ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಜೆಜೆಎಂ ಕಾಮಗಾರಿಯಲ್ಲಿ ಸ್ಟ್ಯಾಂಪ್ ಪೇಪರ್ ಹಗರಣವಾಗಿದ್ದರೆ ಇದರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮವಾಗಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಶೃಂಗೇರಿ ಕ್ಷೇತ್ರದ ಮಾಜಿ ಶಾಸಕರು ಆರೋಪಿಸಿರುವಂತೆ ಹಗರಣವಾಗಿದ್ದರೆ ರಾಷ್ಟ್ರೀಯ ಹಗರಣವಾಗಲಿದೆ. ಹಾಗಾಗಿ ಅವರ ಮೇಲೆ ನಿರ್ದಾಕ್ಷೀಣ್ಯ ಕ್ರಮ ತೆಗೆದು ಕೊಳ್ಳಬೇಕು. ಬೋರ್‌ವೆಲ್ ಉದ್ದ, ಅಗಲ ಅಳತೆ ಮಾಡುವುದು ಶಾಸಕನ ಕೆಲಸವಲ್ಲ. ಅದರ ಎಸ್ಟಿಮೇಶನ್‌ಗೆ ಶಾಸಕ ಸಹಿ ಮಾಡುವುದಿಲ್ಲ. ಇದಕ್ಕೆ ಟಾಸ್ಕ್ ಪೋರ್ಸ್ ಸಮಿತಿ ಇರುತ್ತವೆ ಎಂದು ಪಟ್ಟಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಎಲ್ಲೆಲ್ಲಿ ಬೋರ್‌ವೆಲ್, ನೀರಿನ ಸಂಪರ್ಕದ ಅಗತ್ಯವಿದೆಯೋ ಅದನ್ನು ಆಯಾ ಗ್ರಾಪಂಗಳೆ ಸರ್ವೆ ನಡೆಸಿ ಜಲಜೀವನ್ ಮಿಷನ್ ಕಾಮಗಾರಿ ಮಾಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಶೇ.60 ಮತ್ತು ಕೇಂದ್ರ ಶೇ.40 ಹಣ ನೀಡಲಿದೆ.ಜೆಜೆಎಂ ಕಾಮಗಾರಿಗಳ ಬಹುತೇಕ ಗುತ್ತಿಗೆದಾರರು ಬಿಜೆಪಿಯವರೇ ಇದ್ದಾರೆ ಎಂಬುದು ನನಗೆ ಗೊತ್ತಿರುವ ಮಾಹಿತಿ ಯಾಗಿದೆ. ಇದರಲ್ಲಿ ಕಳಪೆ ಕಾಮಗಾರಿಯಾಗಿದ್ದಾರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿ. ಬೋರ್‌ವೆಲ್ ಕೊರೆಯುವುದರಲ್ಲಿ ಲೋಪ ಅಥವಾ ಸ್ಟ್ಯಾಂಪ್ ಪೇಪರ್‌ ಹಗರಣವಾಗಿದ್ದರೆ ಅವರ ಮೇಲೂ ಕ್ರಮ ತೆಗೆದುಕೊಳ್ಳಲು ನಾನು ಈಗಾಗಲೇ ಸೂಚನೆ ಕೊಟ್ಟಿದ್ದೇನೆ. ಈ ಆರೋಪದ ಬಗ್ಗೆ ವರದಿ ಕೇಳಿದ್ದು, ಇದು ಇತ್ಯರ್ಥವಾಗುವವರೆಗೂ ಯಾವುದೇ ಬಿಲ್ ಪಾವತಿ ಮಾಡದಂತೆ ಸೂಚಿಸಿದ್ದೇನೆ. ಕ್ಷೇತ್ರದ 3 ತಾಲೂಕುಗಳ ಕೆಡಿಪಿ ಸಭೆಗಳಲ್ಲೂ ಸ್ಪಷ್ಟ ನಿರ್ದೇಶನ ನೀಡಿದ್ದು, ಕಳಪೆ ಕಾಮಗಾರಿ ಹೆಚ್ಚು ಕಡಿಮೆ ಯಾದರೂ ಅಧಿಕಾರಿಗಳೇ ಹೊಣೆ. ಲೋಪ ಇದೆ ಎಂದು ಕಂಡುಬಂದರೆ, ನನ್ನ ಗಮನಕ್ಕೆ ತಂದಲ್ಲಿ ತನಿಖೆ ಮಾಡಿಸಲಾಗುವುದು. ಜಲಜೀವನ್ ಮಿಷನ್ ಯೋಜನೆ ಹಗರಣ ನಡೆದಿದ್ದರೆ ಅದರಲ್ಲಿ ನನ್ನ ಪಾತ್ರ ಯಾವುದೂ ಇಲ್ಲ. ಕಾನೂನು ಬಾಹಿರ ಚಟುವಟಿಕೆ ಗಳನ್ನು ನಾನು ಹಿಂದೆಯೂ ಮಾಡಿಲ್ಲ. ಮುಂದೆ ಮಾಡುವುದಿಲ್ಲ. ಯಾವತ್ತೂ ಮಾಡುವುದಿಲ್ಲ. ಈ ಆರೋಪಕ್ಕೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿದರು. ೦೯ಬಿಹೆಚ್‌ಆರ್ ೨: ರಾಜೇಗೌಡ