ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದ ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರು ಕಾವೇರಿ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲಾಗದೆ. ತಪ್ಪಾಗಿ ನೋಂದಣಿ ಮಾಡಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕನಕಪುರ
ಸರ್ಕಾರವು ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪರಿಚಯಿಸಿದ ಹೊಸ ಆನ್ಲೈನ್ ತಂತ್ರಾಂಶ ಕಾವೇರಿ 2.0 ಜಾರಿಯಿಂದ ಪತ್ರ ಬರಹಗಾರರ ಉದ್ಯೋಗವನ್ನು ರಾಜ್ಯ ಸರ್ಕಾರ ಕಸಿಯುತ್ತಿದೆ ಎಂದು ತಾಲೂಕು ಪತ್ರ ಬರಹಗಾರರ ಸಂಘದ ಅಧ್ಯಕ್ಷ ಕೆ.ಎಸ್. ಮುರಳೀಧರ್ ಆರೋಪಿಸಿದರು.ಕನಕಪುರ ತಾಲೂಕು ಉಪ ನೋಂದಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದ ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರು ಕಾವೇರಿ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲಾಗದೆ. ತಪ್ಪಾಗಿ ನೋಂದಣಿ ಮಾಡಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಭಾರತ ನೋಂದಣಿ ಕಾಯ್ದೆ ಪ್ರಕಾರ ಪತ್ರ ಬರಹಗಾರರೇ ಪತ್ರ ಬರೆಯುವಂತೆ ಪರವಾನಗಿಯನ್ನು ಅಂದಿನ ರಾಜ್ಯ ಸರ್ಕಾರ ಗಳು ಮಾಡಿದ್ದವು, ರಾಜ್ಯದಲ್ಲಿ ಸುಮಾರು 18 ಸಾವಿರ ಪತ್ರ ಬರಹಗಾರಿದ್ದಾರೆ ಅವರ ಸಹಾಯಕರಾಗಿ ಮತ್ತು ಕಂಪ್ಯೂಟರ್ ಟೈಪಿಸ್ಟ್ ಗಳು ಸೇರಿ ಒಂದು ಲಕ್ಷ ಜನರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರ ಬದುಕನ್ನು ಬೀದಿಗೆ ತಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶಾದ್ಯಂತ ಪೇಪರ್ ಲೆಸ್ ಎಐ ಅನ್ನು ತರಲಾಗುತ್ತಿದೆ, ಇದೇನಾದರೂ ಜಾರಿಯಾದರೆ ನಾವು ನೋಂದಣಿಯನ್ನು ಮಾಡುವ ಆಸ್ತಿಗಳು ಪಿತ್ರಾರ್ಜಿತಾ, ಸ್ವಯಾರ್ಜಿತಾ, ದಾನ ಪತ್ರ, ಯಾವ ಮೂಲಕ ಆಸ್ತಿ ಬಂದಿದೆ ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಯಾವುದೇ ಸರ್ಕಾರ ಬಂದರೂ ಉದ್ಯೋಗ ಸೃಷ್ಟಿ ಮಾಡುವ ಬದಲು,ಉದ್ಯೋಗವನ್ನು ಖಂಡಿತಗೊಳಿಸುತ್ತಿವೆ. ರಾಜ್ಯದಲ್ಲಿ ಸುಮಾರು ಮೂರು ಲಕ್ಷ ಉದ್ಯೋಗಗಳು ಖಾಲಿ ಇವೆ, ಪ್ರತೀ ವರ್ಷ ವಿದ್ಯಾರ್ಥಿಗಳು ಪಾಸಾಗಿ ಉದ್ಯೋಗವನ್ನು ಕೇಳುತ್ತಿದ್ದು ಆಡಳಿತ ಸರ್ಕಾರ ಇವುಗಳನ್ನು ಭರ್ತಿ ಮಾಡದೆ ವಿದ್ಯಾವಂತರನ್ನು ನಿರುದ್ಯೋಗಿಗಳಾಗಿ ಮಾಡುತ್ತಿದೆ. ಅಧಿವೇಶನ ನಡೆ ಯುತ್ತಿರುವ ಬೆಳಗಾವಿಗೆ ರಾಜ್ಯದ ಎಲ್ಲಾ ಪತ್ರ ಬರಹಗಾರರು ತಮ್ಮ ಕಚೇರಿ ಕೆಲಸಗಳನ್ನು ಸ್ಥಗಿತಗೊಳಿಸಿ ಬೆಳಗಾವಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.ಕೇರಳ ತಮಿಳುನಾಡು ಆಂಧ್ರ ಪ್ರದೇಶ ರಾಜ್ಯಗಳ ಮಾದರಿಯಲ್ಲಿ ಲಾಗಿನ್ ಐಡಿ ಹಾಗೂ ಪರವಾನಗಿ ಹೊಂದಿರುವ ಭೂ ಮಾಪಕರಿಗೆ ಉದ್ಯೋಗ ನೀಡಿದಂತೆ ಅದೇ ಮಾದರಿಯಲ್ಲಿ ನಮಗೂ ನೀಡಲಿ, ಕಾವೇರಿ ತಂತ್ರಾಂಶದಿಂದ ಒಂದು ಲಕ್ಷ ಜನರ ಬದುಕು ಬೀದಿಗೆ ಬೀಳುವ ಪರಿಸ್ಥಿತಿಯನ್ನು ಅರಿತು ಸರ್ಕಾರ ನಮ್ಮ ಸಮಸ್ಯೆಯನ್ನ ಬಗೆಹರಿಸಲಿ ಎಂದು ಮನವಿ ಮಾಡಿದರು.
ಉಪಾಧ್ಯಕ್ಷ ಟಿ. ಗೋಪಿ ಮಾತನಾಡಿ, ಸರ್ಕಾರವು ಪತ್ರ ಬರಹಗಾರರ ಬದುಕನ್ನು ಬೀದಿಗೆ ತಳ್ಳುತ್ತಿದೆ, ಪತ್ರ ಬರಹ ಗಾರರನ್ನು ಉಳಿಸಿಕೊಳ್ಳುವುದಾಗಿ ಹೇಳಿ, ವಾಮ ಮಾರ್ಗದಲ್ಲಿ ನಮ್ಮ ಉದ್ಯೋಗವನ್ನು ಕಸಿಯುತ್ತಿದೆ, ಕಾವೇರಿ 2.0 ತಂತ್ರಾಂಶ ಬಂದ ಮೇಲೆ ಗಣಕ ಯಂತ್ರದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ, ನೆನ್ನೆಯಿಂದ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಪತ್ರ ಬರಹಗಾರರು ಹೋರಾಟ ಹಮ್ಮಿಕೊಂಡಿದ್ದೇವೆ, ನಮಗೆ ನ್ಯಾಯ ಸಿಗುವವರೆಗೂ ಈ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು.ಪ್ರತಿಭಟನಾನಿರತ ಬರಹಗಾರರು ಉಪನೋಂದಣಾಧಿಕಾರಿಗಳಾದ, ಎಸ್.ಎ. ಸುರೇಶ್ ಹಾಗೂ ಐ.ಎಸ್. ಅನಿತಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಗೌರವಾಧ್ಯಕ್ಷ ಕೆ.ಪಿ. ಮಹದೇವಪ್ರಸಾದ್, ಪ್ರಧಾನ ಕಾರ್ಯದರ್ಶಿ ಕೆ.ವಿ. ಸತೀಶ್, ಖಜಾಂಚಿ ಬಿ.ಎ. ಪ್ರೇಮೇಶ್ ಚಂದ್ರಗುರು, ಸಂಚಾಲಕ ಕೆ.ಎಸ್. ಪ್ರಕಾಶ್,ನಿರ್ದೇಶಕರಾದ ಎಂ. ಮಂಜುನಾಥ್, ಬಿ.ವಿ. ವೆಂಕಟೇಗೌಡ, ಎಂ.ಎಂ. ಕುಮಾರ್, ಜಯರಾಮು, ಕೆ.ಪಿ. ಗಣೇಶ್, ಎಂ. ಮಹೇಶ್,ಆರ್. ಮೋಹನ್ ಕುಮಾರ್, ಬಿ.ಎಸ್. ಭಾರತಿ, ಬಸವರಾಜು, ಕಾನೂನು ಸಲಹೆಗಾರ ಕೆ. ನಾಗೇಶ್ ಪ್ರತಿಭಟನೆಯಲ್ಲಿ ಹಾಜರಿದ್ದರು.
ಕೆ ಕೆ ಪಿ ಸುದ್ದಿ 04:ರಾಜ್ಯ ಸರ್ಕಾರದ ವಿರುದ್ಧ ಪತ್ರ ಬರಹಗಾರರ ಪ್ರತಿಭಟನೆ.