ಜೆಎಸ್ಡಬ್ಲು ಫೌಂಡೇಶನ್ ತಾಲೂಕಿನ ೧೦ ಆಯ್ದ ಗ್ರಾಮಗಳಲ್ಲಿ ೩೦೦ ರೈತರಿಗೆ ಸಮಗ್ರ ಕೃಷಿಗೆ ಉತ್ತೇಜನ ನೀಡುತ್ತಿದೆ.
ಸಂಡೂರು: ತಾಲೂಕಿನ ತಾಳೂರು ಗ್ರಾಮದಲ್ಲಿ ಶನಿವಾರ ಜೆಎಸ್ಡಬ್ಲು ಫೌಂಡೇಶನ್ ವತಿಯಿಂದ ರೈತರ ದಿನಾಚರಣೆ ಹಾಗೂ ಮಾದರಿ ತೋಟದ ಪ್ರಾತ್ಯಕ್ಷಿಕೆ, ಕ್ಷೇತ್ರ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆಎಸ್ಡಬ್ಲು ಫೌಂಡೇಶನ್ ಸೌಥ್ ಝೋನಲ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ, ಜೆಎಸ್ಡಬ್ಲು ಫೌಂಡೇಶನ್ ತಾಲೂಕಿನ ೧೦ ಆಯ್ದ ಗ್ರಾಮಗಳಲ್ಲಿ ೩೦೦ ರೈತರಿಗೆ ಸಮಗ್ರ ಕೃಷಿಗೆ ಉತ್ತೇಜನ ನೀಡುತ್ತಿದೆ. ಈಗಾಗಲೆ ಎಲ್ಲರಿಗೂ ಪ್ರಾಥಮಿಕ ಹಂತದ ತರಬೇತಿ ನೀಡಲಾಗಿದೆ. ಮುಂದಿನ ವಾರ ಮಣ್ಣು ಪರೀಕ್ಷೆ, ಜೈವಿಕ ರಸಗೊಬ್ಬರ ಮತ್ತು ತರಕಾರಿ ಬೀಜಗಳ ವಿತರಣೆ, ಎರೆಹುಳು ಸಮೇತ ಎರೆಹುಳು ತೊಟ್ಟಿ ಚೀಲ ೨೦ ಗಿರಿರಾಜ ತಳಿಯ ದೇಶಿ ಕೋಳಿ ಮರಿಗಳ ವಿತರಣೆ ಹಾಗೂ ೧ ರಿಂದ ೨ ಎಕರೆಗೆ ಪ್ರತಿ ರೈತರಿಗೆ ಅವಶ್ಯವಿರುವ ಗಿಡಗಳನ್ನು ಮತ್ತು ತರಬೇತಿಯನ್ನು ಉಚಿತವಾಗಿ ನೀಡಲಿದ್ದೇವೆ. ರೈತರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅನುಕೂಲ ಪಡೆದುಕೊಳ್ಳಬೇಕು ಎಂದರು.ಹಗರಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಪಾಲಯ್ಯ ಮತ್ತು ಡಾ. ರವಿ ಸಮಗ್ರ ಕೃಷಿ ಪದ್ಧತಿ, ಮಣ್ಣು ಮತ್ತು ಮಳೆ ನೀರಿನ ಸದುಪಯೋಗ, ಕೀಟ ನಿರ್ವಹಣೆ, ಆಧುನಿಕ ಕೃಷಿ ಪದ್ಧತಿಗಳು ಮತ್ತು ಸಂಡೂರು ಭಾಗದಲ್ಲಿನ ಬೆಳೆಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಿದರು. ಇಫ್ಕೊ ಸಂಸ್ಥೆಯ ಬಳ್ಳಾರಿಯ ವ್ಯವಸ್ಥಾಪಕರಾದ ಹನುಮಂತಪ್ಪ ಅವರು ಬೆಳೆಗಳ ಪ್ರತಿ ಪ್ಲಾಟ್ನ ವಿವರಗಳನ್ನು ಅಂದರೆ, ತಳಿ, ಒಟ್ಟು ಖರ್ಚು, ಒಟ್ಟು ಆದಾಯ ಮತ್ತು ಬೇಕಾದ ನಿರ್ವಹಣೆಯ ಕುರಿತು ರೈತರಿಗೆ ಮಾಹಿತಿ ನೀಡಿದರು.
ತಾಳೂರು ಗ್ರಾಮದ ಪ್ರಗತಿಪರ ರೈತ ವೀರೇಶ್ ಟಿ. ಅವರ ತೋಟದಲ್ಲಿ ಸಮಗ್ರ ಕೃಷಿ ಕುರಿತು ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜೆಎಸ್ಡಬ್ಲು ಫೌಂಡೇಶನ್ನ ಕೃಷಿ ಕಾರ್ಯಕ್ರಮಗಳನ್ನು ಮುನ್ನಡೆಸುವ ನಾಗನಗೌಡ, ಅನುಷ್ಠಾನ ಸಂಸ್ಥೆ ಸ್ಕೋಡ್ವೆಸ್ ಸಂಸ್ಥೆಯ ರಾಜ, ಗಂಗಾಧರ, ಸಿಬ್ಬಂದಿ, ಸಂಡೂರು ಭಾಗದ ಪ್ರಗತಿಪರ ರೈತರಾದ ಬಸಪ್ಪ ಹಾಗೂ ೧೦೦ಕ್ಕೂ ಹೆಚ್ಚು ಆಸಕ್ತ ರೈತರು ಭಾಗವಹಿಸಿದ್ದರು.