ಸಾರಾಂಶ
ಉಡುಪಿ ಧರ್ಮಪ್ರಾಂತ್ಯದಲ್ಲಿ 2025 ಸಾಮಾನ್ಯ ಜುಬಿಲಿ ವರ್ಷದ ಅಂಗವಾಗಿ ಸ್ವಂತ ಮನೆ ಇಲ್ಲದ ಕುಟುಂಬಕ್ಕೆ ಮನೆ ನಿರ್ಮಿಸುವ ವಿಶೇಷ ಯೋಜನೆಯ ಅಂಗವಾಗಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಚರ್ಚ್ ವ್ಯಾಪ್ತಿಯ ಬಡ ಕುಟುಂಬವೊಂದಕ್ಕೆ ನಿರ್ಮಿಸಲಾದ ‘ಆರ್ಕ್ ಆಫ್ ಹೋಪ್’ ಮನೆಯನ್ನು ಭಾನುವಾರ ಹಸ್ತಾಂತರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಲ್ಪೆ
ಉಡುಪಿ ಧರ್ಮಪ್ರಾಂತ್ಯದಲ್ಲಿ 2025 ಸಾಮಾನ್ಯ ಜುಬಿಲಿ ವರ್ಷದ ಅಂಗವಾಗಿ ಸ್ವಂತ ಮನೆ ಇಲ್ಲದ ಕುಟುಂಬಕ್ಕೆ ಮನೆ ನಿರ್ಮಿಸುವ ವಿಶೇಷ ಯೋಜನೆಯ ಅಂಗವಾಗಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಚರ್ಚ್ ವ್ಯಾಪ್ತಿಯ ಬಡ ಕುಟುಂಬವೊಂದಕ್ಕೆ ನಿರ್ಮಿಸಲಾದ ‘ಆರ್ಕ್ ಆಫ್ ಹೋಪ್’ ಮನೆಯನ್ನು ಭಾನುವಾರ ಹಸ್ತಾಂತರಿಸಲಾಯಿತು.ತೊಟ್ಟಂ ಚರ್ಚಿನ ವಿನೋದ್ ಮತ್ತು ಅಂಜೆಲಿನ್ ಪಿಂಟೊ ಕುಟುಂಬ ಸ್ವಂತ ಸೂರನ್ನು ಕಾಣಬೇಕು ಎಂಬ ಹಂಬಲವಿದ್ದರೂ ಕೂಡ ಆರ್ಥಿಕ ಸಮಸ್ಯೆಯಿಂದ ಅದು ಸಾಧ್ಯವಾಗಿರಲಿಲ್ಲ. ಈ ವೇಳೆ ಚರ್ಚಿನ ಧರ್ಮಗುರುಗಳಾದ ವಂ|ಡೆನಿಸ್ ಡೆಸಾ ಅವರ ನೇತೃತ್ವದಲ್ಲಿ ಪಾಲನಾ ಮಂಡಳಿ ಹಾಗೂ ದಾನಿಗಳ ನೆರವಿನೊಂದಿಗೆ 13 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಲಾಗಿದೆ.ಭಾನುವಾರ ಚರ್ಚಿನ ಧರ್ಮಗುರುಗಳಾದ ವಂ|ಡೆನಿಸ್ ಡೆಸಾ ಅವರು ನೂತನ ಮನೆಯನ್ನು ಆಶೀರ್ವಚನ ನೆರವೇರಿಸಿ ವಿನೋದ್ ಮತ್ತು ಅಂಜೆಲಿನ್ ಪಿಂಟೊ ಕುಟುಂಬಕ್ಕೆ ಹಸ್ತಾಂತರಿಸಿದರು.ಈ ವೇಳೆ ಮಾತನಾಡಿದ ಅವರು ಮಾನವನಿಗೆ ಒಂದು ಸ್ವಂತ ಮನೆಯಿದ್ದರೆ ನೆಮ್ಮದಿಯ ನಿದ್ದೆಯನ್ನು ಮಾಡಲು ಸಾಧ್ಯವಿದೆ. ಆದರೆ ಇಂದು ಎಷ್ಟೋ ಮಂದಿಗೆ ಜೀವಿಸಲು ಸ್ವಂತ ಮನೆ ಇಲ್ಲದೆ ಪರದಾಡುತ್ತಾರೆ. ಉಡುಪಿ ಧರ್ಮಪ್ರಾಂತ್ಯದಲ್ಲಿ 2025 ಜುಬಿಲಿ ವರ್ಷಾಚರಣೆಯ ಅಂಗವಾಗಿ ಧರ್ಮಾಧ್ಯಕ್ಷರು ಒಂದು ಹೊಸ ಯೋಜನೆ ಯನ್ನು ನೀಡಿದ್ದರು. ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ 52 ಚರ್ಚುಗಳಿದ್ದು ಪ್ರತಿಯೊಂದು ಚರ್ಚಿನಲ್ಲಿ ಮನೆ ಇಲ್ಲದ ಒಬ್ಬರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಅದರಂತೆ ಈ ಮನೆ ನಿರ್ಮಾಣಕ್ಕೆ ಚರ್ಚಿನ ಭಕ್ತಾದಿಗಳು, ಮೈಕಲ್ ಡಿಸೋಜಾ ಚಾರಿಟಿ ಟ್ರಸ್ಟ್ ನೆರವು ನೀಡಿದ್ದಾರೆ ಎಂದರು.ಮನೆ ನಿರ್ಮಾಣಕ್ಕೆ ಉಚಿತವಾಗಿ 5 ಸೆಂಟ್ಸ್ ಭೂಮಿ ನೀಡಿರುವ ತೋಮಸ್ - ವಲೇರಿಯಾನ ನೊರೊನ್ಹಾ ದಂಪತಿಯನ್ನು, ಎಂಜಿನಿಯರ್ ಎರೋಲ್, ಯೋಜನೆ ಸಾಕಾರಾಗೊಳ್ಳಲು ನೇತೃತ್ವ ವಹಿಸಿದ ಧರ್ಮಗುರುಗಳನ್ನು ಸನ್ಮಾನಿಸಲಾಯಿತು.ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ಸುಷ್ಮಾ, ಮೈಕಲ್ ಡಿಸೋಜಾ ಚಾರಿಟಿ ಟ್ರಸ್ಟ್ ನ ಸದಸ್ಯರಾದ ಸ್ಟೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಸಂತ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಉಡುಪಿ –ಕಲ್ಯಾಣಪುರ ವಲಯ ಪದಾಧಿಕಾರಿಗಳಾದ ವಿನ್ಸೆಂಟ್ ಕ್ವಾಡ್ರಸ್, ರಿಚ್ಚಾರ್ಡ್ ಡಿಸೋಜಾ, ತೊಟ್ಟಂ ಘಟಕದ ಅಧ್ಯಕ್ಷರಾದ ಸುಸಾನ್ನಾ ವಾಸ್, ಸಂತ ಸೆಬೆಸ್ಟಿಯನ್ ವಾರ್ಡ್ ನ ಗುರಿಕಾರರಾದ ರೊನಾಲ್ಡ್ ಫೆರ್ನಾಂಡಿಸ್, ಬಡಾನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಜೊಸೇಫ್ ಪಿಂಟೊ ಹಾಗೂ ಇತರರು ಉಪಸ್ಥಿತರಿದ್ದರು.ವಿನೋದ್ ಪಿಂಟೊ ಸ್ವಾಗತಿಸಿ, ವೆನಿಸ್ಸಾ ಪಿಂಟೊ ವಂದಿಸಿದರು ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿದರು.