ರಾಮನಗರ: ಜೆಡಿಎಸ್ ತಾಲೂಕು ಘಟಕ ವತಿಯಿಂದ ಸೋಮವಾರ ಮಾಜಿ ಪ್ರಧಾನಿ ದೇವೇಗೌಡರ 94ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.

ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪಕ್ಷದ ಮುಖಂಡರು 101 ಈಡ ಗಾಯಿ ಹೊಡೆದರು. ಅಲ್ಲದೆ, ದೇವೇಗೌಡರ ಸಾಧನೆಯ ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ವಿತರಿಸಿದರು. ಆನಂತರ ಪಕ್ಷದ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ತಾಲೂಕು ಘಟಕದ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯ ರಂಗದ ಭೀಷ್ಮರಾಗಿದ್ದಾರೆ. ನೀರಾವರಿ ಹರಿಕಾರರಾಗಿ, ಬೃಹತ್ ಯೋಜನೆಗಳನ್ನು ರೂಪಿಸುವ ಮೂಲಕ ರೈತರ ಬಾಳಿ ಆಶಾಕಿರಣರಾಗಿದ್ದಾರೆ. ಇಳಿ ವಯಸ್ಸಿನಲ್ಲಿಯಲ್ಲಿಯು ಪಕ್ಷ ಸಂಘಟನೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅವರ 100ನೇ ವರ್ಷದ ಜನ್ಮದಿನವನ್ನು ಇಲ್ಲೇ ಆಚರಿಸುವಂತೆ ಚಾಮುಂಡಿ ಆಶೀರ್ವಾದ ಮಾಡಲಿ ಎಂದು ಪ್ರಾರ್ಥಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿ, ದೇಶದ ಅತ್ಯುನ್ನತ ಹುದ್ದೆ ಪ್ರಧಾನಿ ಸ್ಥಾನ ಆಲಂಕರಿಸಿ, ದೇಶಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅದರಲ್ಲೂ ರೈತರಿಗೆ ಹೆಚ್ಚಿನ ಅನುಕೂಲವಾಗುವಂತಹ ಯೋಜನೆಗಳನ್ನು ನೀಡುವ ಮೂಲಕ ಮಣ್ಣಿನ ಮಗ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಹೇಳಿದರು.

ಇನ್ನು 1994ರಲ್ಲಿ ರಾಮನಗರದ ಶಾಸಕರಾಗಿ ಆಯ್ಕೆಯಾದ ದೇವೇಗೌಡರು ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಸಿದಲ್ಲದೇ ಪ್ರಧಾನಿಯಾಗಿ ತಮ್ಮ 11 ತಿಂಗಳಲ್ಲಿ ಯಾರು ಮಾಡದ ಸಾಧನೆಯನ್ನು ಮಾಡಿ ತೋರಿಸಿದರು. ದೇವೇಗೌಡರವರ ಹಾದಿಯಲ್ಲಿಯೇ ಸಾಗಿದ ಕುಮಾರಸ್ವಾಮಿರವರು ರಾಮನಗರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈಗಿನ ರಾಜಕಾರಣಿಗಳಿಗೆ ದೇವೇಗೌಡರು ಆದರ್ಶವಾಗಿದ್ದಾರೆ ಎಂದು ಗುಣಗಾನ ಮಾಡಿದರು.


ಈ ವೇಳೆ ಪಕ್ಷದ ಮುಖಂಡರಾದ ಉಮೇಶ್, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಹೋಟೆಲ್ ಉಮೇಶ್, ಜಿ.ಟಿ.ಕೃಷ್ಣ, ರಮೇಶ್, ಪ್ರಕಾಶ್, ಪಾದರಹಳ್ಳಿ ಚಂದ್ರಶೇಖರ್, ಕಾಂತರಾಜು,ಗೂಳಿ ಕುಮಾರ್, ರಾಜಶೇಖರ್, ಅಂಜನಾಪುರ ವಾಸು, ಗೋವಿಂದರಾಜು, ಜಯಕುಮಾರ್, ಮಹದೇವ್, ವೆಂಕಟೇಶ್, ಶೋಭಾ ಆರ್.ಗೌಡ ಮತ್ತಿತರರು ಹಾಜರಿದ್ದರು.

18ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಜೆಡಿಎಸ್ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು.