ಜೋಶಿ ದಾಖಲೆಯೋ, ಅಸೂಟಿಯೋ!

| Published : Jun 04 2024, 12:31 AM IST

ಸಾರಾಂಶ

ಈ ಬಾರಿ ಪ್ರಹ್ಲಾದ ಜೋಶಿ ಐದನೇ ಬಾರಿಗೆ ಆಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಜೋಶಿ ಅವರಿಗೆ ಯುವ ರಾಜಕಾರಣಿ ಕಾಂಗ್ರೆಸ್ಸಿನ ವಿನೋದ ಅಸೂಟಿ ಭಾರೀ ಸ್ಪರ್ಧೆಯೊಡ್ಡಿದ್ದಾರೆ. ಕ್ಷೇತ್ರದಲ್ಲಿ ಯಾರೊಬ್ಬರೂ ಐದು ಬಾರಿ ಗೆದ್ದಿದ್ಲಿಲ.

ಧಾರವಾಡ:

ಮೇ 7ರಂದು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದಾಖಲೆಯ ಜಯ ಸಾಧಿಸುವರೇ ಅಥವಾ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಐತಿಹಾಸಿಕ ಜಯ ದಾಖಲಿಸುವರೇ ಎಂಬ ಕುತೂಹಲ ಹುಟ್ಟಿಸಿದೆ.

ಮಂಗಳವಾರ ಬೆಳಗ್ಗೆ 8ರಿಂದ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲ್‌ಗಳಂತೆ ಒಟ್ಟು 112 ಟೇಬಲ್ ವ್ಯವಸ್ಥೆ ಮಾಡಲಾಗಿದೆ. 20 ಸುತ್ತು ಮತ ಎಣಿಕೆ ಕಾರ್ಯಕ್ಕೆ ಒಟ್ಟು 432 ಸಿಬ್ಬಂದಿ ನಿಯೋಜಿಸಲಾಗಿದೆ. ಮಧ್ಯಾಹ್ನ 12ರ ಹೊತ್ತಿಗೆ ಫಲಿತಾಂಶ ಗೊತ್ತಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ. ಇನ್ನು, ಈ ಕ್ಷೇತ್ರಕ್ಕೆ ಒಟ್ಟು 17 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮೇ 7ರಂದು ನಡೆದ ಮತದಾನದಲ್ಲಿ 18,31,976 ಮತದಾರರ ಪೈಕಿ 13,62,421 ಮತದಾರರು ಮತ ಚಲಾಯಿಸಿದ್ದರು. ಕಳೆದ ಬಾರಿ ಶೇ. 70.12ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ. 74.37ರಷ್ಟಾಗಿತ್ತು ಎಂಬುದನ್ನು ಸ್ಮರಿಸಬಹುದು.

ಏನೇನು ವ್ಯವಸ್ಥೆ:

ಧಾರವಾಡ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕಾರಣ ಮತ ಎಣಿಕೆಯ ದಿನ ಯಾವುದೇ ಗದ್ದಲ-ಗೊಂದಲ ಉಂಟಾಗದಂತೆ ಪೊಲೀಸ್‌ ಇಲಾಖೆ ಕಟ್ಟೆಚ್ಚರ ವಹಿಸಿದೆ. ಕ್ಷೇತ್ರದಲ್ಲಿ ಈಗಾಗಲೇ ಮದ್ಯ ಮಾರಾಟ ನಿಷೇಧಿಸಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನೂ, ಮತ ಎಣಿಕಾ ಕೇಂದ್ರದ ಸುತ್ತಲೂ ಪಟಾಕಿ, ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಆರ್‌ಪಿಎಫ್‌, ಕೆಎಸ್‌ಆರ್‌ಪಿ, ಗೃಹ ರಕ್ಷಕದಳ, ಸ್ಥಳೀಯ ಪೊಲೀಸ್‌ ಅಧಿಕಾರಿ ಸೇರಿ 650 ಸಿಬ್ಬಂದಿ ನೇಮಿಸಲಾಗಿದೆ. ಅಭ್ಯರ್ಥಿಗಳ ಎಜೆಂಟರು ಸೇರಿದಂತೆ ಪ್ರತಿಯೊಬ್ಬ ಸಿಬ್ಬಂದಿಗೂ ಪಾಸ್‌ ನೀಡಿದ್ದು ಪಾಸ್‌ ಇದ್ದವರಿಗೆ ಮಾತ್ರ ಆವರಣ ಪ್ರವೇಶ ನೀಡಲಾಗುವುದು. ಮತ ಎಣಿಕಾ ಕೇಂದ್ರದಲ್ಲಿ ಮೊಬೈಲ್‌ ಸಹ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದರು.

ಕ್ಷೇತ್ರದಲ್ಲಿ ಅರಳಿದ ಕಮಲ:

ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಧಾರವಾಡ ಉತ್ತರ ಕ್ಷೇತ್ರ ಪುನರ್‌ ವಿಂಗಡನೆ ನಂತರ ಧಾರವಾಡ ಲೋಕಸಭಾ ಕ್ಷೇತ್ರವಾಗಿ ಮರುನಾಮಕರಣವಾಯಿತು. ಧಾರವಾಡ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ ಧಾರವಾಡ ಕೇಂದ್ರ, ಕುಂದಗೋಳ, ಕಲಘಟಗಿ, ನವಲಗುಂದ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಮೊದಲಿನಿಂದಲೂ ಕಾಂಗ್ರೆಸ್ಸಿಗೇ ಗೆಲುವು ನೀಡುತ್ತಾ ಬಂದಿದ್ದ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ 1996ರಲ್ಲಿ ಬಿಜೆಪಿಯ ಕಮಲ ಅರಳಿ ನಿಂತಿತು. ವಿಜಯ ಸಂಕೇಶ್ವರ ಅವರೇ ಈ ಕ್ಷೇತ್ರದ ಮೊದಲ ಬಿಜೆಪಿ ಸಂಸದ. ಬಳಿಕ 1998 ಮತ್ತು 1999ರಲ್ಲಿ ಅವರೇ ಆಯ್ಕೆಯಾದರು. ನಂತರ 2004ರಲ್ಲಿ ಬಿಜೆಪಿ ಪ್ರಹ್ಲಾದ ಜೋಶಿ ಅವರನ್ನು ಕಣಕ್ಕಿಳಿಸಿ ಗೆಲವು ಕಂಡಿತು. ಈ ಗೆಲುವು ಮತ್ತೆ 2009, 2014 ಮತ್ತು 2019 ರಲ್ಲಿಯೂ ಮುಂದುವರಿಯಿತು. ಹೀಗಾಗಿ ಕಳೆದ ಏಳು ಚುನಾವಣೆಗಳಲ್ಲಿ ಇಲ್ಲಿ ಬಿಜೆಪಿಯದ್ದೇ ಕಾರುಬಾರು ನಡೆಯುತ್ತಿದೆ.

ಜಾತಿ ನಡೆದಿಲ್ಲ:

ಈ ಬಾರಿ ಪ್ರಹ್ಲಾದ ಜೋಶಿ ಐದನೇ ಬಾರಿಗೆ ಆಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಜೋಶಿ ಅವರಿಗೆ ಯುವ ರಾಜಕಾರಣಿ ಕಾಂಗ್ರೆಸ್ಸಿನ ವಿನೋದ ಅಸೂಟಿ ಭಾರೀ ಸ್ಪರ್ಧೆಯೊಡ್ಡಿದ್ದಾರೆ. ಕ್ಷೇತ್ರದಲ್ಲಿ ಯಾರೊಬ್ಬರೂ ಐದು ಬಾರಿ ಗೆದ್ದಿದ್ಲಿಲ. ಈ ಬಾರಿ ಜೋಶಿ ಗೆದ್ದರೆ ಅದು ಈ ಕ್ಷೇತ್ರದಲ್ಲಿ ದಾಖಲೆಯ ಗೆಲುವು ಹೌದು. ಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಆಗಿದ್ದರೂ ಜಾತಿ ಲೆಕ್ಕಾಚಾರ ನಡೆದಿಲ್ಲ. ಹೀಗಾಗಿಯೇ ಬಿಜೆಪಿಯ ಬ್ರಾಹ್ಮಣ ಅಭ್ಯರ್ಥಿ ಕಳೆದ ನಾಲ್ಕು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಈ ಬಾರಿ ಜೋಶಿ ವಿರುದ್ಧ ಕೆಲವು ತಂತ್ರಗಾರಿಕೆಗಳು ನಡೆದಿದ್ದು ಅವುಗಳು ಜೋಶಿ ಗೆಲವು-ಸೋಲಿನ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿವೆ ಕಾದು ನೋಡಬೇಕಿದೆ. ಕುರುಬ ಸಮಾಜದ ವಿನೋದ ಅಸೂಟಿ ಮೊದಲ ಬಾರಿಗೆ ನಿಂತಿದ್ದರೂ ಜೋಶಿ ಅವರಿಗೆ ಭಾರೀ ಪೈಪೋಟಿ ನೀಡಿದ್ದಾರೆ. ಅಲ್ಲದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಕೂಡ ಒಗ್ಗಟ್ಟಾಗಿ ಕೆಲಸ ಮಾಡಿದ್ದು ಮತ್ತೊಂದು ವಿಶೇಷ.

ಒಟ್ಟಾರೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆದಿದ್ದು, ಐದನೇ ಬಾರಿ ಜೋಶಿ ಆಯ್ಕೆಯಾದರೆ ಅದು ದಾಖಲೆ ಆಗಲಿದೆ. ಒಂದು ವೇಳೆ ಕಾಂಗ್ರೆಸ್ ನ ವಿನೋದ ಅಸೂಟಿ ಗೆದ್ದರೆ ಅದು ಇತಿಹಾಸವಾಗಲಿದೆ. ಮತದಾರ ಪ್ರಭು ಯಾರ ಕೊರಳಿಗೆ ಮಾಲೆ ಹಾಕುತ್ತಾನೆ ಎನ್ನುವುದು ಮಾತ್ರ ಮಂಗಳವಾರದ ಮಧ್ಯಾಹ್ನ ಹೊತ್ತಿಗೆ ಜಗತ್‌ ಜಾಹೀರ ಆಗಲಿದೆ.