ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಾಗುವುದು.

ಸುದ್ದಿಗಾರರ ಜೊತೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ

ಕನ್ನಡಪ್ರಭ ವಾರ್ತೆ ಭಟ್ಕಳ

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಾಗುವುದು. ಕೇಂದ್ರ ಸಚಿವ ಮತ್ತು ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿಯವರು ಪಕ್ಷದ ಜಿಲ್ಲೆಯ ಜವಾಬ್ದಾರಿ ನನಗೆ ನೀಡಿದ್ದು, ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಹೇಳಿದರು.

ಸೋಮವಾರ ಪಟ್ಟಣದಲ್ಲಿ ಕಾರ್ಯಕರ್ತರ ಸಭೆ ನಡೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಕೇಂದ್ರದ ಎನ್‌ಡಿಎ ಪಕ್ಷದ ಜೊತೆ ಜೆಡಿಎಸ್‌ ಪಕ್ಷ ಮೈತ್ರಿ ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಕುಮಾರ ಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಿದ್ದಾರೆ. ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್‌ ಸರಕಾರ ಕಿತ್ತೊಗೆಯಲು ಮುಂಬರುವ ಚುನಾವಣೆಗಳಲ್ಲಿ ನಾವು ಜೆಡಿಎಸ್‌ ಗೆಲ್ಲಿಸುವುದರ ಜೊತೆಗೆ ಎನ್.ಡಿ.ಎ ಮೈತ್ರಿಕೂಟ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತೆ ಶ್ರಮಿಸಬೇಕು ಎಂದರು.

ಎನ್.ಡಿ.ಎ ಮೈತ್ರಿಕೂಟದಲ್ಲಿ ನಮ್ಮ ಪಕ್ಷದ ಕುಮಾರಸ್ವಾಮಿಯವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಬೇಕು ಎನ್ನುವ ಆಶಯದೊಂದಿಗೆ ಪಕ್ಷಸಂಘಟನೆಗೆ ಮುಂದಾಗಿರುವುದಾಗಿ ತಿಳಿಸಿದರು.

ಭಟ್ಕಳದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗೆ ಉತ್ತಮ ಬೆಂಬಲ ದೊರತಿದೆ. ಈ ಹಿಂದೆ ಪಕ್ಷದಲ್ಲಿದಂತಹ ಅಲ್ಪಸಂಖ್ಯಾತ ಮುಖಂಡರು ಈಗ ಪಕ್ಷ ಬಲವರ್ಧನೆಗೆ ನಮ್ಮ ಜೊತೆ ಕೈಜೋಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಟ್ಕಳದಲ್ಲಿ ಜೆಡಿಎಸ್‌ ಪಕ್ಷದ ನೂತನ ಪದಾಧಿಕಾರಿಗಳ ಸಮಿತಿ ರಚಿಸಿ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಪಿ.ಟಿ. ನಾಯ್ಕ, ದತ್ತಾತ್ರೆಯ ಪಟಗಾರ, ಈಶ್ವರ ನಾಯ್ಕ, ಕೃಷ್ಣಾನಂದ ಪೈ, ರಾಜವರ್ದನ ನಾಯ್ಕ, ಬಾಬು ಗೌಡ, ಶಂಕರ ನಾಯ್ಕ, ಜೈನುಲಾದ್ದೀನ್ ಮುಂತಾದವರಿದ್ದರು.