ಸುಂದರ ನಗರ ನಿರ್ಮಾಣಕ್ಕೆ ಕೈಜೋಡಿಸಿ

| Published : Jun 13 2025, 02:44 AM IST

ಸಾರಾಂಶ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು ಆರೋಗ್ಯಕರ ಜೀವನ ನಡೆಸಲು ಉದ್ಯಾನವನಗಳಲ್ಲಿ ಜಿಮ್, ಮಕ್ಕಳ ಆಟಿಕೆ ಅಳವಡಿಕೆ ಸೇರಿದಂತೆ ಸುಂದರ ನಗರ ನಿರ್ಮಾಣಕ್ಕೆ ಸೂಡಾ ಪ್ರಯತ್ನ ಪಡುತ್ತಿದ್ದು ನಗರದ ನಾಗರಿಕರು ಸಹ ಕೈಜೋಡಿಸಬೇಕು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಕೋರಿದರು.

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು ಆರೋಗ್ಯಕರ ಜೀವನ ನಡೆಸಲು ಉದ್ಯಾನವನಗಳಲ್ಲಿ ಜಿಮ್, ಮಕ್ಕಳ ಆಟಿಕೆ ಅಳವಡಿಕೆ ಸೇರಿದಂತೆ ಸುಂದರ ನಗರ ನಿರ್ಮಾಣಕ್ಕೆ ಸೂಡಾ ಪ್ರಯತ್ನ ಪಡುತ್ತಿದ್ದು ನಗರದ ನಾಗರಿಕರು ಸಹ ಕೈಜೋಡಿಸಬೇಕು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಕೋರಿದರು.

ನಗರದ ಗೋಪಿಶೆಟ್ಟಿಕೊಪ್ಪದ ಸುರಭಿ ಸಮುದಾಯ ಭವನದ ಹಿಂಭಾಗದ ಉದ್ಯಾನವನದಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಇತ್ತೀಚಿಗೆ ಮಲೆನಾಡು ಬಯಲು ಸೀಮೆಯಾಗುತ್ತಿದೆ. ಹಸಿರು ಕಡಿಮೆಯಾಗುತ್ತಿದೆ. ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ-ಸುಂದರವಾಗಿಟ್ಟುಕೊಳ್ಳಬೇಕು. ಮನೆ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಹೇಳಿದರು.

ಇತ್ತೀಚಿನ ವಾತಾವರಣ, ಜೀವನಶೈಲಿ, ಆಹಾರ ಪದ್ಧತಿಯಿಂದ ಅನೇಕ ಸಮಸ್ಯೆಗಳು ಎದುರುಗಾಗುತ್ತಿದ್ದು, ಸಾರ್ವಜನಿಕರು ಉತ್ತಮ ಪರಿಸರದಲ್ಲಿ ವಾಯುವಿಹಾರ, ವ್ಯಾಯಾಮ, ಜಿಮ್ ಮಾಡಲು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸೂಡಾದಿಂದ ಈಗಾಗಲೇ 33 ಪಾರ್ಕುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಪಾರ್ಕ್‌ಗಳಲ್ಲಿ ವಾಕಿಂಗ್ ಪಾಥ್, ಜಿಮ್, ಮಕ್ಕಳ ಆಟಿಕೆ ಅಳವಡಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 45 ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಹಾಗೂ ಪ್ರಸ್ತುತ 17 ಕೆರೆಗಳ ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಗೋಪಿಶೆಟ್ಟಿಕೊಪ್ಪದ ಸುರಭಿ ಸಮುದಾಯ ಭವನದ ಹಿಂಭಾಗದ ಉದ್ಯಾನವನಕ್ಕೆ 20 ಲಕ್ಷ ರು. ಮೊತ್ತದಲ್ಲಿ ಉದ್ಯಾನವನ ಪ್ರದೇಶವನ್ನು ಸ್ವಚ್ಛಗೊಳಿಸಿ ಸಮತಟ್ಟು ಮಾಡುವುದು, ಉದ್ಯಾನವನದ ಪ್ರದೇಶಕ್ಕೆ ಫೌಂಡೇಶನ್ ಸಹಿತ ಕಾಂಕ್ರಿಟ್ ಪಿಲ್ಲರ್‌ನೊಂದಿಗೆ ಚೈನ್ ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಇ-ಬ್ಲಾಕ್ ಉದ್ಯಾನವನದಲ್ಲಿ 20 ಲಕ್ಷ ರು. ಮೊತ್ತದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 11 ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಉದ್ಯಾನವನದಲ್ಲಿ ಸಂಪ್ ನಿರ್ಮಾಣ, ಉದ್ಯಾನವನದಲ್ಲಿ ಫೆನ್ಸಿಂಗ್ ದುರಸ್ತಿಪಡಿಸಲಾಗುವುದು ಎಂದರು.

ನಗರದ ಗೋಪಾಳ ಬಡಾವಣೆ ಡಿ ಮತ್ತು ಇ-ಬ್ಲಾಕ್‌ಗಳ ಉದ್ಯಾನವನದಲ್ಲಿ 25 ಲಕ್ಷ ರು. ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು, ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 9 ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಉದ್ಯಾನವನದಲ್ಲಿ ಫೆನ್ಸಿಂಗ್ ದುರಸ್ತಿ, ಹಾಗೂ ಹಾಲಿ ಇರುವ ಪಾಥ್‌ವೇನ ಆಯ್ದ ಭಾಗದಲ್ಲಿ ದುರಸ್ತಿಪಡಿಸುವುದು, ಉದ್ಯಾನವನದಲ್ಲಿ 7 ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದರು.

ನಗರದ ಪಂಪಾ ನಗರದಲ್ಲಿರುವ ಮಲೆನಾಡು ಸೊಸೈಟಿ ಪಕ್ಕದ ಉದ್ಯಾನವನದ ಅಭಿವೃದ್ಧಿ ಮತ್ತು ಗಾಡಿಕೊಪ್ಪ ಪೊಲೀಸ್ ಲೇಔಟ್ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಅಳವಡಿಕೆಗೆ 25 ಲಕ್ಷ ರು. ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 8 ಹೊರಾಂಗಣದಲ್ಲಿ ವ್ಯಾಯಾಮ ಸಾಮಗ್ರಿ ಅಳವಡಿಕೆ, ಸುಮಾರು 100 ಮೀ ಪಾಥ್‌ವೇ ನಿರ್ಮಾಣ ಹಾಗೂ 3 ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ ಶಾಸಕ ಎಸ್.ಎನ್.ಚನ್ನಬಸಪ್ಪ, ಎಇಇ ಬಸವರಾಜ್, ಎಂಜಿನಿಯರ್ ದಿನೇಶ್ ಸೇರಿದಂತೆ ಬಡಾವಣೆಗಳ ನಿವಾಸಿಗಳು, ಇತರರು ಪಾಲ್ಗೊಂಡಿದ್ದರು.