ವೆಯನ್ನು ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡು ಜಾತ್ರಾ ಮಹೋತ್ಸವಗಳು ನಡೆಯುತ್ತವೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ತಿಳಿಸಿದರು.
ಪಟ್ಟಣದ ಐತಿಹಾಸಿಕ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಅನುಭಾವ ಗೋಷ್ಠಿ- 2ರಲ್ಲಿ ಮಾತನಾಡಿ, ಜಾತ್ರೆಗಳು ಸಹಬಾಳ್ವೆ ಮತ್ತು ಸಾಮರಸ್ಯದ ಪ್ರಮುಖ ಸಂಕೇತಗಳಾಗಿ ಹೊರಹೊಮ್ಮುತ್ತಿವೆ. ಜಾತಿ, ಧರ್ಮ ಎಂಬ ಭೇದಗಳನ್ನು ಮೀರಿ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುವ ಸಾಮಾಜಿಕ ಶಕ್ತಿ ಜಾತ್ರೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.ಪ್ರಾಚ್ಯವಸ್ತು ಇಲಾಖೆಯಿಂದ ಅಂದಾಜು ಒಂದು ಕೋಟಿ ವೆಚ್ಚದಲ್ಲಿ ಐತಿಹಾಸಿಕ ಸಿದ್ದೇಶ್ಚರ ದೇವಸ್ಥಾನದ ಅಭಿವೃದ್ಧಿಗೆ ಚಿಂತನೆ ನಡೆದಿದೆ. ಅದೇ ರೀತಿ ಪಟ್ಟಣದಲ್ಲಿ ಈಜುಕೊಳ ನಿರ್ಮಾಣ ಟೆಂಡರ್ ಹಂತದಲ್ಲಿದ್ದು, ಪಟ್ಟಣದಲ್ಲಿ ನಡೆದ ಅಭಿವೃದ್ಧಿ ಕೆಲಸಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು.ಎಲ್ಲ ಯುವಕರು, ಹಿರಿಯರು ಪಾಲನೆ ಮಾಡಬೇಕು. ಸಮಸಮಾಜ ನಿರ್ಮಾಣ ಮಾಡುವ ಮನೋಭಾವ ಎಲ್ಲರಲ್ಲಿಯೂ ಮೂಡಬೇಕು. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಆ ನಿಟ್ಟಿನಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಭಾಗವಹಿಸಲು ಹಿರಿಯರ ಮಾರ್ಗದರ್ಶನ, ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
ಗಜೇಂದ್ರಗಡದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರೊ. ಕರಿಯಪ್ಪ ಕೊಡವಳ್ಳಿ ಮಾತನಾಡಿ, ಮನುಷ್ಯನ ಬದುಕಿನಲ್ಲಿ ಜನಪದ ಹುಟ್ಟಿನಿಂದ ಸಾವಿನವರೆಗೂ ಅತ್ಯಂತ ಪ್ರಮುಖವಾದ ಮಹತ್ವ ಹೊಂದಿದೆ. ಜನಪದ ಇಲ್ಲದೆ ಜೀವನವೇ ಇಲ್ಲ. ಜನಪದರು ಪ್ರಕೃತಿಯ ಆರಾಧಕರು. ಅಂತಹ ಸೊಗಸಾದ ಬದುಕು, ಕಲೆಗಳು ವರ್ತಮಾನದಲ್ಲಿ ಕಣ್ಮರೆಯಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು, ಕುಕನೂರಿನ ಮಹಾದೇವ ಸ್ವಾಮಿಗಳು ಹಾಗೂ ನೀಲಗುಂದದ ಪ್ರಭುಲಿಂಗ ದೇವರು ಆಶೀರ್ವಚನ ನೀಡಿದರು. ಪ್ರಗತಿಪರ ರೈತರು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಕೆ.ಎಲ್. ಕರಿಗೌಡ್ರ, ಡಿ.ಎಸ್. ನೀಲಗುಂದ, ವಿಜಯ ನೀಲಗುಂದ, ಎಸ್.ಸಿ. ಬಡ್ನಿ, ಅಶೋಕ ಹುಣಸಿಮರದ, ಮಹಾದೇವಪ್ಪ ಗಡಾದ, ಮಹಾಂತಪ್ಪ ನೀಲಗುಂದ, ಶಿವಬಸವ ಹಸಬಿ, ಬಸವರಾಜ ಹಾರೋಗೇರಿ, ಹೊನ್ನಪ್ಪ ನೀಲಗುಂದ, ಅಶೋಕ ಮೆಣಸಿನಕಾಯಿ, ಮನ್ಸೂರ ಹಣಗಿ, ಬಸವರಾಜ ಬಿ. ಸುಂಕಾಪುರ, ಗುಡದಪ್ಪ ಘಂಟಿ, ಮಂಜುನಾಥ ಅಣ್ಣಿಗೇರಿ ಸೇರಿದಂತೆ ಜಾತ್ರಾ ಸಮಿತಿ ಸದಸ್ಯರು, ಭಕ್ತರು ಇದ್ದರು.