ಕನ್ನಡಪ್ರಭ ವಾರ್ತೆ ಮಂಡ್ಯ
ಎಸ್ಬಿಇಟಿ ಶಿಕ್ಷಣ ಸಮೂಹ ಸಂಸ್ಥೆಯಾದ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಇ.ಎಸ್. ಪ್ರೀತಮ್ಗೌಡ ಅವರು ಜೆಇಇ ಅಡ್ವಾನ್ಸ್ ಪರೀಕ್ಷೆಯಾದ ಎಐಆರ್ನಲ್ಲಿ ೭೫ನೇ ರ್ಯಾಂಕ್ ಪಡೆಯುವ ಮೂಲಕ ಮಂಡ್ಯ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಕಾಲೇಜಿಗೆ ಕೀರ್ತಿ ತಂದಿರುವ ಹಿನ್ನೆಲೆಯಲ್ಲಿ ಮಾಂಡವ್ಯ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು ವತಿಯಿಂದ ಅಭಿನಂದಿಸಲಾಯಿತು.ಪ್ರೀತಮ್ಗೌಡ ಅವರು ಪಾಂಡವಪುರ ತಾಲೂಕಿನ ಈರೇಗೌಡನಕೊಪ್ಪಲು ಗ್ರಾಮದ ಇ.ವಿ.ಶಿವಸ್ವಾಮಿ ಮತ್ತು ಜಿ.ಎಸ್.ಭವ್ಯಶ್ರೀ ದಂಪತಿ ಪುತ್ರ. ಪ್ರೌಢಶಾಲಾ ಶಿಕ್ಷಣವನ್ನು ಕೆರೆತೊಣ್ಣೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮುಗಿಸಿ ಎಸೆಸ್ಸೆಲ್ಸಿಯಲ್ಲಿ ಶೇ.೮೬ ರಷ್ಟು ಮತ್ತು ಪಿಯುಸಿಯಲ್ಲಿ ಶೇ.೮೮ರಷ್ಟು ಅಂಕ ಗಳಿಸಿದ್ದಾರೆ.
ಎಸ್ಬಿಇಟಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಅವರು ಪ್ರೀತಮ್ಗೌಡ ಅವರನ್ನು ಅಭಿನಂದಿಸಿ ಮಾತನಾಡಿ, ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನಲ್ಲಿ ಓದಿದ ವಿದ್ಯಾರ್ಥಿ ಪ್ರೀತಮ್ಗೌಡ ಅವರು ಜೆಇಇನಲ್ಲಿ ಉತ್ತಮ ಅಂಕ ಗಳಿಸಿ ಮದ್ರಾಸ್ನಲ್ಲಿರುವ ಐಐಟಿ ಕಾಲೇಜಿನಲ್ಲಿ ಪ್ರವೇಶಾತಿ ಪಡೆದು ಕಾಲೇಜು ಹಾಗೂ ಜಿಲ್ಲೆಗೆ ಹೆಸರು ತಂದುಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು.ಪ್ರೀತಮ್ ಗೌಡ ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣಕ್ಕಾಗಿ ಹೊರದೇಶಕ್ಕೆ ಹೋಗಿ ಅಲ್ಲಿಯ ತಾಂತ್ರಿಕ ವಿಷಯಗಳನ್ನು ತಿಳಿದುಕೊಂಡು ಭಾರತ ದೇಶಕ್ಕೆ ಬಂದು ಒಳ್ಳೆಯ ಇಂಜಿನಿಯರ್ ಆಗಿ ಸಂಶೋಧನಾ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲಿ ಎಂದು ಆಶಯ ವ್ಯಕ್ತಪಡಿಸಿದರು.
ಎಸ್ಬಿಇಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲ ಎಚ್.ಎಂ. ಶ್ರೀನಿವಾಸ್, ಶೈಕ್ಷಣಿಕ ಪಾಲುದಾರರಾದ ಚೇತನ್ಕೃಷ್ಣ, ಎಂ.ಆರ್.ಮಂಜು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.