ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಸಮಾಜದಲ್ಲಿ ಗುರುತಿಸಲ್ಪಡುವ ವ್ಯಕ್ತಿಯಾಗಿ ಬೆಳೆಯಬೇಕು.
ಯಲಬುರ್ಗಾ: ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಇದೆ. ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ,ದಬ್ಬಾಳಿಕೆ ತಡೆಯಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಬಳ್ಳಾರಿಯ ಪ್ರಾಧ್ಯಾಪಕಿ ಗಾಯತ್ರಿ ಭಾವಿಕಟ್ಟಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಸಮಾಜದಲ್ಲಿ ಗುರುತಿಸಲ್ಪಡುವ ವ್ಯಕ್ತಿಯಾಗಿ ಬೆಳೆಯಬೇಕು.ಅಂದಾಗ ಮಾತ್ರ ಸಮಾಜ ನಮ್ಮನ್ನು ನೋಡುತ್ತದೆ. ಸಾಕಷ್ಟು ಮಹಿಳೆಯರು ಉನ್ನತ ಸ್ಥಾನದಲ್ಲಿ ತಮ್ಮ ಅಧಿಕಾರ ನಡೆಸಿ, ದೇಶಕ್ಕೆ ಪ್ರರೇಣೆಯಾಗಿದ್ದಾರೆ. ಸಂವಿಧಾನದಲ್ಲಿ ಮಹಿಳೆಯರಿಗೆ ವಿಶೇಷವಾದ ಹಕ್ಕು,ಸ್ಥಾನಮಾನ ನೀಡಿದೆ. ಸಮ ಸಮಾಜ ನಿರ್ಮಿಸಲು ಹೆಣ್ಣು ಮಕ್ಕಳು ಶಿಕ್ಷಣವಂತರಾಗಿ ದೇಶದ ಅತ್ಯುನ್ನತ ಸ್ಥಾನಕ್ಕೆ ಬಂದಾಗ ಮಾತ್ರ ಮಹಿಳೆಯರು ಸಬಲೀಕರಣವಾಗಲೂ ಸಾಧ್ಯ. ಅನ್ಯಾಯ ಕಂಡು ಬಂದರೆ ಪ್ರತಿಭಟಿಸುವ ಮನೋಭಾವನೆ ಬೆಳಸಿಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ ಲಕ್ಷ್ಮೀ ಮಹಾಂತೇಶ ಚಲವಾದಿ ಮಾತನಾಡಿ, ದೇಶದ ಪ್ರಗತಿಯಲ್ಲಿ ಮಹಿಳೆಯರು ತಮ್ಮದೇ ಕೊಡುಗೆ ನೀಡಿದ್ದಾರೆ. ಅನೇಕ ಮಹಿಳೆಯರು ನಮಗೆ ದಾರಿದೀಪವಾಗಿದ್ದಾರೆ.ಅವರ ಸಾಧನೆಯ ಹಾದಿಯಲ್ಲಿ ಎಲ್ಲರೂ ಸಾಗಬೇಕು ಎಂದರು.ಪ್ರಾಚಾರ್ಯ ಕೆ.ಎಚ್. ಛತ್ರದ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಾಧ್ಯಾಪಕ ಡಾ.ನಂದಾ, ಲಕ್ಷ್ಮೀ ಬಾಯಿ, ಬಿ.ಶಶಿಕುಮಾರ್, ಅಶೋಕ ಕೆಂಚರಡ್ಡಿ, ಶಂಕರಯ್ಯ, ಶಿಲ್ಪಾ, ಶಿವಲೀಲಾ ಹಾಗೂ ಉಪನ್ಯಾಸಕರು,ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೆ ವೇಳೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.