ಪತ್ರಕರ್ತರು ತಂತ್ರಜ್ಞಾನ ಬಳಸಲಿ: ಅಜ್ಜಮಾಡ ರಮೇಶ್ ಕುಟ್ಟಪ್ಪ

| Published : Jun 19 2025, 11:50 PM IST

ಪತ್ರಕರ್ತರು ತಂತ್ರಜ್ಞಾನ ಬಳಸಲಿ: ಅಜ್ಜಮಾಡ ರಮೇಶ್ ಕುಟ್ಟಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಮತ್ತು ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಸ್ಮರಣ ಸಂಚಿಕೆ ಬೆಳ್ಳಿ ಪಯಣ ಬಿಡುಗಡೆ ಸಮಾರಂಭ ನಡೆಯಿತು.

ಕುಶಾಲನಗರ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಸ್ಮರಣ ಸಂಚಿಕೆ ಬಿಡುಗಡೆ

ಕನ್ನಡಪ್ರಭ ವಾರ್ತೆ ಕುಶಾಲನಗರಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಪತ್ರಕರ್ತರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹೇಳಿದರು.

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಮತ್ತು ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಸ್ಮರಣ ಸಂಚಿಕೆ ಬೆಳ್ಳಿ ಪಯಣ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾಂಪ್ರದಾಯಿಕ ಮಾಧ್ಯಮಗಳ ಮೇಲೆ ಇಂದಿಗೂ ಓದುಗರು ವಿಶ್ವಾಸ ಇಟ್ಟುಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ವರದಿಗಳು ಹೆಚ್ಚು ಜನರಿಗೆ ತಲುಪುತ್ತಿದೆ. ಮಾಧ್ಯಮದಲ್ಲಿನ ಕೆಲಸ ಸವಾಲಿನಿಂದ ಕೂಡಿದೆ. ಪರಿಣಾಮಕಾರಿ ವರದಿಗೆ ಪತ್ರಕರ್ತರು ನಿರಂತರವಾಗಿ ಪ್ರಯತ್ನಿಸಬೇಕು. ಮಾಧ್ಯಮದವರು ಆಧುನಿಕ ತಂತ್ರಜ್ಞಾನ ರೂಢಿಸಿಕೊಳ್ಳಬೇಕು. ಮಾಧ್ಯಮಗಳು ಸಮಾಜದ ಪ್ರತಿಬಿಂಬ ಆಗಿರುವುದರಿಂದ ತಪ್ಪುಗಳಿದ್ದರೆ ಪ್ರಶ್ನೆ ಮಾಡಬೇಕು. ಪ್ರಚಾರ ಬಯಸುವವರ ಬೆನ್ನು ಹತ್ತುವ ಬದಲು ಸಮಾಜಕ್ಕೆ ಉಪಯೋಗ ಆಗುವ ವರದಿ ಮಾಡಬೇಕು. ವರದಿ ಮಾಡಿದ ವಿಷಯಗಳನ್ನು ವರದಿಗಾರ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಮಾಧ್ಯಮಗಳು ಹೆಚ್ಚು ವಿಶ್ವಾಸಾರ್ಹವಾಗುವ ರೀತಿಯಲ್ಲಿ ವರದಿಗಳು ಬರುವಂತೆ ವರದಿಗಾರರ ವರದಿ ಇರಬೇಕು. ಬದಲಾವಣೆಗಳಿಗೆ ಎಲ್ಲಾ ತಲೆಮಾರುಗಳು ಹೊಂದಿಕೊಳ್ಳಲು ಸಾಧ್ಯವಿಲ್ಲ. ಮಾಧ್ಯಮದವರಿಂದ ಸಮಾಜ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುತ್ತದೆ ಎಂದರು.ಬೆಳ್ಳಿಪಯಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಶಕ್ತಿ ದಿನಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಮನುಷ್ಯನಿಗೆ ವಯಸ್ಸಾದಂತೆ ಮಾಗುತ್ತಾ ಹೋಗುತ್ತಾನೆ. ಆದರೆ ಸಂಘಟನೆಗಳು ಹಳೆಯದಾದಷ್ಟು ಗಟ್ಟಿಗೊಳ್ಳುತ್ತವೆ. ಪತ್ರಕರ್ತ ಸಂಘಟನೆಗಳು ಹೆಚ್ಚು ಶಕ್ತಿಯುತವಾಗಬೇಕು. ಸದಸ್ಯತ್ವ ಕೊಡುವಾಗ ನೈಜ ಪತ್ರಕರ್ತರಿಗೆ ಮಾತ್ರ ಅವಕಾಶ ಕೊಡಬೇಕು ಎಂದರಲ್ಲದೆ, ಮಡಿಕೇರಿ ಮಾದರಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲೂ ಪ್ಲಾಸ್ಟಿಕ್ ಬಾಟಲಿಗಳ ನಿಷೇಧಕ್ಕೆ ಸ್ಥಳೀಯ ಪತ್ರಕರ್ತರು ಸಂಬಂಧಿಸಿದವರ ಜತೆ ವ್ಯವಹರಿಸಿ ಕಾರ್ಯರೂಪಕ್ಕೆ ತರುವಂತಾಗಬೇಕು ಎಂದು ಹೇಳಿದರು.ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಿದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಿಕೋದ್ಯಮದ ಬದುಕು ಕಬ್ಬಿಣದ ಕಡಲೆ ಇದ್ದಂತೆ. ಈಗಿನ ಪತ್ರಕರ್ತರಲ್ಲಿ ವರದಿಗಾರಿಕೆಯ ಆಸಕ್ತಿ ಕಡಿಮೆ ಆಗುತ್ತಿದೆ. ಸುದ್ದಿ ಮಾಡಿದ ನಂತರ ಫಾಲೋ ಅಪ್ ಇರಬೇಕು. ತನಿಖಾ ವರದಿಗಳು ತಾರ್ಕಿಕ ಅಂತ್ಯಕ್ಕೆ ತಲುಪಿಸುವ ಬದ್ಧತೆ ಇರಬೇಕು ಎಂದರು.ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಜಿಲ್ಲಾ ಸಂಘದ ಖಜಾಂಚಿ ಆನಂದ್ ಕೊಡಗು, ಪತ್ರಕರ್ತರ ರಾಷ್ಟ್ರೀಯ ಮಂಡಳಿ ಸದಸ್ಯ ಸುನಿಲ್ ಪೊನ್ನೇಟಿ ವೇದಿಕೆಯಲ್ಲಿದ್ದರು.ಖಜಾಂಚಿ ಕುಡೆಕಲ್ಲು ಗಣೇಶ್ ಪ್ರಾರ್ಥಿಸಿದರು. ಕಾರ್ಯದರ್ಶಿ ನಾಗರಾಜ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸಂಘದ ನಿರ್ದೇಶಕ ಟಿ.ಆರ್. ಪ್ರಭುದೇವ್ ಕಾರ್ಯಕ್ರಮ ನಿರೂಪಿಸಿದರು. ರಘು ಹೆಬ್ಬಾಲೆ ವಂದಿಸಿದರು.ಇದಕ್ಕೂ ಮೊದಲು ಎಂ.ಎನ್. ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಬಿ.ಆರ್. ಸವಿತಾ ರೈ, ರಾಷ್ಟ್ರೀಯ ಮಂಡಳಿ ಸದಸ್ಯ ಸುನಿಲ್ ಪೊನ್ನೇಟಿ, ಜಿಲ್ಲಾ ಸಂಘದ ವೀಕ್ಷಕ ಆನಂದ್ ಕೊಡಗು, ಕುಶಾಲನಗರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಇದ್ದರು.=====ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ

ಪತ್ರಕರ್ತೆ ವನಿತಾ ಚಂದ್ರಮೋಹನ್ ಅವರ ತಾಯಿ ಅಯಿನಮಂಡ ಲೀಲಾವತಿ ಗಣಪತಿ ಅವರು ತಮ್ಮ ಪತಿ ದಿ. ಅಯಿನಮಂಡ ಗಣಪತಿ ಅವರ ಸ್ಮರಣಾರ್ಥ ಅತ್ಯುತ್ತಮವಾದ ಮಾನವೀಯ ವರದಿಗಾಗಿ ಶಕ್ತಿ ವರದಿಗಾರ ಕೆ.ಕೆ. ನಾಗರಾಜ ಶೆಟ್ಟಿ, ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರ ತಂದೆ, ತಾಯಿ ಎಂ. ನಾರಾಯಣ ಮತ್ತು ಎನ್. ಪದ್ಮಾವತಿ ದಂಪತಿ ಸ್ಮರಣಾರ್ಥ ಅತ್ಯುತ್ತಮ ತನಿಖಾ ವರದಿಗೆ ಚಂದ್ರಮೋಹನ್, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸ್ಥಾಪಿಸಿದ ಅತ್ಯುತ್ತಮ ರಾಜಕೀಯ ವರದಿಗೆ ಜಯಪ್ರಕಾಶ್, ಕುಶಾಲನಗರದ ಶಾರದಾ ಪತ್ತಿನ ಸಹಕಾರ ಸಂಘದ ವತಿಯಿಂದ ನೀಡಲಾಗುವ ಅತ್ಯುತ್ತಮ ಸಹಕಾರ ಸಂಘ ಬಗ್ಗೆ ವರದಿಗೆ ಕೆ.ಬಿ. ಸಂಶುದ್ದೀನ್, ಪತ್ರಕರ್ತ ಟಿ.ಆರ್. ಪ್ರಭುದೇವ್ ಅವರ ತಂದೆ ದಿ. ಎನ್. ರಾಮಕೃಷ್ಣ ಮತ್ತು ತಾಯಿ ದಿ. ಕೆ.ಎಂ. ಸರಸಮ್ಮ ಅವರ ಸ್ಮರಣಾರ್ಥ ಸ್ಥಾಪಿಸಿರುವ ನೊಂದವರ ಪರ ವರದಿಗೆ ಟಿ.ಆರ್.ಪ್ರಭುದೇವ್, ಪತ್ರಕರ್ತ ಕೆ.ಬಿ. ಸಂಶುದ್ದಿನ್ ಅವರು ತಮ್ಮ ತಾಯಿ ದಿ.ಕೆ.ಕೆ.ಖತೀಜ ಅವರ ಸ್ಮರಣಾರ್ಥ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ವಿನೋದ್, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಳಲಗದ್ದೆ ನಳಂದ ಆಯುರ್ವೇದ ನ್ಯಾಸದ ಖ್ಯಾತ ಪಾರಂಪರಿಕ ವೈದ್ಯೆ ಸುಮನ ಮಳಲಗದ್ದೆ ಅವರು ಸ್ಥಾಪಿಸಿದ ಪಾರಂಪರಿಕ ನಾಟಿ ವೈದ್ಯ ವರದಿ ಪ್ರಶಸ್ತಿಗೆ ಚೈತನ್ಯ ಚಂದ್ರಮೋಹನ್, ಪತ್ರಕರ್ತ ಕುಡೆಕಲ್ ಗಣೇಶ್ ಅವರ ತಂದೆ ಕುಡೆಕಲ್ ಕೃಷ್ಣಪ್ಪ ಹಾಗೂ ತಾಯಿ ಯಶೋದಾ ಅವರ ಜ್ಞಾಪಕಾರ್ಥ ಸ್ಥಾಪಿತ ದೃಶ್ಯ ವಾಹಿನಿಯ ಸಾಮಾಜಿಕ ಕಳಕಳಿಯ ವರದಿಗೆ ಕೆ.ಜೆ. ಶಿವರಾಜ್ ಪಾತ್ರರಾಗಿದ್ದು, ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.