ತಾಲೂಕು, ವಿಧಾನಸಭಾ ಕ್ಷೇತ್ರವಾರು ಉದ್ಯೋಗ ಮೇಳ ಆಯೋಜನೆ: ಶಾಸಕ ಎನ್‌.ಎಚ್‌. ಕೋನರಡ್ಡಿ

| Published : Mar 10 2025, 12:18 AM IST

ತಾಲೂಕು, ವಿಧಾನಸಭಾ ಕ್ಷೇತ್ರವಾರು ಉದ್ಯೋಗ ಮೇಳ ಆಯೋಜನೆ: ಶಾಸಕ ಎನ್‌.ಎಚ್‌. ಕೋನರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳಂತೆ ಉದ್ಯಮ ಮತ್ತು ಉದ್ಯೋಗ ಕ್ಷೇತ್ರಕ್ಕೂ ಆದ್ಯತೆ ನೀಡಿದೆ. ಉತ್ತರ ಕರ್ನಾಟಕದಲ್ಲಿ ಉದ್ಯಮಗಳ ಹೆಚ್ಚಳಕ್ಕೆ ಮುತುವರ್ಜಿ ವಹಿಸಿದೆ ಎಂದು ಶಾಸಕ ಕೋನರಡ್ಡಿ ಹೇಳಿದರು.

ಧಾರವಾಡ: ರಾಜ್ಯ ಸರ್ಕಾರ ಯುವಕರಿಗೆ ಉದ್ಯೋಗ ಒದಗಿಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಮೂಲಕ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ನಂತರ ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರ ಹಂತದಲ್ಲಿ ಬೃಹತ್‌ ಉದ್ಯೋಗ ಮೇಳಗಳ ಆಯೋಜನೆಗೆ ಸರ್ಕಾರದ ಹಂತದಲ್ಲಿ ನಿರ್ಧರಿಸಲಾಗಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಇಲ್ಲಿಯ ಕರ್ನಾಟಕ ಕಾಲೇಜು ಆವರಣದ ಡಾ. ವಿ.ಕೃ. ಗೋಕಾಕ ಕೇಂದ್ರ ಗ್ರಂಥಾಲಯ ಆವರಣ ಹಾಗೂ ಕಾಲೇಜಿನ ವಿವಿಧ ವಿಭಾಗಗಳಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಉದ್ಯೋಗ ಮೇಳ-2025ಕ್ಕೆ ಚಾಲನೆ ನೀಡಿ ಮಾತನಾಡಿದರು. ನಿರುದ್ಯೋಗಿ ಯುವಕರಿಗೆ ಆರ್ಥಿಕ ಭದ್ರತೆ ಹಾಗೂ ಕೌಶಲ್ಯ ಹೆಚ್ಚಳ ಹಾಗೂ ಉದ್ಯೋಗ ಹುಡುಕಲು ಅನುಕೂಲವಾಗುವಂತೆ ಯುವನಿಧಿ ಗ್ಯಾರಂಟಿ ಯೋಜನೆ ಮೂಲಕ ಪ್ರತಿ ತಿಂಗಳು ನಿರ್ದಿಷ್ಟ ಅವಧಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳಂತೆ ಉದ್ಯಮ ಮತ್ತು ಉದ್ಯೋಗ ಕ್ಷೇತ್ರಕ್ಕೂ ಆದ್ಯತೆ ನೀಡಿದೆ. ಉತ್ತರ ಕರ್ನಾಟಕದಲ್ಲಿ ಉದ್ಯಮಗಳ ಹೆಚ್ಚಳಕ್ಕೆ ಮುತುವರ್ಜಿ ವಹಿಸಿದೆ. ಇನ್ವೆಸ್ಟ್ ಕರ್ನಾಟಕ ಸಮ್ಮೇಳನದ ಮೂಲಕ ದೇಶ, ವಿದೇಶಗಳ ಕೈಗಾರಿಕೊದ್ಯಮಿಗಳನ್ನು ಉತ್ತರ ಕರ್ನಾಟಕ, ವಿಶೇಷವಾಗಿ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಆಹ್ವಾನಿಸಿದ್ದು, ಹಲವಾರು ಉದ್ಯಮಗಳು ಬಂಡವಾಳ ಹೂಡಿ, ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬಂದಿವೆ. ಇದರಿಂದ ನಮ್ಮ ಭಾಗದ, ನಮ್ಮ ಜಿಲ್ಲೆಯ ಯುವಕ, ಯುವತಿಯರಿಗೆ ಉದ್ಯೋಗದಲ್ಲಿ ಆದ್ಯತೆ ದೊರಕಲಿದೆ ಎಂದರು.

ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಈ ಉದ್ಯೋಗ ಮೇಳವನ್ನು ಅಚ್ಚುಕಟ್ಟಾಗಿ, ಉತ್ತಮ ರೀತಿಯಲ್ಲಿ ಸಂಘಟಿಸಿದ್ದಾರೆ. ಈಗಾಗಲೇ ವಿವಿಧ ಪದವಿ ಪಡೆದಿರುವ ಸುಮಾರು 7,550 ಯುವಕ, ಯುವತಿಯರು ಉದ್ಯೋಗ ಬಯಸಿ, ತಮ್ಮ ಹೆಸರು ನೋಂದಾಯಿಸಿದ್ದಾರೆ. ಉದ್ಯೋಗ ಮೇಳದ ಸ್ಥಳದಲ್ಲಿಯೂ ನೋಂದಣಿಗೆ ಅವಕಾಶ ಇರುವುದರಿಂದ ಈ ಸಂಖ್ಯೆ ಹೆಚ್ಚಾಗುತ್ತದೆ. ವಿವಿಧ ಸ್ಥಳದಲ್ಲಿ ಉದ್ಯೋಗ ನೀಡಲು 93 ಕೈಗಾರಿಕೆಗಳು, 20 ಮಾನವ ಸಂಪನ್ಮೂಲ ಸಂಸ್ಥೆಗಳು ಸುಮಾರು 12,145ರಷ್ಟು ಉದ್ಯೋಗ ನೀಡಲು ಉದ್ಯೋಗ ಮೇಳದಲ್ಲಿ ಭಾಗಿ ಆಗಿವೆ. ಇದರಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕರು ತಿಳಿಸಿದರು.

ಉದ್ಯೋಗಕ್ಕೆ ಸೇರುವ ಅಭ್ಯರ್ಥಿಗಳು ತಾಳ್ಮೆ, ಸಹನೆಯಿಂದ ಇರಬೇಕು. ತರಬೇತಿ ನೀಡಿ, ಕೌಶಲ್ಯಭರಿತರನ್ನಾಗಿ ಮಾಡಿದ ನಂತರ ಏಕಾಏಕಿ ಕೈಗಾರಿಕೆ, ಕಂಪನಿಗಳನ್ನು ತೊರೆಯಬಾರದು. ಉದ್ಯಮಗಳ ಬೆಳವಣಿಗೆ, ಸ್ಥಿರತೆ ಅಷ್ಟೆ ಮುಖ್ಯವಾಗಿದೆ ಎಂದ ಕೋನರಡ್ಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸಿರುವ ಯುವಕ, ಯುವತಿಯರಿಗೆ ಸಂದರ್ಶನದ ನಂತರ ಅಲ್ಲಿಯೇ ಒಪ್ಪಿಗೆ ಪತ್ರ ನೀಡಲಾಗುತ್ತಿದೆ. ಜಿಲ್ಲೆಯ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಯೋಜನಾ ನಿರ್ದೇಶಕಿ ರೇಖಾ ಡೋಳ್ಳಿನವರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರ, ತಹಸೀಲ್ದಾರ್ ಡಿ.ಎಚ್. ಹೂಗಾರ ಇದ್ದರು. ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ನಂತರ ಶಾಸಕರು ಹಾಗೂ ಅಧಿಕಾರಿಗಳು ಉದ್ಯೋಗ ಮೇಳದ ಸಂದರ್ಶನ ಸ್ಥಳಗಳಿಗೆ ಭೇಟಿ ನೀಡಿ, ಉದ್ಯಮಿಗಳ ಹಾಗೂ ಸಂದರ್ಶನಕ್ಕೆ ಬಂದಿರುವ ಯುವಕ, ಯುವತಿಯರಿಂದ ಮಾಹಿತಿ ಪಡೆದುಕೊಂಡರು.