ಸಾರಾಂಶ
ಆರ್ಥಿಕ, ಸಾಮಾಜಿಕವಾಗಿ ಸಬಲರಾಗಲು ಉದ್ಯೋಗ ಮೇಳ ಸಹಕಾರಿಯಾಗಿದ್ದು, ಭವಿಷ್ಯದ ಜೀವನಕ್ಕೆ ಭಾಷ್ಯ ಬರೆಯಲಿದೆ.
ಕನ್ನಡಪ್ರಭ ವಾರ್ತೆ ಹಾವೇರಿ
ಆರ್ಥಿಕ, ಸಾಮಾಜಿಕವಾಗಿ ಸಬಲರಾಗಲು ಉದ್ಯೋಗ ಮೇಳ ಸಹಕಾರಿಯಾಗಿದ್ದು, ಭವಿಷ್ಯದ ಜೀವನಕ್ಕೆ ಭಾಷ್ಯ ಬರೆಯಲಿದೆ. ರಾಜ್ಯದಲ್ಲಿ ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಉದ್ಯೋಗ ಮೇಳ ಆಯೋಜಿಸುವ ಮೂಲಕ ಅವಕಾಶ ಕಲ್ಪಿಸಿದೆ. ಜಿಲ್ಲೆಯ ನಿರುದ್ಯೋಗಿಗಳು ಮೇಳದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ಅರಣ್ಯ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ನಗರದ ಹುಕ್ಕೇರಿಮಠ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಹಾವೇರಿ ಜಿಲ್ಲಾ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ನಿರುದ್ಯೋಗ ಸಮಸ್ಯೆ ಉಂಟಾಗಿದೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ನಿರುದ್ಯೋಗಿಗಳು ಉದ್ಯೋಗ ಗಿಟ್ಟಿಸಿಕೊಳ್ಳಬೇಕು. ಉದ್ಯೋಮ ಮೇಳಕ್ಕೆ ೨೬೦೦ ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ೮೦೦ ಜನರ ಸಂದರ್ಶನ ಆಗಿದೆ. ಅದರಲ್ಲಿ ೬೦ ಜನರಿಗೆ ಉದ್ಯೋಗದ ಪತ್ರ ಸಿದ್ಧವಾಗಿದೆ ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಪತ್ತು ಗಳಿಸಬೇಕಾದರೆ ಉದ್ಯೋಗದಲ್ಲಿ ತೊಡಗಿರಬೇಕು. ಕಾಯಕದಿಂದ ಹಣ ಸಂಪಾದನೆ ಮಾಡಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಉದ್ಯೋಗಿ ಆಗಬೇಕು. ಪ್ರಯತ್ನ ಬಿಡದೆ ನಿರಂತರವಾಗಿ ಕೆಲಸ ಮಾಡಬೇಕು. ದೇಶ ಅಭಿವೃದ್ಧಿ ಆಗಬೇಕು ಎಂದರೆ ನಿರುದ್ಯೋಗಿಯಾಗದೆ ಉದ್ಯೋಗಿಗಳಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ರೋಟರಿ ಕ್ಲಬ್ ಅಧ್ಯಕ್ಷ ಸುಜಿತ್ ಜೈನ್, ರವಿ ಹಿಂಚಗೇರಿ, ರಮೇಶ ಬಳ್ಳಾರಿ, ನಾಗರಾಜ ಶೆಟ್ಟಿ, ಮಲ್ಲಿಕಾರ್ಜುನ ಹಂದ್ರಾಳ, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರವಿ ಮೆಣಸಿನಕಾಯಿ, ಕೃಷ್ಣ ಮೂರ್ತಿ, ರೇಣುಕಾ ಪುತ್ರನ್ನ, ಜಗದೀಶ ತುಪ್ಪದ, ನಿರಂಜನ್ ತಾಂಡೂರ, ಶಿವಣ್ಣ ಶಿರೂರ, ಗಣೇಶ ಹೂಗಾರ, ಮಾಲತೇಶ ಮಲಿಮಠ, ಎಸ್.ಸಿ. ಹಿರೇಮಠ, ಸಂಜಯ ಕೊರೆ ಸೇರಿದಂತೆ ಇತರರು ಇದ್ದರು.ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಹುಲಿರಾಜು ಸ್ವಾಗತಿಸಿದರು. ಕೃಷ್ಣ ಜವಳಿ ನಿರೂಪಿಸಿದರು.