ಪ್ರಗತಿಪರ ರೈತ ಬಸಪ್ಪ ಅವರು ತಮ್ಮ ಸಮಗ್ರ ಕೃಷಿಯ ಕುರಿತು ರೈತರಿಗೆ ಮಾಹಿತಿ ನೀಡಿ, ೩೦ ವರ್ಷಗಳ ಪ್ರಯತ್ನದಿಂದ ನಾನು ಈ ತೋಟವನ್ನು ಅಭಿವೃದ್ಧಿ ಪಡಿಸಿದ್ದೇನೆ.

ಸಂಡೂರು: ಸುಸ್ಥಿತ ಮತ್ತು ಲಾಭದಾಯಕ ಕೃಷಿಯನ್ನು ಉತ್ತೇಜಿಸಲು ಜೆಎಸ್‌ಡಬ್ಲು ಫೌಂಡೇಶನ್ ಈಗಾಗಲೇ ಸಮಗ್ರ ಕೃಷಿ ಪದ್ಧತಿ ಯೋಜನೆ ರೂಪಿಸಿದೆ. ಯೋಜನೆಯ ಭಾಗವಾಗಿ ಫೌಂಡೇಶನ್‌ನಿಂದ ತಾಲೂಕಿನ ೧೦ ಗ್ರಾಮಗಳ ೩೦೦ ರೈತರಿಗೆ ಒಂದು ವಾರದಿಂದ ಸಮಗ್ರ ಕೃಷಿ ಅಧ್ಯಯನ ಪ್ರವಾಸ ಹಮ್ಮಿಕೊಂಡಿದ್ದು, ಇದರ ಸಮಾರೋಪ ಕಾರ್ಯಕ್ರಮ ಶನಿವಾರ ಪಟ್ಟಣದ ಹೊರವಲಯದಲ್ಲಿರುವ ಪ್ರಗತಿಪರ ರೈತ ಬಸಪ್ಪ ಅವರು ಮಾದರಿ ತೋಟದಲ್ಲಿ ಜರುಗಿತು.

ಪ್ರಗತಿಪರ ರೈತ ಬಸಪ್ಪ ಅವರು ತಮ್ಮ ಸಮಗ್ರ ಕೃಷಿಯ ಕುರಿತು ರೈತರಿಗೆ ಮಾಹಿತಿ ನೀಡಿ, ೩೦ ವರ್ಷಗಳ ಪ್ರಯತ್ನದಿಂದ ನಾನು ಈ ತೋಟವನ್ನು ಅಭಿವೃದ್ಧಿ ಪಡಿಸಿದ್ದೇನೆ. ತಮ್ಮ ತಂದೆಯಿಂದ ದೊರೆತ ಒಂದು ಎಕರೆ ಭೂಮಿಯಿಂದ ಪ್ರಾರಂಭಿಸಿ, ಇಂದು ಇದನ್ನು ೧೦ ಎಕರೆಗೆ ವಿಸ್ತರಿಸಿ, ತೋಟಗಾರಿಕೆ ನಡೆಸಿದ್ದೇನೆ. ತೋಟದಲ್ಲಿ ಅಡಿಕೆ, ಬಾಳೆ, ಸಪೋಟ, ಪೇರಲ, ವಿಳ್ಳೆದೆಲೆ, ಈರುಳ್ಳಿ ಮತ್ತು ವಿವಿಧ ತರಕಾರಿಗಳನ್ನು ಬೆಳೆಸಿ, ಉತ್ತಮ ಮತ್ತು ಸುಸ್ಥಿರ ಆದಾಯವನ್ನು ಗಳಿಸುತ್ತಿದ್ದೇನೆ ಎಂದರು.

ರೈತರು ಸಮಗ್ರ ಕೃಷಿ ವ್ಯವಸ್ಥೆ, ಕಠಿಣ ಪರಿಶ್ರಮ ಮತ್ತು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಲ್ಲಿ ನಿಯಮಿತವಾಗಿ ಸುಸ್ಥಿರವಾಗಿ ಆದಾಯವನ್ನು ಗಳಿಸಬಹುದು. ಜೆಎಸ್‌ಡಬ್ಲು ಫೌಂಡೇಶನ್‌ನ ಸಹಕಾರವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಫೌಂಡೇಶನ್ ದಕ್ಷಿಣ ವಲಯ ಮುಖ್ಯಸ್ಥ ಪೆದ್ದಣ್ಣ ಬೀಡಾಲ ಮಾತನಾಡಿ, ಕಳೆದ ವಾರದಲ್ಲಿ ಹೇಳಿದಂತೆ ಎಲ್ಲ ೩೦೦ ರೈತರಿಗೆ ಕಾಂಪೋಸ್ಟ್ ಬೆಡ್, ಮೂರು ವಿಧದ ಸಾವಯವ ಗೊಬ್ಬರ ಮತ್ತು ೧೨ ವಿಧದ ತರಕಾರಿ ಬೀಜಗಳನ್ನು ವಿತರಿಸಲಾಗಿದೆ. ಮುಂದೆಯೂ ಯೋಜನೆಯನ್ವಯ ಉಳಿದ ಸೌಲಭ್ಯಗಳನ್ನು ರೈತರಿಗೆ ಒದಗಿಸಲಾಗುವುದು. ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಉತ್ತಮ ಆದಾಯಗಳಿಸಬೇಕೆಂಬುದೇ ಫೌಂಡೇಶನ್ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಫೌಂಡೇಶನ್ ಕೃಷಿ ಕಾರ್ಯಕ್ರಮದ ಸಂಯೋಜಕ ನಾಗನಗೌಡ, ಸ್ಕೋಡ್‌ವೆಸ್ ಸಂಸ್ಥೆಯ ರಾಜಾ ಎನ್‌ಪಿ, ಗಂಗಾಧರ, ಇಫ್ಕೋ ಬಳ್ಳಾರಿ ವ್ಯವಸ್ಥಾಪಕ ಹಾಗೂ ಸಂಪನ್ಮೂಲ ವ್ಯಕ್ತಿಯಾದ ಹನುಮಂತಪ್ಪ, ಜಗದೀಶ್, ಕುಮಾರ್ ಮೇಟಿ, ಸ್ವಾತಿ, ಕೀರ್ತಿ, ತಾಳೂರು ಗ್ರಾಮದ ೩೦ ರೈತರು ಭಾಗವಹಿಸಿದ್ದರು.

ಜೆಎಸ್‌ಡಬ್ಲು ಫೌಂಡೇಶನ್‌ನಿಂದ ತಾಳೂರಿನ ೩೦ ರೈತರಿಗೆ ಶನಿವಾರ ಸಂಡೂರು ಹೊರವಲದಲ್ಲಿರುವ ಪ್ರಗತಿಪರ ರೈತ ಬಸಪ್ಪ ಅವರ ತೋಟದಲ್ಲಿ ಸಮಗ್ರ ಕೃಷಿಯ ಕುರಿತು ಮಾಹಿತಿ ನೀಡಲಾಯಿತು.