ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಸಹಕಾರಿ

| Published : Jun 10 2024, 12:53 AM IST

ಸಾರಾಂಶ

ದಶಕಗಳ ‌ಹಿಂದೆಯೇ ಡಾ.ಎನ್.ನರಸಿಂಹಯ್ಯ ರವರು ನ್ಯಾಷನಲ್ ವಿದ್ಯಾಸಂಸ್ಥೆಗಳನ್ನು ಆರಂಭಿಸಿದ್ದರು. ಅದರಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ವಿದ್ಯಾರ್ಥಿಗಳು ಕಲಿಕಾ ಹಂತದಿಂದಲೇ ತಮ್ಮಲ್ಲಿನ ಕ್ರಿಯಾತ್ಮಕ ಶಕ್ತಿ ಮತ್ತು ಸೃಜನಶೀಲ ಮನೋಭಾವದಿಂದ ಸ್ವಪ್ರೇರಣೆಯಿಂದ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ನ್ಯಾಷನಲ್ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಎಸ್.ಗಾಯತ್ರಿ ತಿಳಿಸಿದರು. ನಗರದ ಎಇಎಸ್ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಶುಕ್ರವಾರ ''ಉದ್ಯೋಗ ಮೇಳ''ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಬದುಕಿಗೆ ಬುನಾದಿ

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪಠ್ಯ ಕಲಿಕೆಗೆ ಮತ್ತು ಪಠ್ಯೇತರ ವಿಷಯಗಳ ಬಗ್ಗೆ ಅರಿಯಲು ಸೂಕ್ತ ವೇದಿಕೆ ರೂಪಿಸಲಾಗಿದೆ. ಪ್ರತೀ ವರ್ಷ ಅಂತಿಮ ವರ್ಷದ ಪದವಿ‌ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ವಿವಿಧ ಕಂಪನಿಗಳ ಸಹಯೋಗದೊಂದಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬದುಕಿಗೆ ಭದ್ರ ಬುನಾದಿಯಾಗಲಿವೆ ಎಂದು ಹೇಳಿದರು. ಉದ್ಯೋಗಾವಕಾಶ ಬಳಸಿಕೊಳ್ಳಿ

ನ್ಯಾಷನಲ್ ‌ಪದವಿ ಕಾಲೇಜು ಆಡಳಿತ ‌ಮಂಡಳಿಯ ಅಧ್ಯಕ್ಷ ಮುದುಗೆರೆ ನಾಗರಾಜಪ್ಪ ಮಾತನಾಡಿ, ಗ್ರಾಮೀಣ ‌ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ‌ನೆರವಾಗುವ ನಿಟ್ಟಿನಲ್ಲಿ ದಶಕಗಳ ‌ಹಿಂದೆಯೇ ಡಾ.ಎನ್.ನರಸಿಂಹಯ್ಯ ರವರು ನ್ಯಾಷನಲ್ ವಿದ್ಯಾಸಂಸ್ಥೆಗಳನ್ನು ಆರಂಭಿಸಿದ್ದರು. ಅದರಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಯೂ ಪದವಿಯೊಂದಿಗೆ ಉದ್ಯೋಗದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸನ್ ಬ್ರೈಟೆಕ್ ಸಂಸ್ಥೆಯ ದಿನೇಶ್ ವಿದ್ಯಾರ್ಥಿಗಳಿಗೆ ಉದ್ಯೋಗ ‌ಮೇಳದ ಮಹತ್ವದ ಬಗ್ಗೆ ತಿಳಿಸಿದರು. ಈ ವೇಳೆ ಉಪಪ್ರಾಂಶುಪಾಲೆ ಪ್ರೊ.ನೇತ್ರ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಶೈಲಜಸಪ್ತಗಿರಿ.ಎ.ಬಿ, ಗಣಕಶಾಸ್ತ್ರದ ಮುಖ್ಯಸ್ಥರಾದ ಪ್ರೊ.ರಾಜೇಶ್ವರಿ, ನಿಜಾಮುದ್ದೀನ್, ಪ್ರೊ.ದಿವ್ಯ, ಪ್ರೊ.ನಾಗರಾಜ್, ಪ್ರೊ.ರಮೇಶ್, ಡಾ.ರಾಮಾಂಜಿ, ಜಯರಾಮರೆಡ್ಡಿ, ಸಂದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.