ಸಾರಾಂಶ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿನ ಗ್ರಾಮ ಪಂಚಾಯ್ತಿಗಳ ಕಾರ್ಯ ಸಾಕಷ್ಟು ಸುಧಾರಿಸಿದೆ. ಆಡಳಿತ ನಡೆಸುತ್ತಿರುವವರಿಗೆ ಜನರು ಸಹಕರಿಸಿದಾಗ ಇಂತಹ ಸಾಧನೆ ಸಾಧ್ಯ ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗಾಮೀಣ ಭಾಗದ ಅಭಿವೃದ್ಧಿಗಾಗಿ ಎಲ್ಲರೂ ಏಕಮುಖವಾಗಿ ಗ್ರಾಮ ಪಂಚಾಯ್ತಿ ಜೊತೆ ಕೈ ಜೋಡಿಸಿ ನಡೆಯಬೇಕು. ಈ ಸ್ಥಳೀಯ ಆಡಳಿತ ವ್ಯವಸ್ಥೆ ಜನರಿಗೆ ಸದಾ ಸ್ಪಂದಿಸ ಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ತಿಳಿಸಿದರು.ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನಲ್ಲಿ ನೂತನ ಗ್ರಾಮ ಪಂಚಾಯತಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿದ್ಯೆ ಕಡಿಮೆ ಇರುವ ಗ್ರಾಮೀಣ ಜನರಿಗೆ ಇಂದಿನ ಆಗುಹೋಗುಗಳ ಬಗ್ಗೆ ತಿಳಿ ಹೇಳಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸುವ ಕೆಲಸ ಗ್ರಾಮ ಪಂಚಾಯ್ತಿಗಳಿಂದ ಆಗಬೇಕಿದೆ ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿನ ಗ್ರಾಮ ಪಂಚಾಯ್ತಿಗಳ ಕಾರ್ಯ ಸಾಕಷ್ಟು ಸುಧಾರಿಸಿದೆ. ಕೆಲವೇ ಕೆಲವು ಮಾದರಿ ಗ್ರಾಮ ಪಂಚಾಯ್ತಿಗಳಲ್ಲಿ ಕೋಟೆಗಂಗೂರಿನ ಗ್ರಾಮ ಪಂಚಾಯ್ತಿಯೂ ಸೇರಿರುವುದು ಸಂತಸದ ವಿಷಯ. ಆಡಳಿತ ನಡೆಸುತ್ತಿರುವವರಿಗೆ ಜನರು ಸಹಕರಿಸಿದಾಗ ಇಂತಹ ಸಾಧನೆ ಸಾಧ್ಯ ಎಂದರು.ಗ್ರಾ.ಪಂ. ಅಧ್ಯಕ್ಷ ಡಾ.ಡಿ. ಬಿ.ವಿಜಯಕುಮಾರ್ ಮಾತನಾಡಿ, ನಮ್ಮ ಆಡಳಿತ ವ್ಯವಸ್ಥೆ ಪಾರದರ್ಶಕ ಹಾಗೂ ಗುಣಮಟ್ಟದಿಂದ ಕೂಡಿರಲು ಈಗಿನ ಸದಸ್ಯರೇ ಕಾರಣ. ಇರುವ ಅಧಿಕಾರದ ದಿನಗಳಲ್ಲಿ ಒಂದಿಷ್ಟು ಜನಾನುರಾಗಿ ಹಾಗೂ ನೆನಪಿನಲ್ಲಿ ಉಳಿಯುವ ಕಾರ್ಯಗಳನ್ನು ಮಾಡಲು ನಿರ್ಧರಿಸಿದ್ದು, ಈ ವ್ಯಾಪ್ತಿಯ ಎಲ್ಲಾ ಜನ ಸಹಕರಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಸಹಾಯಕ ನಿರ್ದೇಶಕ ರವಿ ರಾಮಚಂದ್ರ, ಎಸ್.ಲೋಹಿತ್, ವ್ಯವಸ್ಥಾಪಕರಾದ ಪ್ರವೀಣ್, ಸಹಾಯಕ ತೋಟಗಾರಿಕ ಅಧಿಕಾರಿ ನಾಗಭೂಷಣ್, ಉಪಾಧ್ಯಕ್ಷರಾದ ರೇಖಾ ಬಾಯಿ, ಸದಸ್ಯರಾದ ಮಂಜುನಾಥ್, ಕವಿತಾ ಬಾಯಿ, ಕಮಲೀಬಾಯಿ, ಎನ್.ದೂದ್ಯಾನಾಯ್ಕ್, ಶಾಂತಿಬಾಯಿ, ನಾಗಮ್ಮ, ಮಾಲತೇಶ್,ಪಿಡಿಒ ಎಚ್.ಶಿವಕುಮಾರ್, ಕಾರ್ಯದರ್ಶಿ ಸೀತಾನಾಯ್ಕ್ , ಸಂತೋಷ್, ಮೋಹನ್ ಮತ್ತಿತರರು ಇದ್ದರು.