ಡಂಬಳ: ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಗ್ರಾಮೀಣ ಸಂಸ್ಕೃತಿಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಳ್ಳಪ್ಪ ಜೋಂಡಿ ಹೇಳಿದರು.

ಡಂಬಳ ಹೋಬಳಿಯ ಡೋಣಿ ಗ್ರಾಮದ ಬೀರಲಿಂಗೇಶ್ವರ ಜನಪದ ಕಲಾತಂಡ, ಡೋಣಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಳ್ಳಿಯ ರಾಗ ಜನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗೋಕಾಕ್‌ನ ಮಾಳಿಂಗರಾಯ ಪೂಜಾರಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಜನಪದ ಕಲೆ ನಿಧಾನವಾಗಿ ನಶಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ. ಜನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದರು.

ಜಾನಪದ ಕಲಾವಿದ ನಿಂಗಪ್ಪ ಗುಡ್ಡದ, ಸಮಾಜದ ಹಿರಿಯರಾದ ಪರಸಪ್ಪ ಬೆಳ್ಳಿ ಮಾತನಾಡಿ, ಜನಪದ ಕಲೆಗಳು ನಮ್ಮ ನಾಡಿನ ಸಾಂಸ್ಕೃತಿಕ ಸಂಪತ್ತಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ. ಸರ್ಕಾರ ಹಾಗೂ ಸಾರ್ವಜನಿಕರು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ನೂಲಿ ಚಂದಯ್ಯ ಜನಪದ ಕಲಾತಂಡ(ಲಕ್ಕುಂಡಿ), ವಾಲ್ಮೀಕಿ ಕಲಾ ಸಂಘ(ವೆಂಕಟಾಪುರ), ದುರ್ಗಾದೇವಿ ಕಲಾಸಂಘ(ಡೋಣಿ), ವೀರಭದ್ರೇಶ್ವರ ವೀರಗಾಸೆ ಮೇಳ(ಕಡಕೋಳ) ಸೇರಿದಂತೆ ವಿವಿಧ ಕಲಾತಂಡಗಳು ಜನಪದ ಕಲಾ ಪ್ರದರ್ಶನ ನೀಡಿ ಪ್ರೇಕ್ಷಕರ ಮನರಂಜಿಸಿದವು.


ಕಾರ್ಯಕ್ರಮದಲ್ಲಿ ಹಿರಿಯರಾದ ಕಾಶಪ್ಪ ಕುರಿ, ಈರಪ್ಪ ತೋಟಗಂಟಿ, ಪುತ್ರಪ್ಪ ಅಳವಂಡಿ, ಮಳ್ಳಪ್ಪ ಅಳವಂಡಿ, ಸಂತೋಷ ಸೋಗಟಿ, ಹಾಲಪ್ಪ ಕುರಿ, ಶರಣಪ್ಪ ಆಳವಿನ, ಶೇಖಪ್ಪ ಗಾಂಜಿ, ನಾನಾಸಾಬ ದೊಡ್ಡಮನಿ, ಮಾಬುಸಾಬ ಶಿರಹಟ್ಟಿ, ಯಲ್ಲಪ್ಪ ಅಣ್ಣಿಗೇರಿ, ರಾಯಪ್ಪ ತಿಮ್ಮಾಪುರ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಇದ್ದರು. ಎನ್.ಎಚ್. ಗುಡ್ಡದ ನಿರೂಪಿಸಿದರು. ಖ್ಯಾತ ಕಲಾವಿದ ನಿಂಗಪ್ಪ ಗುಡ್ಡದ ಸ್ವಾಗತಿಸಿದರು.ನಾಳೆ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ಗದಗ: ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಹಡಪದ ಅಪ್ಪಣ್ಣನವರ ಜಯಂತಿಯನ್ನು ಜು. 29ರಂದು ಬುಧವಾರ ಬೆಳಗ್ಗೆ 11ಕ್ಕೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ವಿಧಾನಪರಿಷಥ್ ಸಭಾಪತಿ ಬಸವರಾಜ ಹೊರಟ್ಟಿ ಘನ ಉಪಸ್ಥಿತಿ ವಹಿಸಲಿದ್ದು, ಶಾಸಕ ಎಚ್.ಕೆ. ಪಾಟೀಲ ಉದ್ಘಾಟನೆ ಹಾಗೂ ಅಧ್ಯಕ್ಷತೆ ವಹಿಸುವರು. ಸಾಹಿತಿ ಎ.ವಿ. ಪ್ರಭು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಾಸಕರಾದ ಸಲೀಂ ಅಹ್ಮದ್, ಜಿ.ಎಸ್. ಪಾಟೀಲ, ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ಸಂಸದ ಬಸವರಾಜ ಬೊಮ್ಮಾಯಿ, ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ ಇತರರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.