ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಜನತಾದಳ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಅಂಗವಾಗಿ ಜೂ.30ರಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ನೋಂದಣಿ ಕಾರ್ಯಕ್ರಮಕ್ಕೆ ತಾಲೂಕಿನ ಜೆಡಿಎಸ್ ಕಾರ್ಯಕರ್ತರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಪಟ್ಟಣದ ಹೊರ ವಲಯದ ದಂಡಿನ ಮಾರಮ್ಮ ದೇವಸ್ಥಾನದಿಂದ ಶಾಂತಿ ಸಮುದಾಯ ಭವನದವರೆಗೆ ಬೈಕ್ ಜಾಥಾ ಮೂಲಕ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆತರಲಾಗುವುದು ಎಂದರು.ಜೆಡಿಎಸ್ ಅನ್ನು ಪ್ರಬಲವಾಗಿ ಸಂಘಟಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಣ ತೊಟ್ಟಿದ್ದು, ತಳಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಲು ಇಂತಹ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕು ಆಡಳಿತ ವ್ಯವಸ್ಥೆ ಕುಸಿತ:ತಾಲೂಕು ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಪೊಲೀಸ್ ಇಲಾಖೆ ಶಾಸಕರ ಅಣತೆಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಸಂವಿಧಾನತ್ಮಾಕವಾಗಿ ಕ್ಷೇತ್ರದಲ್ಲಿ ಆಡಳಿತ ನಡೆಯದೇ ಕಾಂಗ್ರೆಸ್ ಆಡಳಿತ ಜಾರಿಯಲ್ಲಿದೆ. ಹಲಗೂರು ಮತ್ತು ಬೆಳಕವಾಡಿ ಪೊಲೀಸರು ಹೆದರಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.
ಹನಿ ನೀರಾವರಿ ಯೋಜನೆ ಶೀಘ್ರಯೇ ಜಾರಿಯಾಗಬೇಕು, ರೈತರಿಂದ ಹಣ ಸಂಗ್ರಹಣೆ ಮಾಡಲಾಗುತ್ತಿದೆ. ರೈತರು ಯಾವುದೇ ಹಣ ನೀಡಲು ಮುಂದಾಗಬಾರದು. ಜಮೀನನ್ನು ಖಾಸಗಿ ವ್ಯಕ್ತಿಗೆ ನೀಡಿ ವ್ಯವಸಾಯ ಮಾಡುವ ಹುನ್ನಾರ ನಡೆಯುತ್ತಿದೆ. ರೈತರು ಯಾವ ಬೆಳೆಯನ್ನಾದರೂ ಬೆಳೆದುಕೊಳ್ಳಲಿ ಮೊದಲು ನೀರು ಕೊಡಿ ಎಂದು ಆಗ್ರಹಿಸಿದರು.ಯೋಜನೆಯಿಂದ ಹೊರ ಇರುವ ಉಳಿದ 23 ಎಕರೆಗೆ ನೀರು ಕೊಡಿಸುವುದಕ್ಕೆ ಮುಂದಾಗಬೇಕು. ಇಲ್ಲದಿದ್ದರೇ ರೈತರೊಂದಿಗೆ ಪ್ರತಿಭಟನೆಯನ್ನು ಆರಂಭಿಸುವುದಾಗಿ ಎಚ್ಚರಿಸಿದರು.
ಪುರಸಭೆ ಅಧ್ಯಕ್ಷರು ಮಾತಿನಂತೆ ರಾಜೀನಾಮೆ ನೀಡದೇ ಬಹುಸಂಖ್ಯಾತ ಹೊಂದಿರುವ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಜೆಡಿಎಸ್ನಿಂದ ಗೆದ್ದು ಕಾಂಗ್ರೆಸ್ಗೆ ಬೆಂಬಲ ಸೂಚಿಸುತ್ತಿರುವ ಕೆಲ ಪುರಸಭೆ ಸದಸ್ಯರು ಮೊದಲು ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕೆಂದು ಸವಾಲು ಹಾಕಿದರು.ಸುದ್ದಿಗೋಷ್ಠಿಯಲ್ಲಿ ಪುರಸಭೆ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ನಂದಕುಮಾರ್, ಸಿದ್ದರಾಜು, ಮುಖಂಡರಾದ ಹನುಮಂತು, ಗಣೇಶ್, ಕಾಂತರಾಜು, ಮಲ್ಲೇಶ್, ಕಂಬರಾಜು ಸೇರಿದಂತೆ ಇತರರು ಇದ್ದರು.