ಜಾಬ್ ಕಾರ್ಡ್ ಇಲ್ಲದ ಕುಟುಂಬಗಳು ಗ್ರಾಪಂಗಳಲ್ಲಿ ನಮೂನೆ-01 ಪಡೆದು ಭರ್ತಿ ಮಾಡಿ ಕಡ್ಡಾಯ ದಾಖಲೆಗಳಾಗಿ ಇ-ಕೆವೈಸಿ ಆದ ಬ್ಯಾಂಕ್ ಪುಸ್ತಕ, ಆಧಾರ್, ರೇಷನ್ ಕಾರ್ಡ್ ನಕಲು ಪ್ರತಿ ಹಾಗೂ ಎರಡು ಭಾವಚಿತ್ರ ನೀಡಿ ಹೊಸ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ಪಡೆಯಬಹುದು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಜಾಬ್ ಕಾರ್ಡ್ ಮೇಳ ಅಭಿಯಾನದ ಅಂಗವಾಗಿ ಸಮೀಪದ ಅಣ್ಣೂರು ಗ್ರಾಪಂ ವ್ಯಾಪ್ತಿಯ ಆಲಭುಜನಹಳ್ಳಿಯಲ್ಲಿ ಮನೆ ಮನೆಗೆ ತೆರಳಿ ಕೂಲಿ ಕಾರ್ಮಿಕರಿಗೆ ವಿಬಿಜಿ ರಾಮ್ ಜಿ ಹಾಗೂ ಜಾಬ್ ಕಾರ್ಡ್ ಮೇಳದ ಬಗ್ಗೆ ಮಾಹಿತಿ ನೀಡಲಾಯಿತು.ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ವಿಕಸಿತ ಭಾರತ ಗ್ಯಾರಂಟಿ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ ಗ್ರಾಮೀಣ (ವಿಬಿ ಜಿ ರಾಮ್ ಜಿ) ಯೋಜನೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15ರವರೆಗೆ ಎಲ್ಲಾ ಗ್ರಾಪಂಗಳಲ್ಲೂ ಜಾಬ್ ಕಾರ್ಡ್ ಮೇಳದ ಬಗ್ಗೆ ಕೂಲಿ ಕಾರ್ಮಿಕರಿಗೆ ಜಾಗೃತಿ ಮೂಡಿಸಲಾಯಿತು.
ಅಭಿಯಾನದಲ್ಲಿ ಸಕ್ರಿಯವಲ್ಲದ ಕುಟುಂಬಗಳ ಪಟ್ಟಿ ಸಿದ್ಧಪಡಿಸಿಕೊಂಡು ಮನೆ ಮನೆ ಭೇಟಿ ನೀಡಿ ಜಾಗೃತಿ ಮೂಡಿಸುವ ಜೊತೆಗೆ ಜಾಬ್ ಕಾರ್ಡ್ ಮೇಳದ ಕುರಿತು ಗ್ರಾಪಂ ಮಟ್ಟದಲ್ಲಿ ಡಂಗೂರ ಸಾರುವುದು, ಸ್ವಚ್ಛತಾ ವಾಹನಗಳಲ್ಲಿ ಜಿಂಗಲ್ಸ್ ಗಳ ಮೂಲಕ ಜಾಗೃತಿ ಸಂದೇಶ ಸಾರುತ್ತಾ ವ್ಯಾಪಕ ಪ್ರಚಾರ ಮಾಡಲಾಯಿತು.ಜಾಬ್ ಕಾರ್ಡ್ ಇಲ್ಲದ ಕುಟುಂಬಗಳು ಗ್ರಾಪಂಗಳಲ್ಲಿ ನಮೂನೆ-01 ಪಡೆದು ಭರ್ತಿ ಮಾಡಿ ಕಡ್ಡಾಯ ದಾಖಲೆಗಳಾಗಿ ಇ-ಕೆವೈಸಿ ಆದ ಬ್ಯಾಂಕ್ ಪುಸ್ತಕ, ಆಧಾರ್, ರೇಷನ್ ಕಾರ್ಡ್ ನಕಲು ಪ್ರತಿ ಹಾಗೂ ಎರಡು ಭಾವಚಿತ್ರ ನೀಡಿ ಹೊಸ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ಪಡೆಯಬಹುದು ಎಂದು ತಿಳಿಸಲಾಯಿತು.
ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ತಾಲೂಕಿನ ಎಲ್ಲಾ ಗ್ರಾಪಂ ಗಳಲ್ಲೂ ಜಾಬ್ ಕಾರ್ಡ್ ಮೇಳ ಬಗ್ಗೆ ಕೂಲಿ ಕಾರ್ಮಿಕರಿಗೆ ಜಾಗೃತಿ ಮೂಡಿಸಲು ಅಭಿಯಾನ ಕೈಗೊಳ್ಳಲಾಗಿದೆ. ವಿಬಿಜಿ ರಾಮ್ ಜಿ ಯೋಜನೆ ಬಗ್ಗೆ ಕೂಲಿ ಕಾರ್ಮಿಕರು ಅರಿವು ಮೂಡಿಸಿ ಜಾಬ್ ಕಾರ್ಡ್ ಮಾಡಿಸುವಂತೆ ಮನೆ ಮನೆಗೆ ತೆರಳಿ ಅರಿವು ಮೂಡಿಸಲಾಗುತ್ತಿದೆ. ಅಲ್ಲದೇ, ಪಂಚಾಯ್ತಿ ವತಿಯಿಂದ ಜಾಗೃತಿ, ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಕೂಲಿ ಕಾರ್ಮಿಕರು ಸಮೀಪದ ಗ್ರಾಪಂಗಳಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಜಾಬ್ ಕಾರ್ಡ್ ಮಾಡಿಸಿಕೊಳ್ಳಬೇಕು.- ರಾಮಲಿಂಗಯ್ಯ, ಮದ್ದೂರು ತಾಪಂ ಇಒ