ಹುಬ್ಬಳ್ಳಿ-ಧಾರವಾಡ ಅವಳಿ ನಗರವು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದ್ದರೂ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗಿದೆ. ಧಾರವಾಡಕ್ಕೆ ವಿವಿಧೆಡೆಯಿಂದ ಶಿಕ್ಷಣ, ಉದ್ಯೋಗಕ್ಕಾಗಿ ಲಕ್ಷಾಂತರ ಜನರು, ವಿದ್ಯಾರ್ಥಿಗಳು ಬರುತ್ತಾರೆ. ಆದರಿಲ್ಲಿ ಒಳಚರಂಡಿ, ಉದ್ಯಾನವನ, ಬೀದಿದೀಪ, ವಿದ್ಯಾರ್ಥಿಗಳ ವಸತಿ ನಿಲಯಗಳ ಸಂಖ್ಯೆ ತೀರಾ ಕಡಿಮೆ ಇವೆ.

ಧಾರವಾಡ:

ಸಾಂಸ್ಕೃತಿಕ ನಗರಿ, ವಿದ್ಯಾನಗರಿ ಎಂದೆಲ್ಲ ಕರೆಯುವ ಧಾರವಾಡ ಜಿಲ್ಲೆಯ ಅಭಿವೃದ್ಧಿ ನಿರೀಕ್ಷೆಯಂತಿಲ್ಲ. ಹೀಗಾಗಿ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಬೇಕೆಂದು ಆಗ್ರಹಿಸಿ ಜೆಡಿಯು ವತಿಯಿಂದ ಜಿಲ್ಲಾಡಳಿತದ ಮೂಲಕ ಶುಕ್ರವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಯು ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಕಮತರ, ಹು-ಧಾ ಅವಳಿ ನಗರವು ಆಧುನಿಕತೆಗೆ ಒಗ್ಗಿಕೊಳ್ಳುತ್ತಿದ್ದರೂ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗಿದೆ. ಧಾರವಾಡಕ್ಕೆ ವಿವಿಧೆಡೆಯಿಂದ ಶಿಕ್ಷಣ, ಉದ್ಯೋಗಕ್ಕಾಗಿ ಲಕ್ಷಾಂತರ ಜನರು, ವಿದ್ಯಾರ್ಥಿಗಳು ಬರುತ್ತಾರೆ. ಆದರಿಲ್ಲಿ ಒಳಚರಂಡಿ, ಉದ್ಯಾನವನ, ಬೀದಿದೀಪ, ವಿದ್ಯಾರ್ಥಿಗಳ ವಸತಿ ನಿಲಯಗಳ ಸಂಖ್ಯೆ ತೀರಾ ಕಡಿಮೆ ಇವೆ. ಜನಸಂಖ್ಯೆ, ಕ್ಷೇತ್ರ ಆಧಾರಿತವಾಗಿ ಹೊಸ ಪೊಲೀಸ್‌ ಠಾಣೆಗಳ ಅಗತ್ಯವೂ ಇದೆ ಎಂದರು.

ಧೂಳುಮುಕ್ತ ನಗರ ಒಳಗೊಂಡು ಧಾರವಾಡ ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಕೈಗಾರಿಕೆ, ತಂತ್ರಜ್ಞಾನ, ಆರೋಗ್ಯ ಕ್ಷೇತ್ರ, ಸಾರಿಗೆ, ಉದ್ಯೋಗ, ಸಾಕ್ಷರತೆ, ವ್ಯಾಪಾರ, ನಗರ, ಉಪನಗರಗಳ ಒಳಚರಂಡಿ, ವೈಜ್ಞಾನಿಕ ರಸ್ತೆಗಳ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಲು ₹ 1000 ಕೋಟಿ ಹಾಗೂ ಬೆಣ್ಣೆ ಹಳ್ಳ ಅಭಿವೃದ್ಧಿಗೆ ₹ 2000 ಸೇರಿ ₹ 3000 ಕೋಟಿ ಅನುದಾನ ಬಿಡಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ಜಾವೇದ್ ಬೆಳಗಾವಿ, ಮಂಜುನಾಥ್ ಅಂಗಡಿ, ವೆಂಕರೆಡ್ಡಿ ತರ‍್ಲಾಪುರ, ಪ್ರವೀಣ್ ಪಾಟೀಲ್, ಶಿವಾನಂದ ಅಮರಶೆಟ್ಟಿ, ಸಿರಾಜ್ ಬಡೇಮಿಯ, ಬಸವರಾಜ್ ಮೇಸ್ತ್ರಿ, ರುದ್ರಯ್ಯ ಹಿರೇಮಠ ಇದ್ದರು.